ಮಳವಳ್ಳಿ: ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡರ ಬಲಗಾಲಿನ ಗಾಯದಲ್ಲಿ ಸೋಂಕು ಕಾಣಿಸಿಕೊಂಡಿದ್ದು ಗುರುವಾರ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಇದನ್ನೂ ಓದಿ:ಕುಟುಂಬವನ್ನೇ ಮರೆತು ಕೆರೆ ಕಟ್ಟಿದೆ; ಕಾಮೇಗೌಡ
ಹಳೆಯ ಗಾಯ ಉಲ್ಭಣಗೊಂಡು ನೋವಿನಿಂದ ನರಳುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು. ಒಂದು ವಾರ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಆದರೆ ಇದನ್ನು ನಿರಾಕರಿಸಿದ ಕಾಮೇಗೌಡರು ಪ್ರತಿದಿನ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವುದಾಗಿ ತಿಳಿಸಿದರು. ನಂತರ ಅವರನ್ನು ಆಂಬುಲೆನ್ಸ್ನಲ್ಲಿ ಮನೆಗೆ ಕಳುಹಿಸಲಾಯಿತು.
‘ಚರ್ಮದ ಮೇಲ್ಪದರ ನಿರ್ಜೀವವಾಗಿದ್ದು ಸೋರಿಕೆಯಾಗುತ್ತಿದೆ. ಸದ್ಯ ರೋಗ ನಿರೋಧಕ ಚುಚ್ಚುಮದ್ದು ನೀಡಲಾಗಿದೆ. ಅವರಿಗೆ ಮಧುಮೇಹ, ರಕ್ತದೊತ್ತಡ ಇಲ್ಲ. ಆದರೆ ಉಸಿರಾಟದ ಸಮಸ್ಯೆ ಇರುವ ಕಾರಣ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಅಗತ್ಯ ಬಿದ್ದರೆ ಮೈಸೂರು ಆಸ್ಪತ್ರೆಗೆ ದಾಖಲು ಮಾಡಬೇಕು ಎಂದು ಕುಟುಂಬ ಸದಸ್ಯರಿಗೆ ಸಲಹೆ ನೀಡಿದ್ದೇವೆ’ ಎಂದು ಡಿಎಚ್ಒ ಮಂಚೇಗೌಡ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಚೆಗೆ ‘ಮನದ ಮಾತು’ ಸರಣಿಯಲ್ಲಿ ಕಾಮೇಗೌಡರು ಕುಂದನಿ ಬೆಟ್ಟದ ಮೇಲೆ ನಿರ್ಮಿಸಿರುವ ಕಟ್ಟೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ನಂತರ ಅವರ ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದರು.
‘ಪ್ರಧಾನಿ ಪ್ರಸ್ತಾಪದ ನಂತರ ಕಾಮೇಗೌಡರನ್ನು ಹುಡುಕುಕೊಂಡು ದೇಶದ ವಿವಿಧೆಡೆಯಿಂದ ನೂರಾರು ದೂರದರ್ಶನ ವಾಹಿನಿಗಳು ದಾಸನದೊಡ್ಡಿ ಗ್ರಾಮಕ್ಕೆ ಬರುತ್ತಿದ್ದವು. ನಿತ್ಯ ಬೆಟ್ಟಕ್ಕೆ ತೆರಳಿ ಕಾಮೇಗೌಡರು ಕಟ್ಟೆಗಳ ಬಗ್ಗೆ ಮಾತನಾಡುತ್ತಿದ್ದರು. ಓಡಾಟ ಹೆಚ್ಚಾದ ಹಿನ್ನೆಲೆಯಲ್ಲಿ ಕಾಲಿಗೆ ನೋವಾಗಿರಬಹುದು’ ಎಂದು ಕಾಮೇಗೌಡರ ಆಪ್ತರು ತಿಳಿಸಿದರು.
ಇನ್ನಷ್ಟು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.