ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ 80 ವರ್ಷ ಅತಿವೃಷ್ಟಿ, ಅನಾವೃಷ್ಟಿ!

ಕೃಷಿ, ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ: ಕೃಷಿ ಹವಾಮಾನ ತಜ್ಞರ ಸಲಹೆ
Last Updated 23 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿ ಮುಂದಿನ 80 ವರ್ಷಗಳ ಕಾಲ ಅತಿವೃಷ್ಟಿ ಮತ್ತು ಅನಾವೃಷ್ಟಿ ಕಟ್ಟಿಟ್ಟ ಬುತ್ತಿಯಾಗಿದ್ದು, ಅದಕ್ಕೆ ಪೂರಕವಾಗಿ ಕುಡಿಯುವ ನೀರು ಮತ್ತು ನೀರಾವರಿ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ.

ಕೃಷಿ ಹವಾಮಾನ ತಜ್ಞ ಡಾ.ಎಂ.ಬಿ.ರಾಜೇಗೌಡ ಹಿಂದಿನ 105 ವರ್ಷಗಳ ಹವಾಮಾನ ಅಂಕಿ–ಅಂಶದ ಆಧಾರದ ಮೇಲೆ 2100 ನೇ ಇಸವಿವರೆಗೆ ಹವಾಮಾನಮುನ್ಸೂಚನೆಯಅಧ್ಯಯನ ನಡೆಸಿ,ಪರಿಣಾಮಗಳ ವಿಶ್ಲೇಷಣೆ ನಡೆಸಿದ್ದಾರೆ.

ಭವಿಷ್ಯದಲ್ಲಿ ಎದುರಾಗುವ ಸಂಕಷ್ಟದ ದಿನಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಕ್ಕೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ.

ಜಾಗತಿಕ ತಾಪಮಾನದ ಏರಿಕೆಯಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಸ್ಯೆಯು ಮುಂದಿನ ದಿನಗಳಲ್ಲಿ ಸಾಮಾನ್ಯ ಎನಿಸಲಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ಆಹಾರ ಕೊರತೆಯೂ ತೀವ್ರವಾಗಲಿದೆ. ಬರ, ಭಾರಿ ಮಳೆ, ಭೂಕುಸಿತ ಮತ್ತು ಪ್ರವಾಹ ಮರುಕಳಿಸಲಿದೆ. ಮಳೆಗಾಲದ ಬದಲಾವಣೆಯಿಂದ ಹರಿದು ಹೋಗುವ ಮಳೆ ನೀರಿನಲ್ಲಿ ವ್ಯತ್ಯಾಸ, ಮಣ್ಣಿನಲ್ಲಿ ತೇವಾಂಶ ಕೊರತೆ ಮುಂತಾದ ಕಾರಣಗಳಿಂದ ಬೆಳೆ ಇಳುವರಿ ಕುಂಠಿತವಾಗುತ್ತದೆ ಎಂದು ರಾಜೇಗೌಡ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿಯೂ ಮುಂಬರುವ ವರ್ಷಗಳಲ್ಲಿ ಭಾರಿ ಮಳೆ ಮುಂದುವರಿಯುವುದರಿಂದ, ಅಲ್ಲಿನ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತದೆ. ಉತ್ತರ ಕರ್ನಾಟಕದ ಕೆಲವು ನದಿಗಳಿಗೆ ಹರಿದು ಬರುವ ಭಾರಿ ಪ್ರಮಾಣದ ನೀರನ್ನು ತಡೆದುಕೊಳ್ಳುವಷ್ಟು ಆಳ, ಅಗಲ ಮತ್ತು ಸುಲಭವಾಗಿ ಹರಿದು ಹೋಗಲು ಇಳಿಜಾರು ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆಗಳು ಸೃಷ್ಟಿ ಆಗುತ್ತವೆ ಎಂದರು.

ಪರಿಹಾರ ಮಾರ್ಗಗಳೇನು?: ಮಹಾರಾಷ್ಟ್ರ ನಮ್ಮ ರಾಜ್ಯದ ನದಿಗಳಿಗೆ ನೀರು ಬಿಡುವ ಸ್ಥಳಗಳ ಸಮೀಪದಲ್ಲೇ ಕಾಲುವೆಗಳನ್ನು ನಿರ್ಮಿಸಿ ವಿವಿಧ ಜಿಲ್ಲೆಗಳ ಸಾವಿರಾರು ಕೆರೆಗಳನ್ನು ತುಂಬಿಸುವ ಜಾಲಗಳನ್ನು ರೂಪಿಸಬೇಕು. ಗುರುತ್ವಾಕರ್ಷಣೆಯಿಂದ ನೀರು ಹರಿಸಲು ಸಾಧ್ಯವಾಗದೇ ಇದ್ದರೆ, ಅಂತಹ ಕಡೆಗಳಲ್ಲಿ ಏತ ನೀರಾವರಿ ವ್ಯವಸ್ಥೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕಾಲುವೆ ಜಾಲಗಳಿಂದ ಪ್ರಯೋಜನ

lನೆರೆಯ ರಾಜ್ಯಗಳ ನದಿಗಳ ನೀರು ನಮ್ಮ ರಾಜ್ಯ ಪ್ರವೇಶಿಸುವುದಕ್ಕೆ ಮೊದಲೇ ಕಾಲುವೆಗಳ ಮೂಲಕ ಬೇರೆಡೆಗೆ ಹರಿಸುವುದರಿಂದ ಮುಂದೆ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ತಗ್ಗುತ್ತದೆ. ಪ್ರವಾಹ ಉಂಟಾಗುವುದಿಲ್ಲ.

lಕಾಲುವೆಗಳ ಜಾಲದ ಮೂಲಕ ನೀರನ್ನು ಕೆರೆಗೆ ತುಂಬಿಸುವುದರಿಂದ ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೆ ಬಳಸಬಹುದು.

lಸಾವಿರಾರು ಕೆರೆಗಳನ್ನು ನದಿ ನೀರಿನಿಂದ ತುಂಬಿಸುವುದರಿಂದ ಸುತ್ತಲಿನ ಭೂಮಿಯ ಅಂತರ್ಜಲ ಮಟ್ಟವೂ ವೃದ್ಧಿಯಾಗುತ್ತದೆ. ಹೀಗೆ ಅಂತರ್ಜಲ ಮಟ್ಟ ಏರುವುದರಿಂದ ನಂತರದ 3– 4 ವರ್ಷಗಳು ಹವಾಮಾನ ವೈಪರೀತ್ಯದಿಂದ ಮಳೆ ಕಡಿಮೆ ಆದರೂ ಅಂತರ್ಜಲವನ್ನು ಬಳಕೆ ಮಾಡಬಹುದು.

lನಿರಂತರ ಮೂರು ನಾಲ್ಕು ವರ್ಷಗಳು ಬರಗಾಲ ಇದ್ದರೂ ಆ ಬಳಿಕ ಒಂದೆರಡು ವರ್ಷಗಳ ಅತಿವೃಷ್ಟಿಯಿಂದ ನೀರು ಅಧಿಕ ಪ್ರಮಾಣದಲ್ಲಿ ಸಿಗುತ್ತದೆ. ಅದನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಇದರಿಂದ ಕೃಷಿಯಲ್ಲೂ ಸಮತೋಲನ ಸಾಧಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT