ಮಂಗಳೂರು: ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾದ ಬಾಂಬ್ ಸ್ಫೋಟಿಸುವಂತಹ ಯಾವುದೇ ಲಕ್ಷಣಗಳು ಇರಲಿಲ್ಲ. ಇದೊಂದು ಅಣಕು ಪ್ರದರ್ಶನದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಉಳ್ಳಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಬ್ಬಿಣದ ಬಾಕ್ಸ್ನಲ್ಲಿ ಪಟಾಕಿಗೆ ತುಂಬುವ ಪೌಡರ್ ತುಂಬಿದ್ದರು ಎಂದು ಪತ್ರಿಕೆಗಳೇ ವರದಿ ಮಾಡಿವೆ. ಸುತ್ತ ತುಂಡಾಗಿದ್ದ ವಾಯರ್ಗಳಿದ್ದವು. ಸೋಮವಾರದ ಕಾರ್ಯಾಚರಣೆಯು ಬಾಂಬ್ ನಿಷ್ಕ್ರೀಯಗೊಳಿಸಲು ದೊಡ್ಡ ಕಂಟೈನರ್ ತಂದು, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದಲ್ಲಿ ನಡೆಸುವ ಅಣಕು ಪ್ರದರ್ಶನದಂತಿತ್ತು’ಎಂದರು.
‘ರಾಜ್ಯದಲ್ಲಿ ಇರುವುದು ವಿಶ್ವ ಹಿಂದೂ ಪರಿಷತ್, ಆರ್ಎಸ್ಎಸ್ನ ಸರ್ಕಾರವಲ್ಲ. ಆರು ಕೋಟಿ ಜನರ ಸರ್ಕಾರ. ಜನರಿಗೆ ವಾಸ್ತವಾಂಶ ತಿಳಿಸಿ. ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಬೇಡಿ’ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಹೇಳಿದರು.
‘ಸಮಾಜ, ಧರ್ಮದ ಮಧ್ಯೆ ಅಶಾಂತಿ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ವಿಶ್ವಕ್ಕೆ ಸ್ಪರ್ಧೆ ಕೊಡುವಂತಹ ಮಂಗಳೂರು ನಗರವನ್ನು ಹಾಳು ಮಾಡಿ, ಪದೇ ಪದೇ ಬೆಂಕಿ ಇಡಬೇಡಿ ಎಂದ ಅವರು, ಜನತೆಯ ಮನಸ್ಸು ಒಗ್ಗೂಡಿಸಲು ಇಲ್ಲಿಗೆ ಭೇಟಿ ನೀಡಿದ್ದೇನೆ’ಎಂದು ತಿಳಿಸಿದರು.
ಕಮಿಷನರ್ ಡಾ.ಹರ್ಷ ಭೇಟಿ
ಈ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಮಾತುಕತೆ ನಡೆಸಿದರು.
Today
— Harsha IPS CP Mangaluru City (@compolmlr) January 21, 2020
I have interacted with EX CM when he has landed at mangaluru.. it's nothing more than a security visit as EX CM also is a protectee.
Had a brief interaction about current scenario and have appealed for cooperation of all in maintainence of law and order..
ಈ ಕುರಿತು ಸ್ಪಷ್ಟನೆ ನೀಡಿರುವ ಡಾ.ಹರ್ಷ, ‘ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಸ್ಥಳಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಲಾಗಿದೆ. ಸದ್ಯದ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದ್ದೇನೆ. ಕಾನೂನು, ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡುವಂತೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದ್ದಾರೆ.
ಜವಾಬ್ದಾರಿ ನಿಲುವು ತಾಳಿ
ಕುಮಾರಸ್ವಾಮಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ, ‘ಇದೊಂದು ಗಂಭೀರ ಪ್ರಕರಣವಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಸಂದರ್ಭದಲ್ಲಿ ಸಮಾಜದ ಎಲ್ಲ ಮುಖಂಡರು ಜವಾಬ್ದಾರಿಯುತ ನಿಲುವು ತಾಳಬೇಕು’ ಎಂದು ಟ್ವಿಟ್ ಮಾಡಿದ್ದಾರೆ.
Mangaluru police is investigating into the suspected explosive material recovered from MIA and subsequently disposed of and has made progress on available leads.. This is a very serious investigation and appeal all leaders of society to take a very responsible stand...
— Harsha IPS CP Mangaluru City (@compolmlr) January 21, 2020
ಬಜ್ಪೆ ವಿಮಾನ ನಿಲ್ದಾಣದಲ್ಲಿ ದೊರೆತ ಸ್ಫೋಟಕ ವಸ್ತುವನ್ನು ಸಿಡಿಸುವ ಮೂಲಕ ವಿಲೇವಾರಿ ಮಾಡಲಾಗಿದೆ. ಲಭ್ಯವಿರುವ ಮಾಹಿತಿಯನ್ನು ಆಧರಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.