ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ದಿನಗಳಷ್ಟೇ ಕಲಾಪ: ನಡೆಯದ ಪ್ರಶ್ನೋತ್ತರ

ಮೂರು ದಶಕದಲ್ಲೇ ಕಡಿಮೆ ದಿನಗಳ ವಿಧಾನ ಮಂಡಲ ಅಧಿವೇಶನ * 1989ರಲ್ಲಿ 17 ದಿನ ಕಲಾಪ ನಡೆದಿತ್ತು
Last Updated 1 ಜನವರಿ 2020, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ವರ್ಷದಲ್ಲಿ ಕನಿಷ್ಠ 60 ದಿನಗಳಾದರೂ ನಡೆಸಬೇಕು ಎಂಬ ನಿಯಮವಿದೆ. ಇದರಿಂದ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದು ಆಶಯ. ಆದರೆ, 2019ರಲ್ಲಿ ಅತಿ ಕಡಿಮೆ ಎಂದರೆ 18 ದಿನಗಳು ಮಾತ್ರ ಕಲಾಪ ನಡೆದಿದೆ.

ಕಳೆದ 30 ವರ್ಷಗಳಲ್ಲಿ ಅತ್ಯಂತ ಕಡಿಮೆ ಕಲಾಪ ನಡೆದ ವರ್ಷವಾಗಿ ದಾಖಲೆಗೆ ಸೇರಿದೆ. ಈ 18 ದಿನಗಳಲ್ಲಿ ಒಂದೂ ಮಸೂದೆ ಅಂಗೀಕಾರವಾಗಿಲ್ಲ, ಪ್ರಶ್ನೋತ್ತರವೂ ನಡೆದಿಲ್ಲ. ನಾಲ್ಕು ಬಾರಿ ನಡೆದ ಅಧಿವೇಶನಗಳೂ ಅಲ್ಪಾವಧಿಯದ್ದಾಗಿದ್ದವು.

ಈ ಹಿಂದೆ 1989 ರಲ್ಲಿ ಕೇವಲ 17 ದಿನಗಳ ಕಲಾಪ ನಡೆದಿತ್ತು. ಇದು ರಾಜ್ಯದ ವಿಧಾನಮಂಡಲ ಇತಿಹಾಸದಲ್ಲಿ ಅತಿ ಕನಿಷ್ಠ ಕಲಾಪ ನಡೆದ ವರ್ಷ. ಆ ಬಳಿಕ ಕೆಲವು ವರ್ಷಗಳು ಸರಾಸರಿ 30 ರಿಂದ 40 ದಿನಗಳಷ್ಟು ಕಲಾಪ ನಡೆದಿವೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವರ್ಷದಲ್ಲಿ ಕನಿಷ್ಠ 60 ದಿನಗಳು ಕಲಾಪ ನಡೆಯಬೇಕು ಎಂಬ ನಿಯಮ ಇದೆ. ಆದರೆ ಅದು ಕಾರ್ಯಗತವಾಗಿಲ್ಲ. ಹಲವು ವಿಧಾನಸಭಾಧ್ಯಕ್ಷರು ಈ ವಿಚಾರವನ್ನು ಪ್ರಸ್ತಾಪಿಸಿದ್ದರೂ 60 ದಿನಗಳ ಗಡಿಯನ್ನು ತಲುಪಲು ಸಾಧ್ಯವಾಗಿಲ್ಲ. ಆಡಳಿತ ಮತ್ತು ವಿರೋಧಪಕ್ಷಗಳ ಸಹಕಾರ ಇದ್ದಾಗ ಮಾತ್ರ ಸಾಧ್ಯ’ ಎಂದರು.

ಫೆಬ್ರುವರಿಯಲ್ಲಿ ನಡೆದ ಅಧಿವೇಶನದಲ್ಲಿ ಬಜೆಟ್‌ ಮಂಡಿಸಲಾಯಿತು. ಜುಲೈನಲ್ಲಿ ಎರಡು ಅಧಿವೇಶನಗಳು ನಡೆದವು, ಅದರಲ್ಲಿ ಒಂದು ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲು, ಇನ್ನೊಂದು ಮುಖ್ಯಮಂತ್ರಿ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ನಡೆಸಲಾಗಿತ್ತು. ಕೊನೆಯ ಅಧಿವೇಶನವನ್ನು ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್‌ಗೆ ಒಪ್ಪಿಗೆ ಪಡೆಯಲು ಕರೆಯಲಾಗಿತ್ತು.

ಈ ಬಾರಿ ಮಳೆ, ಪ್ರವಾಹ, ಭೂಕುಸಿತ, ಬೆಲೆ ಏರಿಕೆ ಸೇರಿದಂತೆ ಹಲವು ಜ್ವಲಂತ ವಿಷಯಗಳಿದ್ದವು. ಈ ಬಗ್ಗೆ ಚರ್ಚೆ ನಡೆಸುವ ಮೂಲಕ ಅದಕ್ಕೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ರಾಜ್ಯದ ಜನರದ್ದಾಗಿತ್ತು. ಆದರೆ, ಈ ಬಗ್ಗೆ ಚರ್ಚೆ ನಡೆದೇ ಇಲ್ಲ, ಗದ್ದಲವೇ ಹೆಚ್ಚಾಗಿತ್ತು. 17 ಶಾಸಕರ ರಾಜೀನಾಮೆ, ಅವರ ಮುಂಬೈ ವಾಸ್ತವ್ಯ ವಿಷಯ ಕುರಿತ ಕೆಸರೆರಚಾಟ ನಡೆದದ್ದೇ ಹೆಚ್ಚು.

