ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ ನಿಯಮ ಪರಿಷ್ಕರಣೆ: ಬಹುತೇಕ ಬೇಡಿಕೆಗಳಿಗೆ ಸಚಿವರ ಅಸ್ತು

ಕರಡು ಸಿದ್ಧ: ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಇದ್ದ ವಿಶೇಷ ವಿನಾಯಿತಿ ರದ್ದು
Last Updated 29 ಜನವರಿ 2020, 2:47 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಎದುರಾಗಿದ್ದ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನೂತನ ಕರಡು ನಿಯಮವನ್ನು ಸರ್ಕಾರ ರೂಪಿಸಿದ್ದು, ‘ಕಡ್ಡಾಯ’ದ ಬದಲು ‘ವಲಯ ವರ್ಗಾವಣೆ’ ಪದ ಬಳಕೆ, ಸಂಘದ ಪದಾಧಿಕಾರಿಗಳಿಗೆ ನೀಡಿದ್ದ ವಿನಾಯಿತಿ ರದ್ದುಗೊಳಿಸುವ ಪ್ರಸ್ತಾವ ಮುಂದಿಡಲಾಗಿದೆ.

50 ವರ್ಷ ಮೇಲ್ಪಟ್ಟ ಶಿಕ್ಷಕಿಯರು, 55 ವರ್ಷ ತುಂಬಿದ ಶಿಕ್ಷಕರಿಗೆ ಹಾಗೂ ಈಗಾಗಲೇ ‘ಸಿ’ ವಲಯದಲ್ಲಿ 10 ವರ್ಷ ಕಾರ್ಯನಿರ್ವಹಿಸಿದವರಿಗೆ ವಲಯ ವರ್ಗಾವಣೆಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಇಲಾಖೆ ಸಿದ್ಧಪಡಿಸಿರುವ ಕರಡಿನ ಕುರಿತು ವಿವರವಾಗಿ ಚರ್ಚಿಸಲಾಯಿತು. ಸರ್ಕಾರಿ ನೌಕರರ ಸಂಘ, ರಾಜ್ಯ ಪ್ರಾಥಮಿಕ ಶಾಲಾಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘಗಳ ಪದಾಧಿಕಾರಿಗಳೂ ಇದ್ದರು. ಬಹುತೇಕ ಮಂದಿ ಕರಡು ನಿರ್ಣಯಕ್ಕೆ ಮೆಚ್ಚುಗೆ ಸೂಚಿಸಿದರು. ವಿಧಾನ ಪರಿಷತ್‌ ಸದಸ್ಯರ ಸಲಹೆ ಪಡೆದ ಬಳಿಕ ಇದನ್ನು ಸಚಿವ ಸಂಪುಟದ ಮುಂದೆ ತರಲಾಗುತ್ತದೆ.

ಇದುವರೆಗೆಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘಗಳ ಪದಾಧಿಕಾರಿಗಳು ವಲಯ ವರ್ಗಾವಣೆಯಿಂದ ವಿನಾಯಿತಿ ಪಡೆಯುತ್ತಿದ್ದರು. ಈ ಕರಡು ನಿಯಮದಲ್ಲಿ ಅದನ್ನು ತೆಗೆದು ಹಾಕಲಾಗಿದೆ. ಪತಿ–ಪತ್ನಿ ಪ್ರಕರಣದಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವವರಿಗೆ ಮಾತ್ರ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ಯಾವುದೇ ವಲಯ ವರ್ಗಾವಣೆಯಲ್ಲಿ ಗುರುತಿಸಿದ ಶಿಕ್ಷಕರ ಹುದ್ದೆಯನ್ನು ಕೋರಿಕೆ ವರ್ಗಾವಣೆಯಲ್ಲಿ ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಅವರನ್ನು ಅದೇ ಹುದ್ದೆಯಲ್ಲಿಯೇ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.

ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ), ಬ್ಲಾಕ್‌ ಸಂಪನ್ಮೂಲ ವ್ಯಕ್ತಿಗಳು (ಬಿಆರ್‌ಪಿ)ಕನಿಷ್ಠ ಅಥವಾ ಗರಿಷ್ಠ ಅವಧಿ ಪೂರ್ಣಗೊಳಿಸಿದ ನಂತರ ಶಾಲೆಗಳಿಗೆ ಮರು ಸ್ಥಳ ನಿಯುಕ್ತಿಗೊಳಿಸುವಾಗ ಶೇ 20ಕ್ಕಿಂತ ಹೆಚ್ಚು ಖಾಲಿ ಇರುವ ತಾಲ್ಲೂಕುಗಳಿಗೆ ಆದ್ಯತೆಯ ಮೇರೆಗೆ ವರ್ಗಾಯಿಸಬೇಕೆಂಬ ನಿಯಮ ಸಡಿಲಿಸಿ, ತಾಲ್ಲೂಕು ಅಥವಾ ಜಿಲ್ಲೆಯ ಯಾವುದೇ ಹುದ್ದೆಗೆ ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗುತ್ತದೆ. ಶಿಕ್ಷಕರ ಕುಂದು–ಕೊರತೆಗಳನ್ನು ಪರಿಹರಿಸಲುವಿಭಾಗೀಯ ನಿರ್ದೇಶಕರನ್ನು ನಿಯೋಜಿಸಲಾಗುತ್ತದೆ.

ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಮರುನಿಯುಕ್ತಿಗೊಳಿಸುವಾಗ ಮೊದಲು ತಾಲ್ಲೂಕು ಹಾಗೂ ಬಳಿಕ ಜಿಲ್ಲಾ ಹಂತಕ್ಕೆ ಸೀಮಿತಗೊಳಿಸುವುದು.ವಿನಾಯಿತಿ, ಆದ್ಯತೆ ಪ್ರಕರಣಗಳಲ್ಲಿ ಏಕ ನೀತಿಯನ್ನು ತರಲು ಪ್ರಸ್ತಾಪಿಸಲಾಗಿದೆ.

ಹಿನ್ನೆಲೆ: ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣಾ ನಿಯಂತ್ರಣ) ಅಧಿನಿಯಮ, 2007ರ ಮೂಲ ಕಾಯ್ದೆಗೆ 2015ರಲ್ಲಿ ಎರಡು ತಿದ್ದುಪಡಿ, 2017 ಮತ್ತು 2018–19ರಲ್ಲಿ ತಲಾ ಒಂದೊಂದು ತಿದ್ದುಪಡಿ ತರಲಾಗಿದೆ. 2017ರಲ್ಲಿ ಜಾರಿಯಲ್ಲಿದ್ದ ನಿಯಮಕ್ಕೆ 2019ರಲ್ಲಿ ಒಂದು ತಿದ್ದುಪಡಿ ತರಲಾಗಿದೆ. ಇದೀಗ ಈ ಕಾಯ್ದೆಯ ಆಶಯವನ್ನೇ ಬಿಂಬಿಸುವ, ಪರಿಷ್ಕೃತ ಕರಡು ಸಿದ್ಧಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT