ವಿಜಯಪುರ: ಕ್ಯಾಂಟರ್ ಹಾಗೂ ಕ್ರೂಸರ್ ಮಧ್ಯೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ 9 ಮಂದಿ ಯುವಕರುಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಸಿಂದಗಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 218ರ ಚಿಕ್ಕಸಿಂದಗಿ ಬಳಿ ಈ ದುರ್ಘಟನೆ ಸಂಭವಿಸಿದೆ.
ಕ್ರೂಸರ್ ಚಾಲಕನ ಅತಿಯಾದ ವೇಗ ಹಾಗೂ ನಿದ್ರೆಗೆ ಜಾರಿದ್ದೇ ಘಟನೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದವರಾಗಿದ್ದು, ಗೋವಾ ಪ್ರವಾಸ ಮುಗಿಸಿಕೊಂಡು, ಸಿಂದಗಿ ಮೂಲಕ ತಮ್ಮೂರಿಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದ್ದು, ಐದು ಜನರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜಕನಕವಾಗಿದೆ. ಗಾಯಾಳುಗಳನ್ನು ಸಿಂದಗಿ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡುತ್ತಿದ್ದು, ಸಿಂದಗಿ ಪೊಲೀಸರು ರಸ್ತೆ ಸಂಚಾರಕ್ಕೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇನ್ನು ಘಟನೆಗೆ ಯುವಕರು ಹೋಳಿ ಹಬ್ಬ ಆಚರಣೆಗೆ ಬದಲಾಗಿ ಗೋವಾಕ್ಕೆ ತೆರಳಿದ್ರು ಎಂದು ತಿಳಿದು ಬಂದಿದೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೃತರನ್ನು ಸಾಗರ (25), ಚಾಂದಬಾಶಾ (24), ಅಜೀಮ್ (26), ಅಂಬರೀಶ (28), ಶಕೀರ ಕೆ.ಕೆ (25), ಗುರು (32), ಶ್ರೀನಾಥ (30), ಯುನೂಸ್ (27) ಮಂಗಸೂಬ್ (27) ಎಂದು ಗುರುತಿಸಲಾಗಿದೆ.