ಬೆಳಗಾವಿ:‘ಸೋದರ, ಶಾಸಕ ರಮೇಶ ಜಾರಕಿಹೊಳಿ ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ನಾವೂ ಅವರನ್ನು ಹುಡುಕುತ್ತಿದ್ದೇವೆ. ಇದುವರೆಗೂ ಹೈಕಮಾಂಡ್ ಸಂಪರ್ಕಕ್ಕೂ ಸಿಕ್ಕಿಲ್ಲ' ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅವರು ತುಂಬಾ ಹಠವಾದಿ. ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಬೇಸರಗೊಂಡಿದ್ದಾರೆ.ಅವರು ಬಂದ ಮೇಲೆ ಮಾತನಾಡಿಸಮಸ್ಯೆ ಬಗೆಹರಿಸುತ್ತೇವೆ' ಎಂದರು.
‘ಅರಣ್ಯ ಖಾತೆ ನೀಡಿರುವುದಕ್ಕೆ ಅಸಮಾಧಾನ ಇಲ್ಲ. ಅದೂ ದೊಡ್ಡ ಹಾಗೂ ಸಾರ್ವಜನಿಕರಿಗೆ ಹತ್ತಿರವಾದುದು. ಬಹಳ ಕೆಲಸ ಮಾಡುವುದಕ್ಕೆ ಅವಕಾಶವಿದೆ. ಹೀಗಾಗಿ ಅನ್ಯಾಯದ ಪ್ರಶ್ನೆ ಇಲ್ಲ, ಕೊಟ್ಟಿರುವ ಜವಾಬ್ದಾರಿ ನಿರ್ವಹಿಸುತ್ತೇನೆ’ ಎಂದರು.
‘ಸಂಪರ್ಕಕ್ಕೆ ಸಿಗುತ್ತಿಲ್ಲ’ ಬಾಗಲಕೋಟೆ: ‘ರಮೇಶ ಜಾರಕಿಹೊಳಿ ಬೆಳಗಾವಿಯಲ್ಲೇ ಇದ್ದಾರೆ. ಆದರೆ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಮಾತನಾಡಿದ ಅವರು, ‘ರಮೇಶ ಕಾಂಗ್ರೆಸ್ನ ಮನುಷ್ಯ ಅವರೆಲ್ಲೂ ಹೋಗುವುದಿಲ್ಲ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಸ್ವಲ್ಪ ಅಸಮಾಧಾನ ಇರುತ್ತದೆ. ಎಲ್ಲವೂ ಸರಿ ಹೋಗುತ್ತದೆ’ ಎಂದರು.
24 ಗಂಟೆಯಲ್ಲಿ ಸರ್ಕಾರ ಪತನ ಎಂದು ಮಾಜಿ ಸಚಿವ ಉಮೇಶ ಕತ್ತಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ಅವರಿಗೆಲ್ಲಾ ಉತ್ತರ ಕೊಡುವುದಕ್ಕೆ ನಮಗೆ ಬೇರೆ ಕೆಲಸ ಇಲ್ಲವೇ’ ಎಂದರು.