ಇಸ್ರೋದ ಮಾಜಿ ಅಧ್ಯಕ್ಷರಾದ ಕೆ. ಕಸ್ತೂರಿರಂಗನ್ ಅವರ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಹಿಂದಿ ಭಾಷಿಕವಲ್ಲದ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರದ ಅನ್ವಯ ಹಿಂದಿಯನ್ನು ಕಡ್ಡಾಯವಾಗಿ ಬೋಧನೆ ಮಾಡುವ ಕುರಿತು ಪ್ರಸ್ತಾಪಿಸಲಾಗಿದೆ. ಇದರ ವಿರುದ್ಧ ತಮಿಳುನಾಡು ಈಗಾಗಲೇ ಸಿಡಿದೆದ್ದಿದೆ. ಭಾರಿ ದೊಡ್ಡ ಪ್ರಮಾಣದಲ್ಲಿ ಚಳವಳಿಗಳು, ಸಾಮಾಜಿಕ ತಾಣಗಳಲ್ಲಿ #StopHindiImposition ಎಂಬ ಹ್ಯಾಷ್ ಟ್ಯಾಗ್ನಡಿಯಲ್ಲಿಅಭಿಯಾನಗಳು ಆರಂಭವಾಗಿವೆ. ಸದ್ಯ ಈ ಕುರಿತು ಮೊದಲ ಬಾರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ‘ಭಾಷೆಯನ್ನು ಹೇರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಪ್ರಸ್ತಾವಿತ ತ್ರಿಭಾಷಾ ನೀತಿಯ ಕುರಿತು ಹೆಚ್ಚಿನ ಮಾಹಿತಿ ಪಡೆದು ಕೇಂದ್ರಕ್ಕೆ ರಾಜ್ಯದ ನಿಲುವು ತಿಳಿಸುತ್ತೇವೆ,’ ಎಂದು ಹೇಳಿದ್ಧಾರೆ.