ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಶನಿವಾರ ಸಹ ಬಿಡುವು ಕೊಟ್ಟು ಉತ್ತಮ ಮಳೆಯಾಗಿದೆ.
ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ರೈತರು ಜಮೀನಿನತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಬಿರುಸು ಪಡೆದಿವೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟವು 2,859 ಅಡಿಯಾಗಿದ್ದು ಪ್ರಸ್ತುತ 2,810 ಅಡಿ ನೀರಿನ ಸಂಗ್ರಹವಿದೆ. ಜಲಾಶಯದ ಒಳಹರಿವು ಶನಿವಾರ 725 ಕ್ಯುಸೆಕ್ ಇತ್ತು.
ಅಪಾಯದ ಮುನ್ಸೂಚನೆ:
ಸತತ ಮಳೆಗೆ ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವ ರಸ್ತೆಯಲ್ಲೂ (ರಾಜರಾಜೇಶ್ವರಿ ಶಾಲೆ ಬಳಿ) ಬಿರುಕು ಕಾಣಿಸಿಕೊಂಡಿದ್ದು ರಸ್ತೆ ಕುಸಿಯುವ ಆತಂಕ ಎದುರಾಗಿದೆ. ಕಳೆದ ವರ್ಷ ರಸ್ತೆ ಕುಸಿದಿದ್ದ ಸ್ಥಳದಲ್ಲಿ ಸ್ಯಾಂಡ್ಬ್ಯಾಗ್ ಅಳವಡಿಸಿ, ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಅಂಥ ಸ್ಥಳಗಳಲ್ಲಿ ಈಗ ಬಿರುಕು ಕಾಣಿಸಿಕೊಳ್ಳುತ್ತಿದೆ. ಸದ್ಯಕ್ಕೆ ಬ್ಯಾರಿಕೇಡ್ ಹಾಕಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮತ್ತೆ ವರುಣ ಅಬ್ಬರಿಸಿದರೆ ರಸ್ತೆ ಕುಸಿದು ವಾಹನ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.
‘ಎರಡು ದಿನದ ಭಾರೀ ಮಳೆಗೆ ರಸ್ತೆಗಳು ಕುಸಿಯುತ್ತಿವೆ. ರಸ್ತೆ ಕುಸಿದಿದ್ದ ಸ್ಥಳದಲ್ಲಿ ಶಾಶ್ವತವಾಗಿ ತಡೆಗೋಡೆ ನಿರ್ಮಿಸಿದ್ದರೆ ಈ ಮಳೆಗಾಲದಲ್ಲಿ ಅನಾಹುತ ತಪ್ಪಿಸಲು ಸಾಧ್ಯವಿತ್ತು. ಸ್ಯಾಂಡ್ಬ್ಯಾಗ್ ಒಳಗೆ ನೀರು ಸೇರುತ್ತಿದ್ದು ರಸ್ತೆಯೇ ಕುಸಿಯುವ ಅಪಾಯ ಎದುರಾಗಿದೆ’ ಎಂದು ಸ್ಥಳೀಯ ಮುಖಂಡ ಪ್ರಸನ್ನ ಭಟ್ ಹೇಳಿದರು.
ಮೈಸೂರು, ಹಾಸನ ಹಾಗೂ ಆಲೂರಿನಲ್ಲಿ ತುಂತುರು ಮಳೆಯಾಗಿದೆ. ಸಕಲೇಶಪುರದಲ್ಲಿ ಬಿರುಸಿನ ಮಳೆಯಾಗಿದೆ.