ರಾಮನಗರ: ಇಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಗುರುವಾರ ಮತ್ತೆ ಬಾಗಿಲು ತೆರೆಯಿತು. ಮೊದಲ ದಿನದಂದು 160 ಲಾಟ್ ನಷ್ಟು ಗೂಡು ಬಂದಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ಹೊರ ರಾಜ್ಯಗಳಿಂದಲೂ ರೈತರು ಗೂಡು ತಂದಿದ್ದಾರೆ. ಬೆಳಗ್ಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಾವಿರ ಮಂದಿ ಪಾಲ್ಗೊಂಡರು. ಆದರೆ ಸಾಮಾಜಿಕ ಅಂತರ ಎಂಬುದು ಮರೀಚಿಕೆಯಾಗಿದ್ದು, ಜನರು ಕಿಕ್ಕಿರಿದು ನೆರೆದಿದ್ದಾರೆ.
' ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ನೀಡಲಾಗುತ್ತಿದೆ. ಹೆಚ್ಚಿನವರು ಮಾಸ್ಕ್ ಧರಿಸಿದ್ದಾರೆ. ಆದರೆ ಜನರಲ್ಲಿ ಜಾಗೃತಿ ಮೂಡಿಸಿದ್ದಾಗ್ಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಇಲ್ಲಿನ ಪರಿಸ್ಥಿತಿ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು' ಎಂದು ಮಾರುಕಟ್ಟೆ ಉಪ ನಿರ್ದೇಶಕ ಮುನ್ಶಿಬಸಯ್ಯ ತಿಳಿಸಿದರು.
ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ರೇಷ್ಮೆಗೂಡು ಮಾರುಕಟ್ಟೆ ಗಳು ಮಾರ್ಚ್ 25ರಿಂದ ಬಂದ್ ಆಗಿದ್ದವು. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಗುರುವಾರದಿಂದ ಈ ಮಾರುಕಟ್ಟೆಗಳು ತೆರೆದಿವೆ.