ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳತೆಯ ಕಾಯಕಯೋಗಿ

Last Updated 21 ಜನವರಿ 2019, 20:28 IST
ಅಕ್ಷರ ಗಾತ್ರ

ಬದುಕಿನಲ್ಲಿ ತೀರಾ ಸರಳವಾಗಿದ್ದ ಸ್ವಾಮೀಜಿ, ಆಹಾರದ ವಿಚಾರದಲ್ಲಿಯೂ ಸರಳತೆ ರೂಢಿಸಿಕೊಂಡಿದ್ದರು. ಕಾಯಕ ತತ್ವವನ್ನು ಅಡಿಗಡಿಗೂ ಅನುಸರಿಸಿದ್ದರು. ಕಾಯಕಯೋಗ ಮತ್ತು ಆಹಾರದಲ್ಲಿ ಸರಳತೆ ಅವರ ವ್ಯಕ್ತಿತ್ವವನ್ನು ಹೊಳೆಯುವಂತೆ ಮಾಡಿತು. ಭಕ್ತರ ದೃಷ್ಟಿಯಲ್ಲಿ ಪವಾಡ ಪುರುಷರಾದರು.

ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ದಿನಚರಿ ಅಳವಡಿಸಿಕೊಂಡರೆ ಅದನ್ನು ದೀರ್ಘ ಅವಧಿಯವರೆಗೆ ಪಾಲಿಸುವುದು ಕಷ್ಟ. ಆದರೆ ಸ್ವಾಮೀಜಿ ತಾವು ಅಳವಡಿಸಿಕೊಂಡಿದ್ದ ‘ದಿನಚರಿ’ಯನ್ನು ದೀರ್ಘವಾಗಿ ಅನುಸರಿಸುವ ಮೂಲಕ ಅಸಾಮಾನ್ಯರಾದರು.

ನಿತ್ಯದ ಚಟುವಟಿಕೆ ಆರಂಭವೇ ಬೆಳಗಿನ ಜಾವ 2.15ಕ್ಕೆ. ಇಷ್ಟಲಿಂಗ ಪೂಜೆ, ಮಠದ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ವಹಣೆ, ಬಂದ ಕಾಗದ ಪತ್ರಗಳನ್ನು ಓದಿ ಪ್ರತಿಕ್ರಿಯಿಸುವುದು, ಭಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ದಾಸೋಹ ವ್ಯವಸ್ಥೆಯ ಪರಿಶೀಲನೆ, ದರ್ಶನ, ಹೊಲಗದ್ದೆಗಳಲ್ಲಿ ನಡೆಯುತ್ತಿದ್ದ ಕೆಲಸಗಳ ವೀಕ್ಷಣೆ, ಭಕ್ತರ ಮನೆಗಳಲ್ಲಿ ಪಾದಪೂಜೆ, ಶಿವಪೂಜೆ, ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿ... ಹೀಗೆ ಪ್ರತಿ ಕ್ಷಣವನ್ನು ಅಮೂಲ್ಯವಾಗಿ ವ್ಯಯಿಸಿ ರಾತ್ರಿ 11ಕ್ಕೆ ವಿಶ್ರಾಂತಿಗೆ ಜಾರುತ್ತಿದ್ದರು ಸ್ವಾಮೀಜಿ.

ಈ ದಿನಚರಿ ಅವರು ಮಠದ ಉತ್ತರಾಧಿಕಾರಿಯಾದ 1930ರಿಂದ ಬಹುಶಃ 105ರ ಪ್ರಾಯ ದಾಟುವವರೆಗೂ ಅನುಸರಣೆಯಲ್ಲಿತ್ತು. ಆರೋಗ್ಯದಲ್ಲಿ ವ್ಯತ್ಯಯವಾದ ನಂತರ ಸ್ವಲ್ಪಮಟ್ಟಿಗೆ ಬದಲಾಯಿತು. ಸ್ವಾಮೀಜಿ ಅವರ ದೀರ್ಘಾಯುಷ್ಯಕ್ಕೆ ಬೇವಿನ ಕಷಾಯ ಸೇವನೆಯೂ ಕಾರಣ ಎನ್ನುವ ನಂಬಿಕೆ ಇದೆ. ನಿತ್ಯ ಸಣ್ಣ ಲೋಟದಲ್ಲಿ ಅರ್ಧದಷ್ಟು ಕಷಾಯ ಸೇವಿಸುತ್ತಿದ್ದರು.

‘ಸ್ವಾಮೀಜಿ ಅವರಿಗೆ ಯಾವುದೇ ನಿರ್ದಿಷ್ಟ ಆಹಾರವೇ ಬೇಕು ಎಂದೇನೂ ಇರಲಿಲ್ಲ. ಭಕ್ತರು ಕೊಟ್ಟಿದ್ದನ್ನು ಸ್ವೀಕರಿಸುತ್ತಿದ್ದರು. ಆದರೆ ಹಳ್ಳಿ ಜನರು ಒಬ್ಬಟ್ಟು, ಸೀಕರಣೆ ಇಷ್ಟ ಎಂದು ಮಾಡುತ್ತಿದ್ದರು. ಆದರೆ ಸ್ವಾಮೀಜಿ ಒಂದು ಒಬ್ಬಟ್ಟಿನಲ್ಲಿ ಅರ್ಧ ಮಾತ್ರ ಸೇವಿಸುತ್ತಿದ್ದರು. 30ರಿಂದ 35 ವರ್ಷ ನಿತ್ಯ ಇಡ್ಲಿ ಸೇವಿಸಿದ್ದಾರೆ. ದಿನ ರಾತ್ರಿ ಉಪ್ಪಿಟ್ಟು ಮಾತ್ರ ಸೇವಿಸುತ್ತಿದ್ದರು. ಅನಾರೋಗ್ಯದ ತರುವಾಯ ಅನ್ನ, ಮುದ್ದೆ ಸಾಂಬಾರು ಸೇವಿಸುತ್ತಿದ್ದರು. ನಿತ್ಯ 2 ಬಾರಿ ತಿಂಡಿ, ಒಮ್ಮೆ ಊಟ, ಹಣ್ಣಿನ ರಸ ಅವರ ಆಹಾರದ ಕ್ರಮವಾಗಿತ್ತು’ ಎಂದು ವಿವರಿಸುವರು ಶ್ರೀಗಳ ಸೇವೆಯಲ್ಲಿ ನಿರತರಾಗಿದ್ದ ಕಣ್ಣೂರು ಮಕ್ಕಳ ದೇವರ ಮಠದ ಮೃತ್ಯುಂಜಯ ಸ್ವಾಮೀಜಿ.

ಆಂಧ್ರಪ್ರದೇಶದ ಹಿಂದೂಪುರಕ್ಕೆ ಸ್ವಾಮೀಜಿ ಪ್ರತಿ ವರ್ಷ ಭೇಟಿ ನೀಡುತ್ತಿದ್ದರು. ಆ ಭೇಟಿಯ ಹಿಂದೆ ಆದರ್ಶ ಪ್ರಸಂಗವೊಂದಿದೆ. ಕೊಳಾಲದಲ್ಲಿ ಸಿದ್ದಪ್ಪ ಎಂಬ ಸಿರಿವಂತ ಭಕ್ತರು ಇದ್ದರು. ಅವರಿಗೆ ಮೂವರು ಮಕ್ಕಳು. ಚಿಕ್ಕ ವಯಸ್ಸಿನಲ್ಲಿಯೇ ಸಿದ್ದಪ್ಪ ತೀರಿಕೊಂಡರು. ಅವರ ಮಕ್ಕಳು ಚಿಕ್ಕ ವಯಸ್ಸಿನವರು. ಸಾಯುವ ಮುನ್ನ ಅನಾರೋಗ್ಯದಲ್ಲಿದ್ದ ಸಿದ್ದಪ್ಪ, ತಮ್ಮ ಆಸ್ತಿಯನ್ನು ಸ್ವಾಮೀಜಿ ಅವರ ಹೆಸರಿಗೆ ಬರೆದರು. ಆ ಮಕ್ಕಳು ಪ್ರಾಪ್ತ ವಯಸ್ಕರಾದ ನಂತರ ಸ್ವಾಮೀಜಿ ಆ ಆಸ್ತಿಗಳನ್ನು ಸಿದ್ಧಪ್ಪ ಅವರ ಮಕ್ಕಳ ಹೆಸರಿಗೆ ಬರೆದುಕೊಟ್ಟರು. ಆ ಶ್ರೀಮಂತ ಕುಟುಂಬಗಳು ಈಗ ಹಿಂದೂಪುರದಲ್ಲಿ ವಾಸಿಸುತ್ತಿವೆ. ಅವರು ಪ್ರತಿ ವರ್ಷ ತಮ್ಮ ಮನೆಗೆ ಸ್ವಾಮೀಜಿಯನ್ನು ಕರೆದು ಕೊಂಡು ಹೋಗಿ ಪಾದಪೂಜೆ ಮಾಡುತ್ತಿದ್ದರು.

ಪ್ರಶಾಂತ ಸ್ಥಳಗಳೇ ಅಚ್ಚುಮೆಚ್ಚು: ಮಕ್ಕಳ ಆಟ–ಕಿರುಚಾಟ, ಜನಜಂಗುಳಿಯೊಳಗೆ ಬದುಕಿದ ಶಿವಕುಮಾರ ಸ್ವಾಮೀಜಿ ಅವರಿಗೆ ಪ್ರಶಾಂತವಾದ ತಾಣಗಳು ಅಚ್ಚುಮೆಚ್ಚಾಗಿದ್ದವು. ಅವರ ಬದುಕಿನ ಹಿನ್ನೋಟದಲ್ಲಿ ಹಳೇ ಮಠದ ಅಂಗಳದ ಜತೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪುರುಷನಹಳ್ಳಿ, ಅಲ್ಲಿರುವ ಮಠದ ತೋಟವೂ ಸಾಧನೆಗಳ ತಾಣವಾಗಿ ಗುರುತಾಗಿದೆ.

ಆಗಾಗ್ಗೆ ಆ ಗ್ರಾಮಕ್ಕೆ ಭೇಟಿ ನೀಡಿ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದರು. ತೋಟದ ಪ್ರಶಾಂತ ವಾತಾವರಣ ಆಹ್ಲಾದಿಸುತ್ತಿದ್ದರು. ದೊಡ್ಡಬಳ್ಳಾಪುರ ತಾಲ್ಲೂಕಿನ ಗೂಳ್ಯ, ಅಂಬಲಗೆರೆ ಹಾಗೂ ದಾಬಸ್ ಪೇಟೆ ಬಳಿಯ ಮಾದೇನಹಳ್ಳಿ, ಕರಿಮಣ್ಣೆ, ತಟ್ಟೇಕೆರೆ, ದಾಸೇನಹಳ್ಳಿ ಗ್ರಾಮಗಳು ಸ್ವಾಮೀಜಿ ಅವರಿಗೆ ಆಪ್ತವಾದ ನೆಲಗಳಾಗಿದ್ದವು. ಎಲ್ಲ ಹಳ್ಳಿಗಳ ಭಕ್ತರ ಮನೆಗಳಿಗೆ ಶಿವಪೂಜೆ, ಪಾದಪೂಜೆಗೆ ಸ್ವಾಮೀಜಿ ಹೋದರೂ ಈ ಗ್ರಾಮಗಳ ಸಂಪರ್ಕ ಸ್ವಲ್ಪ ಹೆಚ್ಚು. ಮಾದೇನಹಳ್ಳಿಯ ಭಕ್ತರ ಮನೆಗಳಲ್ಲಿ ಪೂಜೆ ಮುಗಿಸಿ ವಾಸ್ತವ್ಯ ಹೂಡಿದರೆ ನಂತರ ದಾಸೇನಹಳ್ಳಿ, ತಟ್ಟೇಕೆರೆ... ಹೀಗೆ ಮುಂದುವರಿಯುತ್ತಿತ್ತು ಅವರ ಪ್ರವಾಸ.

ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮರಳಿ ಬಂದಾಗ ಕಾರಿನಲ್ಲಿ ಅವರು ವಾಯುಸೇವನೆಗೆ ಹೋಗುತ್ತಿದ್ದದ್ದು ಹಸಿರು ಸಿರಿಯ ದೇವರಾಯನದುರ್ಗ ಹಾಗೂ ನಾಮದ ಚಿಲುಮೆ ಪ್ರದೇಶಗಳಿಗೆ.

* ಪ್ರಪಂಚದಲ್ಲಿ ಧರ್ಮ ಯಾವುದು ಎಂದರೆ ಒಂದೇ ಧರ್ಮ, ಅದು ಮನುಷ್ಯಧರ್ಮ. ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ, ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಧರ್ಮವೇ ಪರಂತು ಧರ್ಮ ಗುಡಿ ಗುಂಡಾರಗಳಲ್ಲಿ ನೆಲೆಸಿಲ್ಲ.

-ಡಾ. ಶಿವಕುಮಾರ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT