ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಆಯ್ದ ‘ಎ’, ‘ಬಿ’ ಶ್ರೇಣಿ ಹುದ್ದೆಗಳಿಗೆ ಸಂದರ್ಶನ ಇಲ್ಲ

ಲಿಖಿತ ಪರೀಕ್ಷೆಯೇ ಮಾನದಂಡ * ವೈದ್ಯ, ಎಂಜಿನಿಯರ್‌ನಂತಹ ಆಯ್ದ ಹುದ್ದೆಗಳಿಗೆ ಮಾತ್ರವೇ ಅನ್ವಯ
Last Updated 30 ಡಿಸೆಂಬರ್ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಆಯ್ದ ಕೆಲವು ಇಲಾಖೆಗಳ ‘ಎ’ ಮತ್ತು ‘ಬಿ’ ಶ್ರೇಣಿಯ ಹುದ್ದೆಗಳಿಗೆ ಸಂದರ್ಶನ ನಡೆಸದೇ, ಲಿಖಿತ ಪರೀಕ್ಷೆ ಮೂಲಕ ನೇರವಾಗಿ ನೇಮಕಾತಿ ಮಾಡಿಕೊಳ್ಳುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.

ಈ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗವೇ (ಕೆಪಿಎಸ್‌ಸಿ) ಪರೀಕ್ಷೆ ನಡೆಸುತ್ತದೆ. ಆದರೆ ಸಂದರ್ಶನ ನಡೆಸುವುದಿಲ್ಲ. ಮೆರಿಟ್‌ ಮತ್ತು ರೋಸ್ಟರ್‌ ಆಧಾರದ ಮೇಲೆ ನೇಮಕಾತಿ ಪಟ್ಟಿ ತಯಾರಿಸಲಾಗುತ್ತದೆ.

ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ಕೆಲವು ವೃತ್ತಿಪರ (ಪ್ರೊಫೆಷನಲ್‌) ಹುದ್ದೆಗಳಿಗೆ ಈ ರೀತಿ ನೇಮಕಾತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಯಾವ ಇಲಾಖೆಯಲ್ಲಿ ಯಾವ ಹುದ್ದೆಗಳಿಗೆ ಸಂದರ್ಶನ ನಡೆಸದೆ ಲಿಖಿತ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ವಿಶೇಷವಾಗಿ ವೈದ್ಯರು, ಎಂಜಿನಿಯರ್‌ಗಳಂತಹ ಸೇವಾ ವರ್ಗದ ಹುದ್ದೆಗಳಿಗೆ ಮೌಖಿಕ ಸಂದರ್ಶನದ ಅಗತ್ಯವಿಲ್ಲ ಎಂದು ತಿರ್ಮಾನಿಸಲಾಗಿದೆ. ಕೆಎಎಸ್‌ ಅಥವಾ ಪೊಲೀಸ್‌ ಇಲಾಖೆ ಹುದ್ದೆಗಳಿಗೆ ಇದು ಅನ್ವಯ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಉತ್ತರ ಪ್ರದೇಶ ಮಾದರಿ ಕಾಯ್ದೆ ಇಲ್ಲ
ಪ್ರತಿಭಟನೆಗಳ ಸಂದರ್ಭದಲ್ಲಿ ಸರ್ಕಾರಿ ಸ್ವತ್ತುಗಳನ್ನು ನಾಶ ಮಾಡುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಕಾನೂನು ತಿದ್ದುಪಡಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

ಸೆಕ್ಷೆನ್‌2(ಎ) ಅನ್ವಯ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಗೆ ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವಿದೆ. ಹೀಗಾಗಿ ಉತ್ತರ ಪ್ರದೇಶ ಮಾದರಿಯಲ್ಲಿ ಸ್ವತ್ತು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ತರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT