ಹೊನ್ನಾವರ (ಉತ್ತರ ಕನ್ನಡ): ತಾಲ್ಲೂಕಿನ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ ಪ್ರದಾನ ಮಾಡುವ ‘ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ’ಯನ್ನು ಭರತನಾಟ್ಯ ಕಲಾವಿದೆ ಡಾ.ಪದ್ಮಾ ಸುಬ್ರಹ್ಮಣ್ಯ ಅವರಿಗೆಪ್ರಕಟಿಸಲಾಗಿದೆ. ಪ್ರಶಸ್ತಿಯು ₹ 25 ಸಾವಿರ ನಗದು ಒಳಗೊಂಡಿದೆ.
ಇದೇ ಮಂಡಳಿಯ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ಗೆ ಪ್ರಸಿದ್ಧ ಯಕ್ಷಗಾನ ಚಂಡೆವಾದಕ ಕೃಷ್ಣ ಯಾಜಿ ಇಡಗುಂಜಿ ಅವರನ್ನು ಆಯ್ಕೆ ಮಾಡಲಾಗಿದೆ.ಈ ಪ್ರಶಸ್ತಿಯಲ್ಲಿ ₹15 ಸಾವಿರ ನಗದು ಸೇರಿದೆ.
‘ಫೆ.20ರಿಂದ 24ರವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ನಡೆಯಲಿದೆ. ಆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.