ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸಿಗರ ಬದುಕಿಗೆ ಬೇಕಿದೆ ಚೌಕಟ್ಟು

Last Updated 28 ಮೇ 2020, 19:45 IST
ಅಕ್ಷರ ಗಾತ್ರ

ರಾಯಚೂರು ಜಿಲ್ಲೆಯ ವಲಸೆ ಸಮಸ್ಯೆ ಕುರಿತ ಅಧ್ಯಯನ ವರದಿ ಇಲ್ಲಿದೆ. ಇದು ರಾಯಚೂರಿನ ಕಥೆಯಷ್ಟೆ ಅಲ್ಲ; ಉತ್ತರ ಕರ್ನಾಟಕದ ಬಹುತೇಕ ಹಿಂದುಳಿದ ಜಿಲ್ಲೆಗಳ ಕಥೆಯೂ ಆಗಿದೆ. ಕುರುಡು ನೀತಿಗಳಿಗೆ, ಆಡಳಿತದ ವೈಫಲ್ಯಕ್ಕೆ ಈ ಕಥೆ ಕನ್ನಡಿಯನ್ನೂ ಹಿಡಿಯುತ್ತದೆ...

ಗ್ರಾಮಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಕಾರ್ಮಿಕರಿಗೆ ಸಿಗುವ ವೇತನ ತುಸು ಹೆಚ್ಚು. ಆದರೆ ವೃತ್ತಿಪರ ಕೌಶಲ ಇಲ್ಲದ ವಲಸೆ ಕಾರ್ಮಿಕರು ಔಪಚಾರಿಕವಲ್ಲದ ಕೆಲಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ನಿರ್ಮಾಣ ಕಾಮಗಾರಿಯೂ ಸೇರಿದಂತೆ ಕೆಳಹಂತದ ಕೆಲಸಗಳಲ್ಲಿ ಒಂದಿಷ್ಟು ತೊಂದರೆಗಳು ಸಹಜ. ಕಡಿಮೆ ಹಾಗೂ ಅನಿಶ್ಚಿತ ಆದಾಯ ಮತ್ತು ಸಾಮಾಜಿಕ ಅಭದ್ರತೆ ಇಲ್ಲಿ ಎದ್ದು ಕಾಣುವ ಅಂಶಗಳು. ವಲಸೆ ಕಾರ್ಮಿಕರ ಬದುಕನ್ನು ಕೋವಿಡ್–19 ಇನ್ನಷ್ಟು ಬಳಲಿಸಿದೆ. ಕಾರ್ಮಿಕರ ಸಮಸ್ಯೆಯ ಆಳವಾದ ಬೇರುಗಳು ಸಾಮಾಜಿಕ–ಆರ್ಥಿಕ ರಚನೆಯತ್ತ ಚಾಚಿಕೊಂಡಿವೆ. ‌ಗ್ರಾಮೀಣ ಅಭಿವೃದ್ಧಿ, ನಗರ ಉದ್ಯೋಗಕ್ಕೆ ಮಹತ್ವ ನೀಡದ ನೀತಿಗಳು ಹಾಗೂಆಳುವ ಸರ್ಕಾರಗಳ ದೀರ್ಘಕಾಲದ ವೈಫಲ್ಯಗಳು ಇದಕ್ಕೆ ಕಾರಣ ಎನ್ನದೇ ವಿಧಿಯಿಲ್ಲ.

ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಜಂಟಿಯಾಗಿ ಪೂರ್ಣಗೊಳಿಸಿದ ಯೋಜನೆಯ ಭಾಗವಾಗಿ ರಾಯಚೂರು ಜಿಲ್ಲೆಯಲ್ಲಿ ವಲಸೆ, ಕೌಶಲ ಹಾಗೂ ಯುವಜನತೆಯ ಉದ್ಯೋಗ ಕುರಿತು ನಾವು ಅಧ್ಯಯನ ನಡೆಸಿದ್ದೆವು. ಐತಿಹಾಸಿಕವಾಗಿ ಬರದ ಛಾಯೆ ಹೊದ್ದಿರುವ ರಾಯಚೂರು ಕೃಷಿ ಪ್ರಧಾನ ಜಿಲ್ಲೆ. ಇಲ್ಲಿ ಕೃಷಿಯೇತರ ಚಟುವಟಿಕೆಗಳು ಮತ್ತು ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಸೂಕ್ತ ಅಡಿಪಾಯ ಬಿದ್ದಿಲ್ಲ. 2012–13ರಿಂದ ಶುರುವಾಗಿ ಸತತವಾಗಿ ಎದುರಾದ ಬರಗಾಲವು, ದೇವದುರ್ಗ, ಮಾನ್ವಿ, ಲಿಂಗಸುಗೂರು ತಾಲೂಕುಗಳಲ್ಲಿ ವಲಸೆಗೆ ಮುನ್ನುಡಿ ಬರೆಯಿತು. ಜನರು ಊರು ತೊರೆಯಲಾರಂಭಿಸಿದರು. ನಾರಾಯಣಪುರ ಹಾಗೂ ತುಂಗಭದ್ರಾ ಜಲಾಶಯಗಳ ನೀರಿನ ಪಸೆಯೂ ಆರಿದ್ದರಿಂದ, ರಾಯಚೂರು ಜಿಲ್ಲೆಯ ನೀರಾವರಿ ಪ್ರದೇಶದ ಸಣ್ಣ ಮತ್ತು ಮಧ್ಯಮ ವರ್ಗದ ರೈತರೂ ಗುಳೆ ಹೊರಟುಬಿಟ್ಟರು.

ಜಿಲ್ಲೆಯ ಗ್ರಾಮಗಳಲ್ಲಿ ನಡೆಸಿದ ಸಂದರ್ಶನದಲ್ಲಿ ವಲಸೆಗೆ ಒಂದಿಷ್ಟು ಕಾರಣಗಳು ಸಿಕ್ಕವು. ಮಳೆಗಾಲದಲ್ಲಿ ಜಮೀನಿನಲ್ಲಿ ಉಳಿಮೆ ಮಾಡುವ ಜನರು, ಕೃಷಿ ಋತು ಕಳೆದ ಬಳಿಕ ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳಲು ವಲಸೆ ಹೋಗುತ್ತಾರೆ. ಬಹುತೇಕ ಜನರ ಆಯ್ಕೆ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ಮಹಾನಗರಗಳು. ಕಟ್ಟಡ ಕಾಮಗಾರಿಯಲ್ಲಿ ಕಲ್ಲು ಹೊಡೆಯುವ ಕೌಶಲ ಹೊಂದಿದವರು ದಿನಕ್ಕೆ ₹500 ಗಳಿಸುತ್ತಾರೆ. ಕೌಶಲ ರಹಿತ ಕೆಲಸಗಾರರು ಸಹಾಯಕರಾಗಿ ದುಡಿದು ₹200 ದಿನಗೂಲಿ ಸಂಪಾದಿಸುತ್ತಾರೆ. ಕೆಲವರು ಬರಗಾಲದಲ್ಲಿ ಮಾತ್ರ ವಲಸೆ ಹೋದರೆ, ಮತ್ತೆ ಕೆಲವರು ಇದನ್ನು ರೂಢಿಸಿಕೊಂಡಿದ್ದಾರೆ. ತಮ್ಮ ಕೃಷಿ ಆದಾಯದ ಜತೆ ಇನ್ನಷ್ಟು ಹಣ ಗಳಿಸಿ ಆದಾಯ ಹೆಚ್ಚಿಸಿಕೊಳ್ಳುವುದು ಅವರ ವಲಸೆಯ ಉದ್ದೇಶ.

ಬೆಂಬಿಡದ ಬರ ವ್ಯವಸಾಯದಲ್ಲಿ ಬಿಕ್ಕಟ್ಟು ಸೃಷ್ಟಿಸಿದ್ದು, ಕೃಷಿಯಿಂದ ವಿಮುಖರಾಗುತ್ತಿರುವಹಳ್ಳಿ ಯುವಕರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಒಂದಿಷ್ಟು ಓದಿಕೊಂಡವರಿಗೆ ನಿರ್ಮಾಣ ಕಾಮಗಾರಿಯೂ ಕಾಯಂ ಆಯ್ಕೆಯಾಗಿ ಉಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಪ್ರಾಯೋಜಿತ ಪಿಎಂಕೆವಿವೈ ಹಾಗೂ ರಾಜ್ಯ ಸರ್ಕಾರದ ಕೌಶಲ ಕರ್ನಾಟಕ ಯೋಜನೆಗಳು ಬಹುಮುಖ್ಯ ಎನಿಸುತ್ತವೆ.

ಎನ್‌ಜಿಒ ಮತ್ತು ಖಾಸಗಿ ಸಂಸ್ಥೆಗಳ ಮೂಲಕ ಸರ್ಕಾರವುಕೌಶಲ ತರಬೇತಿ ನೀಡುತ್ತಿದೆ.‌‌ ರಿಟೇಲ್ ಮಾರಾಟ, ಸೌಂದರ್ಯವರ್ಧನೆ, ವಾಹನ ಚಾಲನೆ, ಟೈಲರಿಂಗ್ ಮೊದಲಾದ ತರಬೇತಿ ಲಭ್ಯವಿವೆ. ಬೆಂಗಳೂರಿನ ಕೇಂದ್ರಗಳಲ್ಲಿ ಉಚಿತ ವಸತಿಯೊಂದಿಗೆ ತರಬೇತಿ ನೀಡಲಾಗುತ್ತಿದ್ದು, ಉದ್ಯೋಗ ಸೇವೆಯೂ ಲಭ್ಯವಿದೆ. ಆದರೆ ಈ ಕೌಶಲ ಕಾರ್ಯಕ್ರಮಗಳು ಸ್ಥಳೀಯ ಉದ್ಯೋಗ ಕ್ಷೇತ್ರಗಳ ಜತೆ ಹೊಂದಾಣಿಕೆಯಾಗುತ್ತಿಲ್ಲ. ಉದಾಹರಣೆಗೆ, ರಿಟೇಲ್ ಮಾರಾಟ ಮತ್ತು ಟೈಲರಿಂಗ್ ರಾಯಚೂರು ಜಿಲ್ಲೆಯಲ್ಲಿ ಅಪ್ರಸ್ತುತ ಎನಿಸುತ್ತವೆ. ಏಕೆಂದರೆ ಜಿಲ್ಲೆಯಲ್ಲಿ ರಿಟೇಲ್ ಮಾರಾಟಕ್ಕೆ ದೊಡ್ಡ ಮಾಲ್‌ಗಳಾಗಲೀ, ಟೈಲರಿಂಗ್‌ ಕೆಲಸ ಒದಗಿಸುವ ಗಾರ್ಮೆಂಟ್ ಉದ್ಯಮಗಳಾಗಲೀ ಇಲ್ಲ. ಆದರೆ ರಾಯಚೂರಿನಲ್ಲಿ ಸುಮಾರು 44 ಅಕ್ಕಿ ಗಿರಣಿಗಳಿವೆ. ಪ್ರತಿ ಗರಿಣಿಗೂ 6 ಬಾಯ್ಲರ್ ಆಪರೇಟರ್‌ಗಳ ಅಗತ್ಯವಿದೆ. ಈ ಹುದ್ದೆಗಳು ಖಾಲಿ ಉಳಿದಿವೆ. ಆದರೆ ಬಾಯ್ಲರ್ ಆಪರೇಟರ್ ಕೋರ್ಸ್ ಮಾತ್ರ ಕೌಶಲ ಯೋಜನೆಯಲ್ಲಿ ಇಲ್ಲ.

ಜಿಲ್ಲೆಯಲ್ಲಿ ಉದ್ಯೋಗ ಅವಕಾಶಗಳ ಕೊರತೆ ಮುಂದುವರಿದಂತೆಲ್ಲಾ, ಕೌಶಲ ತರಬೇತಿ ಪಡೆದ ಯುವಕರೂ ಸಹ ಬೆಂಗಳೂರಿನಂತರ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಅಧ್ಯಯನದಲ್ಲಿ ಕಂಡುಕೊಂಡ ಮಾಹಿತಿ ಪ್ರಕಾರ ಬಹುತೇಕ ಪ್ರಕರಣಗಳಲ್ಲಿ (ರಿಟೇಲ್, ಸಾಗಣೆ) ಆರಂಭಿಕ ವೇತನ ₹10ರಿಂದ 12 ಸಾವಿರ. ಸಾಮಾಜಿಕ ಭದ್ರತೆ ನಗಣ್ಯ. ಬಾಡಿಗೆ ರೂಮ್, ಹಾಸ್ಟೆಲ್ ಅಥವಾ ಪಿಜಿಯಲ್ಲಿ ವಾಸ. ನಗರದ ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿ ಕೆಲಸ ಮಾಡಿ, ಮನೆಯವರಿಗೆ ಪ್ರತಿ ತಿಂಗಳು ಹಣ ಕಳುಹಿಸುವುದು ಯುವಕರಿಗೆ ಸವಾಲಿನ ಕೆಲಸ. ಹೀಗಾಗಿ ಎಷ್ಟೋ ಯುವಕರು ರಾಯಚೂರಿಗೆ ವಾಪಸಾಗಿದ್ದು, ತಮ್ಮ ಹೊಲದ ಕೆಲಸ, ನಿರ್ಮಾಣ ಕಾಮಗಾರಿ, ಕಡಿಮೆ ಸಂಬಳದ ಡ್ರೈವಿಂಗ್ ಕೆಲಸ, ಹೋಟೆಲ್‌ಗಳಲ್ಲಿ ಸಹಾಯಕರಾಗಿ ದುಡಿಯುತ್ತಿದ್ದಾರೆ. ಕೆಲವರು ಬಹುಕಾಲ ನಿರುದ್ಯೋಗಿಗಳಾಗಿಯೂ ಉಳಿದಿದ್ದಾರೆ.

ಜಿಲ್ಲೆಯು ಸಣ್ಣ ಹಿಡುವಳಿ ಹಾಗೂ ಅನಿರೀಕ್ಷಿತ ಕೃಷಿ ಜೀವನೋಪಾಯವನ್ನು ಹೊಂದಿದ್ದರೂ, ಬಹುತೇಕ ಜನರು ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. 2001ರಲ್ಲಿ ಶೇ 73ರಷ್ಟಿದ್ದ ರೈತರು ಹಾಗೂ ಕೃಷಿ ಕಾರ್ಮಿಕರ ಪ್ರಮಾಣ 2011ರಲ್ಲಿ ಶೇ 70ಕ್ಕೆ ಇಳಿಕೆಯಾಗಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಪ್ರಮಾಣ ಇಡೀ ರಾಜ್ಯದಲ್ಲಿ ಒಟ್ಟಾರೆ ಶೇ 56ರಿಂದ ಶೇ 49ಕ್ಕೆ ಕುಸಿದಿದೆ. ಕೃಷಿಯೇತರ ಚಟುವಟಿಕೆಗಳಿಗೆ ಮಾರ್ಪಾಡಾಗುತ್ತಿರುವ ವೇಗ ಕಡಿಮೆ ಹಾಗೂ ನಿಧಾನಗತಿಯಲ್ಲಿದೆ. ಜಿಲ್ಲೆಯ ಶೇ 28ರಷ್ಟು ಕೆಲಸಗಾರರು ಮಾತ್ರ ಕೃಷಿಯೇತರ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ರಾಜ್ಯದ ಒಟ್ಟಾರೆ ಪ್ರಮಾಣಕ್ಕಿಂತ (ಶೇ 47) ಸಾಕಷ್ಟು ಕಡಿಮೆಯಿದೆ.

ಬೃಹತ್ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ, ಸಣ್ಣ ಉದ್ದಿಮೆಗಳ ಮೂಲಕ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಿ, ಉದ್ಯೋಗ ಸೃಷ್ಟಿಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿಲ್ಲ. 2017–18ರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಈ ಕ್ಷೇತ್ರಕ್ಕೆ ₹50 ಕೋಟಿ ಮಂಜೂರು ಮಾಡಿದೆ. ಪಿಎಂಇಜಿಪಿ ಯೋಜನೆಯಡಿ ವಿವಿಧ ಸಾಲ ಯೋಜನೆಗಳು ಜಾರಿಯಲ್ಲಿವೆ. ಮುಖ್ಯಮಂತ್ರಿಗಳ ಉದ್ಯೋಗ ಖಾತ್ರಿ ಯೋಜನೆ ಇದೆ. ಬಹುಪಾಲು ಅರ್ಧದಷ್ಟು ಉದ್ದಿಮೆಗಳು ರೋಗಗ್ರಸ್ಥವಾಗಿದ್ದು, ಇದು ಜಿಲ್ಲೆಯ ನೀರಸ ಆರ್ಥಿಕ ಸನ್ನಿವೇಶವನ್ನು ಪ್ರತಿಬಿಂಬಿಸುವಂತಿದೆ. ಕೋವಿಡ್–19 ನಗರಗಳಲ್ಲಿ ಆವರಿಸಿರುವ ಕಾರಣ, ಸಾವಿರಾರು ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಇಂತಹ ಸಮಯದಲ್ಲಿ ಜಿಲ್ಲೆಯ ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಭದ್ರ ಚೌಕಟ್ಟನ್ನು ಒಳಗೊಂಡ ಭವಿಷ್ಯದ ನೀತಿಗಳನ್ನು ರೂಪಿಸುವುದು ಅಗತ್ಯ. ಇವು ವಲಸೆ ಪ್ರಕ್ರಿಯೆಯನ್ನು ನಿಯಂತ್ರಿಸುವ ಹಾಗೂ ವಲಸೆ ಹೋದವರು ಜಿಲ್ಲೆಗೆ ಮರಳುವ ರೀತಿಯಲ್ಲಿ ಇರಬೇಕಿದೆ.

ಸಹಕಾರ: ವಿಸಾಖಾ ವಾರಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT