ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕಪಿಲಾ ನದಿಯಲ್ಲಿ ಬೇಸಿಗೆಯಿಂದಾಗಿ ನೀರು ಕಡಿಮೆಯಾಗಿದ್ದು, ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿಗೆ ಕೇರಳದಿಂದ ನೂರಾರು ಸಂಖ್ಯೆಯಲ್ಲಿ ಮದ್ಯಪ್ರಿಯರು ನದಿಯಲ್ಲೇ ನಡೆದುಕೊಂಡೇ ಬರುತ್ತಿದ್ದಾರೆ.
ಸಂಜೆ ವೇಳೆ ನದಿಯಲ್ಲಿನ ಬಂಡೆ ಕಲ್ಲುಗಳ ಮಾರ್ಗವಾಗಿ ನಡೆದುಕೊಂಡು ಬರುವ ಮದ್ಯಪ್ರಿಯರು, ಮದ್ಯ ಖರೀದಿಸಿ ಅದೇ ಮಾರ್ಗದಲ್ಲಿ ಕೇರಳಕ್ಕೆ ವಾಪಸ್ಸಾಗುತ್ತಿದ್ದಾರೆ.
‘ಕೊರೊನಾ ವೈರಾಣು ಹರಡುವ ಭೀತಿಯಲ್ಲಿ ಈಗಾಗಲೇ ಡಿ.ಬಿ.ಕುಪ್ಪೆಯಲ್ಲಿದ್ದ ಮದ್ಯದಂಗಡಿ ಮುಚ್ಚಲಾಗಿದೆ. ಕೇರಳದವರು ಸಮೀಪದಲ್ಲೇ ಇರುವ ಕಾರಾಪುರದ ಮದ್ಯದಂಗಡಿಗೆ ಬರುತ್ತಿದ್ದಾರೆ’ ಎಂದು ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿರುಪತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ವೀಣಾ, ‘ನುಸುಳುಕೋರರನ್ನು ತಡೆಯಲು ಪೊಲೀಸ್ ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿದೆ. ಸ್ಥಳೀಯ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿದೆ’ ಎಂದರು.
ಇವರಿಂದ ಕೊರೊನಾ ಸೋಂಕು ಹರಡುವ ಭೀತಿ ಇದ್ದರೆ, ಮತ್ತೊಂದೆಡೆ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಿರುವುದರಿಂದ ಮಳೆ ಬಂದು ನದಿಯ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಇದು ಅಪಾಯಕ್ಕೆ ಆಸ್ಪದ ನೀಡಲಿದೆ.
ಮದ್ಯದಂಗಡಿಗಳು ಮುಚ್ಚಿದ್ದರೂ, ಕೆಲವರು ಮೊಬೈಲ್ ಮೂಲಕ ಸಂಪರ್ಕಿಸುತ್ತಿದ್ದಾರೆ. ನದಿ ತೀರಕ್ಕೆ ಮದ್ಯದ ಬಾಟಲಿಗಳನ್ನು ತಂದು ಮೂರುಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.