ಮಸೂದೆ ಮೇಲೆ 2 ದಿನ ಚರ್ಚೆ ಕಡ್ಡಾಯ: ಇನ್ನು ಮುಂದೆ ಮಸೂದೆಯ ಮೇಲೆ ಕನಿಷ್ಠ ಎರಡು ದಿನಗಳು ಚರ್ಚೆ ನಡೆಸಬೇಕು. ಆ ಬಳಿಕವೇ ಅದನ್ನು ಒಪ್ಪಿಗೆಗೆ ಮಂಡಿಸಬೇಕು ಎಂಬುದನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಡ್ಡಾಯ ಮಾಡಿದ್ದಾರೆ.

ಬಹುತೇಕ ಸಂದರ್ಭಗಳಲ್ಲಿ ಮಹತ್ವದ ಮಸೂದೆಗಳನ್ನು ಮಂಡಿಸಿ, ಅದೇ ದಿನ ಒಪ್ಪಿಗೆ ಪಡೆಯಲು ಸರ್ಕಾರ ಒತ್ತಡ ಹೇರುತ್ತದೆ. ಅಂತಿಮವಾಗಿ ಚರ್ಚೆ ನಡೆಸದೇ ಒಪ್ಪಿಗೆ ಪಡೆಯಲಾಗುತ್ತದೆ. ಇದು ಸರಿಯಲ್ಲ, ಇದರಿಂದ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಮಸೂದೆಯ ಕುರಿತು ಚರ್ಚೆ ಮಾಡದೇ ಒಪ್ಪಿಗೆ ಪಡೆಯಲಾಗಿತ್ತು. ಇದರಿಂದ ಸಾಕಷ್ಟು ಶಿಕ್ಷಕರು ತೊಂದರೆಗೆ ಸಿಲುಕಬೇಕಾಯಿತು. ಇನ್ನು ಮುಂದೆ ಅಂತಹ ಎಡವಟ್ಟಿಗೆ ಅವಕಾಶ ನೀಡದೇ ಇರಲು ಸಭಾಧ್ಯಕ್ಷರು ತೀರ್ಮಾನಿಸಿದ್ದಾರೆ.

ಮಸೂದೆ: 2 ದಿನ ಚರ್ಚೆ ಕಡ್ಡಾಯ
ಇನ್ನು ಮುಂದೆ ಮಸೂದೆಯ ಮೇಲೆ ಕನಿಷ್ಠ ಎರಡು ದಿನಗಳು ಚರ್ಚೆ ನಡೆಸಬೇಕು. ಆ ಬಳಿಕವೇ ಅದನ್ನು ಒಪ್ಪಿಗೆಗೆ ಮಂಡಿಸಬೇಕು ಎಂಬುದನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಡ್ಡಾಯ ಮಾಡಿದ್ದಾರೆ.

ಬಹುತೇಕ ಸಂದರ್ಭಗಳಲ್ಲಿ ಮಹತ್ವದ ಮಸೂದೆಗಳನ್ನು ಮಂಡಿಸಿ, ಅದೇ ದಿನ ಒಪ್ಪಿಗೆ ಪಡೆಯಲು ಸರ್ಕಾರ ಒತ್ತಡ ಹೇರುತ್ತದೆ. ಅಂತಿಮವಾಗಿ ಚರ್ಚೆ ನಡೆಸದೇ ಒಪ್ಪಿಗೆ ಪಡೆಯಲಾಗುತ್ತದೆ. ಇದು ಸರಿಯಲ್ಲ, ಇದರಿಂದ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಮಸೂದೆಯ ಕುರಿತು ಚರ್ಚೆ ಮಾಡದೇ ಒಪ್ಪಿಗೆ ಪಡೆಯಲಾಗಿತ್ತು. ಇದರಿಂದ ಸಾಕಷ್ಟು ಶಿಕ್ಷಕರು ತೊಂದರೆಗೆ ಸಿಲುಕಬೇಕಾಯಿತು. ಇನ್ನು ಮುಂದೆ ಅಂತಹ ಎಡವಟ್ಟಿಗೆ ಅವಕಾಶ ನೀಡದೇ ಇರಲು ಸಭಾಧ್ಯಕ್ಷರು ತೀರ್ಮಾನಿಸಿದ್ದಾರೆ.

ಕಲಾಪದ ಅಂಕಿ– ಅಂಶ

ಅತಿ ಹೆಚ್ಚು

1972; 82 ದಿನಗಳು
1976; 73ದಿನಗಳು

ಅತಿ ಕಡಿಮೆ

1989; 17 ದಿನಗಳು
2019; 18ದಿನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT