ಬೆಂಗಳೂರು: ರೈತರನ್ನು ಸಂಕಷ್ಟದಿಂದ ಮೇಲೆತ್ತುವ ಸರ್ಕಾರದ ಕಾರ್ಯದಲ್ಲಿ ಖಾಸಗಿ ಸಂಸ್ಥೆಗಳೂ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ರೈತರಿಗೆ ಬಿತ್ತನೆ ಬೀಜಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
‘ಕೋವಿಡ್–19ನಿಂದಾಗಿ ಇಡೀ ದೇಶದ ಆರ್ಥಿಕ ವ್ಯವಸ್ಥೆ ಸಂಕಷ್ಟಕ್ಕೆ ಸಿಲುಕಿದೆ. ಕೃಷಿ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಸಣ್ಣ ಹಿಡುವಳಿದಾರರು ತಮ್ಮ ಬೆಳೆಗಳ ಕಟಾವಿನ ಬಳಿಕ ಮತ್ತು ಕೃಷಿ ಭೂಮಿ ನಿರ್ವಹಣೆಗಾಗಿ ವಲಸೆ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಕೋವಿಡ್ನಿಂದಾಗಿ ಕೃಷಿ ಚಟುವಟಿಕೆ ನಡೆಸಲಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.
ಕೋವಿಡ್ನಿಂದಾಗಿ ಉದ್ಭವಿಸಿರುವ ಸಂಕಷ್ಟದಿಂದ ಹೊರಬರಲು ರಾಜ್ಯದ ಎಲ್ಲ ವರ್ಗದ ಜನರಿಗಾಗಿ ₹2,284 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಲಾಯಿತು. 47.81 ಲಕ್ಷ ರೈತರಿಗೆ ತಲಾ ₹2,000 ವಿತರಿಸಲು ₹956.36 ಕೋಟಿ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಮೆ.ಬಾಯರ್ ಕ್ರಾಪ್ ಸೈನ್ಸ್ ಲಿಮಿಟೆಡ್ ಸಣ್ಣ ರೈತರಿಗೆ ಬಿತ್ತನೆ ಬೀಜಗಳ ಉಚಿತ ಕಿಟ್ಗಳನ್ನು ವಿತರಿಸಿತು.