ಗೋಣಿಕೊಪ್ಪಲು (ಕೊಡಗು): ನಾಗರಹೊಳೆ ಅರಣ್ಯದಂಚಿನಲ್ಲಿ ಇರುವ ಇಲ್ಲಿನ ರಾಜಾಪುರದ ಕಾಫಿ ತೋಟದ ಬಳಿ ರಸ್ತೆಯಲ್ಲಿ ಶನಿವಾರ ಸಂಜೆ ಹುಲಿ ಕಾಣಿಸಿದೆ.
ಇದರಿಂದಾಗಿ ಕಾಫಿ ತೋಟದ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಆದೇಂಗಡ ದಿನೇಶ್ ಎಂಬುವವರು ಕಾರಿನಲ್ಲಿ ತೆರಳುವಾಗ ಕಾಫಿ ತೋಟದ ಗೇಟಿನಿಂದ 100 ಮೀಟರ್ ಅಂತರದಲ್ಲಿ ಹುಲಿ ಅಡ್ಡಾಡುತ್ತಿರುವುದು ಕಾಣಿಸಿದೆ.
ಆತಂಕ್ಕೆ ಒಳಗಾದ ಅವರು ಕಿಟಕಿ ಗಾಜುಗಳನ್ನು ಏರಿಸಿ ತುಸು ಹೊತ್ತು ನಿಂತಿದ್ದಾರೆ. ಹಿಂದಿರುಗಿ ನೋಡಿದ ಹುಲಿ, ಸ್ವಲ್ಪ ಹೊತ್ತು ನಿಂತು ತೋಟದಲ್ಲಿ ಮರೆಯಾಗಿದೆ. ಇದನ್ನು ದಿನೇಶ್ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಕ್ಷಿಣ ಕೊಡಗಿನ ಭಾಗದಲ್ಲಿ ಈಚೆಗೆ ಜಾನುವಾರುಗಳ ಮೇಲೆ ಹುಲಿ ದಾಳಿ ಪ್ರಕರಣ ಹೆಚ್ಚಿದ್ದು, ಅದರ ಸೆರೆಗೆ ಅರಣ್ಯ ಇಲಾಖೆಯು ಕಾರ್ಯಾಚರಣೆಯನ್ನು ಆರಂಭಿಸಿದೆ. ಈಗ ರಸ್ತೆಯಲ್ಲಿ ಕಾಣಿಸಿಕೊಂಡಿರುವುದು ಅದೇ ಹುಲಿ ಇರಬಹುದಾ ಎಂಬ ಶಂಕೆಯು ವ್ಯಕ್ತವಾಗಿದೆ.