ಬೆಂಗಳೂರು: ಜನತಾದಳ ಪರಿವಾರದಿಂದ ಹೊರಗೆ ಹೋಗಿ ವಿವಿಧ ಪಕ್ಷಗಳಲ್ಲಿ ಸಕ್ರಿಯರಾಗಿರುವವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಸಾಧ್ಯವಿಲ್ಲ, ಕೆಲಸವಿಲ್ಲದೆ ಮನೆಯಲ್ಲಿ ಕುಳಿತವರನ್ನಷ್ಟೇ ಕರೆತರುವ ಪ್ರಯತ್ನ ಮಾಡಬಹುದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ಇಲ್ಲಿನ ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ ಪಕ್ಷದ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, 'ಪಕ್ಷವನ್ನು ಮತ್ತೆ ಕಟ್ಟಿ ಬೆಳೆಸಲು ಕನಿಷ್ಠ ಹತ್ತು ತಿಂಗಳು ಬೇಕು, ಆದರೆ ಜನತಾ ಪರಿವಾರವನ್ನು ಒಂದುಗೂಡಿಸುವುದು ಸುಲಭದ ಮಾತಲ್ಲ' ಎಂದರು.
ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ಕೈಬಿಡುವುದಿಲ್ಲ ಎಂದ ಅವರು, 2023ರಲ್ಲಿ ಪಕ್ಷ ಮತ್ತೆ ಏಕಾಂಗಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಿನಿಂದಲೇ ಸಿದ್ಧತೆ ನಡೆಸಲಿದೆ ಎಂದರು.