ಹೊಸಪೇಟೆ: ಕುರುಬ ಸಮಾಜದ ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಹಾಗೂ ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲಾ ಕುರುಬರ ಸಂಘ ಆಗ್ರಹಿಸಿದೆ.
ಈ ಸಂಬಂಧ ಸಂಘದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದ ಪತ್ರವನ್ನು ಉಪ ತಹಶೀಲ್ದಾರ್ ಅಮರನಾಥ ಅವರಿಗೆ ಸಲ್ಲಿಸಿದರು.
‘ಮೂವರು ಕುರುಬ ಸಮಾಜದ ನಾಯಕರಿಂದ ಯಡಿಯೂರಪ್ಪನವರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದರೆ, ಇದುವರೆಗೆ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ದುರದೃಷ್ಟಕರ. ಇದು ಕುರುಬ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಮೂವರಿಗೂ ಸಂಪುಟಕ್ಕೆ ಸೇರಿಸಿಕೊಂಡು ಅಸಮಾಧಾನ ದೂರ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಎಚ್. ಮಹೇಶ್, ಮುಖಂಡರಾದ ಕುಬೇರ ದಲ್ಲಾಳಿ, ದಾಸನಾಳ್ ಹನುಮೇಶ್, ಎಲ್.ಎಸ್.ಆನಂದ್, ಸೋಮಣ್ಣ, ಕಣ್ಣೀರಿ ರಾಘವೇಂದ್ರ ಇದ್ದರು.