ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಕಾಯಕಲ್ಪಕ್ಕೆ ಎಳ್ಳು ನೀರು

ರಾಜ್ಯದ 11 ಪಾಲಿಕೆಗಳ ₹2,707 ಕೋಟಿ ಮೊತ್ತದ ಯೋಜನೆ * 2,512 ಕಿ.ಮೀ ಉದ್ದ
Last Updated 28 ಫೆಬ್ರುವರಿ 2020, 20:23 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದ 11 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಾಜಕಾಲುವೆಗಳಿಗೆ ಕಾಯಕಲ್ಪ ನೀಡಲು ನಗರಾಭಿವೃದ್ಧಿ ಇಲಾಖೆ ರೂಪಿಸಿದ್ದ ₹2,707 ಕೋಟಿ ಮೊತ್ತದ ಯೋಜನೆಗೆ ಈಗ ಎಳ್ಳು ನೀರು ಬಿಡಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೈಸೂರು, ಹುಬ್ಬಳ್ಳಿ–ಧಾರವಾಡ ಸೇರಿದಂತೆ ಎಲ್ಲ 11 ನಗರಪಾಲಿಕೆಗಳ ವ್ಯಾಪ್ತಿಯಲ್ಲಿ 2,512 ಕಿ.ಮೀ ಉದ್ದದಷ್ಟು ಕಾಲುವೆಗಳನ್ನು ಸುಸ್ಥಿತಿಗೆ ತರಲು ಯೋಜನೆ ರೂಪಿಸಲಾಗಿತ್ತು.

ಮಳೆ ನೀರು ಹರಿದು ಹೋಗುವ ಕಾಲುವೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳದಿದ್ದರೆ ಜೋರು ಮಳೆ ಬಂದ ಸಮಯದಲ್ಲಿನೀರು ರಸ್ತೆಗಳ ಮೇಲೆಯೇ ಹರಿಯುತ್ತದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುವುದರ ಜತೆಗೆ ರಸ್ತೆಯೂ ಹಾಳಾಗು
ತ್ತದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಅನಾಹುತಗಳು ಉಂಟಾಗುತ್ತವೆ.

ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿದರೆ ಅನಾಹುತಗಳು ಸಂಭವಿಸದಂತೆ ತಡೆಯಬಹುದು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಸ್ಥಳೀಯ ನಗರ ಸಂಸ್ಥೆಗಳಿಗೆ ಕಷ್ಟಕರವಾಗಲಾರದು ಎಂಬ ಕಾರಣಕ್ಕೆ ರಾಜಕಾಲುವೆಗಳ ದುರಸ್ತಿಗೆಪ್ರಯತ್ನ ನಡೆದಿತ್ತು.

ಮೊದಲ ಹಂತದಲ್ಲಿ ರಾಜ ಕಾಲುವೆಗಳ ಒತ್ತುವರಿ ತೆರವುಗೊಳಿಸುವುದು, ನಂತರ ಹೂಳು ತೆಗೆಯುವುದು, ನೀರು ಹರಿಯುವುದಕ್ಕೆ ಅಡಚಣೆ ಉಂಟುಮಾಡುವ, ಬೆಳೆದು ನಿಂತಿರುವ ಗಿಡ–ಗಂಟಿಗಳನ್ನು ತೆಗೆಸಲುಉದ್ದೇಶಿಸಲಾಗಿತ್ತು. ಕೊನೆಯ ಹಂತದಲ್ಲಿ ತಡೆಗೋಡೆಗಳನ್ನು ದುರಸ್ತಿ ಮಾಡಿ, ಕಾಂಕ್ರೀಟ್‌ನಿಂದ ಸುಭದ್ರಗೊಳಿಸಲು, ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ಕಾಲುವೆಗಳನ್ನು ನಿರ್ಮಿಸಲು, ಕಾಂಕ್ರೀಟ್ ಗೋಡೆಗಳನ್ನು ಕಟ್ಟಿಸಲು ಕಾರ್ಯಯೋಜನೆ ಸಿದ್ಧಪಡಿಸಲಾಗಿತ್ತು.

ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಯು.ಟಿ.ಖಾದರ್ ಈ ಯೋಜನೆಯನ್ನು ಪ್ರಕಟಿಸಿದ್ದರು. ‘ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನೀರು ಹರಿದು ಹೋಗುವ ಕಾಲುವೆಗಳಿಗೆ ಹೊಸರೂಪ ನೀಡಲಾಗುವುದು’ ಎಂದು ಹೇಳಿದ್ದರು.

ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಜಿ.ಪರಮೇಶ್ವರ ಹಾಗೂ ಖಾದರ್ ನಡುವಿನ ತಿಕ್ಕಾಟದಿಂದ ಯೋಜನೆ ಮುಂದೆ ಸಾಗಲಿಲ್ಲ. ನಂತರ ಬಂದ ಬಿಜೆಪಿ ನೇತೃತ್ವದ ಸರ್ಕಾರದಲ್ಲೂ ಇದೇ ಸ್ಥಿತಿ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.

ಅರ್ಧಕ್ಕೆ ನಿಂತಿದೆ...
ಮಳೆ ನೀರು ಕಾಲುವೆಗಳಿಗೆ ಕಾಯಕಲ್ಪ ನೀಡುವ ಪ್ರಯತ್ನ ಮೈತ್ರಿ ಸರ್ಕಾರದಲ್ಲಿ ನಡೆದಿತ್ತು. ಬದಲಾದ ಸನ್ನಿವೇಶದಲ್ಲಿ ಯೋಜನೆಯನ್ನು ಅರ್ಧಕ್ಕೆ ಕೈಬಿಡಲಾಗಿದೆ. ಈಗ ಹೊಸದಾಗಿ ಬಂದಿರುವ ಸರ್ಕಾರ ಕ್ರಮ ಕೈಗೊಂಡರೆ ಯೋಜನೆ ಜಾರಿಗೆ ತರಬಹುದು ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT