ಗುರುವಾರ ಬೆಳಿಗ್ಗೆ ವಿಶ್ವಾಸಮತ ನಡೆಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಒಮ್ಮತಕ್ಕೆ ಬಂದವು. ಆದರೆ, ಗುರುವಾರದವರೆಗೆ ಸದನದ ಕಲಾಪ ನಡೆಸಬೇಕು ಎಂದು ದೋಸ್ತಿ ನಾಯಕರು ಒತ್ತಡ ಹೇರಿದಾಗ. ಬಿಜೆಪಿ ಅದನ್ನು ವಿರೋಧಿಸಿತು. ಒಂದು ವೇಳೆ ಕಲಾಪ ನಡೆಸಲು ಮುಂದಾದರೆ ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿ ಬೆದರಿಕೆ ಒಡ್ಡಿತು. ಬಿಜೆಪಿ ತನ್ನ ಬೇಡಿಕೆಗೆ ಅಂಟಿಕೊಂಡಾಗ, ‘ಲೋಕಸಭೆಯಲ್ಲಿ ಮತ್ತು ರಾಜ್ಯದಲ್ಲಿ ಈ ಹಿಂದೆ ಇಂತಹ ಸ್ಥಿತಿಯನ್ನು ಹೇಗೆ ನಿಭಾಯಿಸಲಾಗಿತ್ತು ಎಂಬುದನ್ನು ನೋಡಿ ಬಳಿಕ ತೀರ್ಮಾನ ಪ್ರಕಟ ಮಾಡುತ್ತೇನೆ’ ಎಂದು ರಮೇಶ್ ಕುಮಾರ್ ಹೇಳಿದರು.