ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಒಕ್ಕಲಿಗರ ಸಂಘಕ್ಕೆ ನಾಚಿಕೆಯಾಗಬೇಕು: ಎಚ್.ಡಿ.ದೇವೇಗೌಡ

Last Updated 1 ಮಾರ್ಚ್ 2020, 12:04 IST
ಅಕ್ಷರ ಗಾತ್ರ

ಹಾಸನ: ‘ಮೂರು, ಆರು ತಿಂಗಳಿಗೊಮ್ಮೆ ಅಧ್ಯಕ್ಷರ ಚುನಾವಣೆ ನಡೆಸುವ ರಾಜ್ಯ ಒಕ್ಕಲಿಗರ ಸಂಘಕ್ಕೆ ನಾಚಿಕೆಯಾಗಬೇಕು. ಕೆಎಲ್‌ಇ ಸೇರಿದಂತೆ ಇತರೆ ಲಿಂಗಾಯತ ಸಂಸ್ಥೆಗಳು ಹೇಗೆ ನಡೆಯುತ್ತಿವೆ ಎಂಬುದನ್ನು ನೋಡಿ ಕಲಿಯಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಕಿವಿಮಾತು ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ಅಶೋಕ್‌ ಆನಂದ ಅವರನ್ನು ಸರ್ಕಾರ ಬದಲಾವಣೆ ಮಾಡಿ, ಶಂಕರಲಿಂಗೇಗೌಡ ಅವರನ್ನು ನೇಮಿಸಿದೆ. ಶಂಕರಲಿಂಗೇಗೌಡರ ನೇಮಕಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ದಕ್ಷ ಅಧಿಕಾರಿಯಾಗಿದ್ದ ಅಶೋಕ್‌ ಅವರು ಸಂಸ್ಥೆಗೆ ಮರು ಜೀವ ನೀಡಿದ್ದರು. ಆದರೆ, ಅವರ ವಿರುದ್ಧ ಯಾರು ಆರೋಪ ಮಾಡಿದ್ದಾರೆ ಎಂಬುದನ್ನು ಸರ್ಕಾರ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

‘ನನ್ನ ಅಧಿಕಾರವಧಿಯಲ್ಲೇ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕೆಂಬ ಸಲಹೆ ಬಂತು. ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಧ್ಯ ಪ್ರವೇಶದಿಂದ ಆ ಪ್ರಸ್ತಾವ ಕೈ ಬಿಡಲಾಯಿತು. ಸಂಘದಲ್ಲಿ ಏನೇನು ನಡೆದಿದೆ ಎಂಬುದು ಗೊತ್ತು. ಒಂದು ವಿಧಾನಸಭಾ ಕ್ಷೇತ್ರದ ಚುನಾವಣೆಗಿಂತ ನಿರ್ದೇಶಕರ ಚುನಾವಣೆಗೆ ಹಣ ಖರ್ಚು ಮಾಡುತ್ತಾರೆ. ಯಾರಿಗೂ ಸಂಘವನ್ನು ಬಲ ಪಡಿಸುವ ಇಚ್ಛಾಶಕ್ತಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮೊದಲ ಬಾರಿಗೆ ಬೆಂಗಳೂರಿನಿಂದ ಹಾಸನಕ್ಕೆ ಪ್ಯಾಸೆಂಜರ್‌ ರೈಲಿನಲ್ಲಿ ಬಂದ ದೇವೇಗೌಡರನ್ನು ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.

ಇದೇ ವೇಳೆ ಮಾತನಾಡಿದ ಗೌಡರು, ‘ಎತ್ತಿನಹೊಳೆ ಯೋಜನೆಯಿಂದ ಯಾವುದೇ ಭಾಗಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಮೊದಲು ಕೋಲಾರಕ್ಕೆ ಕುಡಿಯುವ ನೀರು ಕೊಡಬೇಕು. ಈ ಯೋಜನೆಯನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಈ ವಿಷಯದಲ್ಲಿ ಸುಮ್ಮನೆ ಕೂರುವುದಿಲ್ಲ, ಹೋರಾಟ ಮಾಡುತ್ತೇನೆ’ ಎಂದರು.

ಶಾಸಕ ಜಿ.ಟಿ.ದೇವೇಗೌಡ ಪಕ್ಷ ಬಿಟ್ಟು ಹೋದರು ತಲೆ ಕೆಡಿಸಿಕೊಳ್ಳುವುದಿಲ್ಲ. ಮತ್ತೆ ಪಕ್ಷ ಕಟ್ಟುವುದು ಹೇಗೆ ಎಂಬುದು ಗೊತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT