ಬೆಂಗಳೂರು: ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇದೇ ಮೊದಲು ಮೊದಲು ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ನಗರದ ವಿ.ವಿ.ಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 59 ವರ್ಷದ ಸಹಾಯಕ ಸಬ್ ಇನ್ಸ್ಪೆಕ್ಟರ್ ಅವರು ಸೋಮವಾರ ಥಣಿಸಂದ್ರದಲ್ಲಿರುವ ತಮ್ಮ ನಿವಾಸದಲ್ಲೇ ದಿಢೀರ್ ಕುಸಿದು ಬಿದ್ದಿದ್ದರು.
ಕುಟುಂಬಸ್ಥರೇ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗ ಮಧ್ಯೆಯೇ ಅವರು ಅಸುನೀಗಿದ್ದರು. ಅವರ ಗಂಟಲಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ, ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಥಣಿಸಂದ್ರ ನಿವಾಸಿಯಾಗಿದ್ದ ಎಎಸ್ಐ, ನಿವೃತ್ತಿಯಾಗಲು 15 ದಿನವಷ್ಟೇ ಬಾಕಿ ಇತ್ತು. ಜೂನ್ 1ರಿಂದ ರಜೆ ಮೇಲಿದ್ದರು. ಅವರಿಗೆ ಸೋಂಕು ತಗುಲಿದ್ದು ಹೇಗೆ ಎಂಬುದು ಗೊತ್ತಾಗಿಲ್ಲ. ಅವರ ಸಂಪರ್ಕದಲ್ಲಿದ್ದ ಕುಟುಂಬಸ್ಥರು ಹಾಗೂ ಇತರನ್ನು ಕ್ವಾರಂಟೈನ್ ಮಾಡುವ ಕೆಲಸ ನಡೆದಿದೆ.