ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಾಖಪಟ್ಟಣದಲ್ಲಿ ದುರಂತ l ಅನಿಲ ಸೋರಿ 11 ಸಾವು: ನೂರಾರು ಮಂದಿ ಅಸ್ವಸ್ಥ

ನಿಯಂತ್ರಣಕ್ಕೆ ಬಂದ ಸೋರಿಕೆ
Last Updated 7 ಮೇ 2020, 21:05 IST
ಅಕ್ಷರ ಗಾತ್ರ
ADVERTISEMENT
""

ವಿಶಾಖಪಟ್ಟಣ/ನವದೆಹಲಿ:ವಿಶಾಖಪಟ್ಟಣ ಸಮೀಪದ ರಾಸಾಯನಿಕ ಘಟಕದಲ್ಲಿ ಗುರುವಾರ ಬೆಳಗಿನ ಜಾವ 2.30ರ ಹೊತ್ತಿಗೆ ಸ್ಟೈರೀನ್‌ ಮೊನೊಮರ್‌ ಅನಿಲ ಸೋರಿಕೆಯಾಗಿ 11 ಮಂದಿ ಮೃತಪಟ್ಟಿದ್ದಾರೆ. ಅನಿಲ ಸೋರಿಕೆಯಿಂದ ಸುಮಾರು ಸಾವಿರ ಮಂದಿ ಅಸ್ವಸ್ಥರಾಗಿದ್ದಾರೆ. ವಿಷಾನಿಲದಿಂದ ತಪ್ಪಿಸಿಕೊಳ್ಳಲು ಓಡಿದ ಹಲವು ಮಂದಿ ರಸ್ತೆಯಲ್ಲಿಯೇ ಕುಸಿದು ಬಿದ್ದರು.

ಮೃತಪಟ್ಟವರಲ್ಲಿ ಒಂದು ಮಗುವೂ ಸೇರಿದೆ. ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದ ಇಬ್ಬರು ಚರಂಡಿಗೆ ಬಿದ್ದು ಸತ್ತಿದ್ದಾರೆ.

ಆರ್‌.ಆರ್‌. ವೆಂಕಟಾಪುರಂ ಗ್ರಾಮದಲ್ಲಿರುವ ದಕ್ಷಿಣ ಕೊರಿಯಾದ ಎಲ್‌.ಜಿ. ಕೆಮ್‌ ಕಂಪನಿಯ ಮಾಲೀಕತ್ವದ ಎಲ್‌.ಜಿ. ಪಾಲಿಮರ್ಸ್‌ ಘಟಕದಿಂದ ಸ್ಟೈರೀನ್‌‌ ಅನಿಲ ಸೋರಿಕೆ ಆಗಿದೆ. ವಿಷಾನಿಲದ ಪರಿಣಾಮವಾಗಿ ಜನರು ರಸ್ತೆ, ರಸ್ತೆ ಬದಿ, ಚರಂಡಿಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ದೃಶ್ಯ ಮನ ಕಲಕುವಂತಿತ್ತು.

ರಕ್ಷಣೆ ಮತ್ತು ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪ್ರಜ್ಞೆ ತಪ್ಪಿದ್ದವರು ಮತ್ತು ಉಸಿರಾಡಲು ಹರಸಾಹಸಪಡುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದರು. 20 ಮಂದಿ ತೀವ್ರವಾಗಿ ಅಸ್ವಸ್ಥರಾಗಿದ್ದು ಅವರಿಗೆ ಜೀವ ರಕ್ಷಕ ವ್ಯವಸ್ಥೆ ಅಳವಡಿಸಲಾಗಿದೆ. 246 ಮಂದಿಯಲ್ಲಿ ವಿವಿಧ ಅನಾರೋಗ್ಯ ಕಾಣಿಸಿಕೊಂಡಿದೆ. ಅವರೆಲ್ಲರೂ ವಿಶಾಖಪಟ್ಟಣದ ಕಿಂಗ್‌ ಜಾರ್ಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೆಂಕಟಾಪುರಂನಲ್ಲಿ ಇದ್ದ ಸುಮಾರು 800 ಮಂದಿಯನ್ನು ತೆರವು ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರಿಗೆ ಪ್ರಥಮ ಚಿಕಿತ್ಸೆಯಷ್ಟೇ ಅಗತ್ಯ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿಯ ಕತ್ತಲಲ್ಲಿ ನೆರವಿಗಾಗಿ ಜನರ ಕೂಗು ಮುಗಿಲು ಮುಟ್ಟಿತ್ತು. ಹಲವರು ಪ್ರಜ್ಞೆ ಕಳೆದುಕೊಂಡರು. ಕೆಲವು ಮಂದಿ ನಿದ್ದೆಯಲ್ಲಿಯೇ ಪ್ರಜ್ಞಾಹೀನ ಅವಸ್ಥೆಗೆ ಜಾರಿದ್ದರು ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ರಕ್ಷಣಾ ಕಾರ್ಯಕ್ಕೆ ಧಾವಿಸಿ ಬಂದ ಸಿಬ್ಬಂದಿಯಲ್ಲಿ ಕೆಲವರಿಗೂ ಉಸಿರಾಟದ ತೊಂದರೆ, ಕಣ್ಣು ಉರಿ ಇತ್ಯಾದಿ ಕಾಣಿಸಿಕೊಂಡಿದೆ. ಕಾರ್ಖಾನೆಯಲ್ಲಿ 20ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಸೂಕ್ತ ಅರಿವು ಇತ್ತು. ಹಾಗಾಗಿ, ಅವರಿಗೆ ಯಾವುದೇ ತೊಂದರೆ ಆಗಿಲ್ಲ.

ಎಲ್‌ ಜಿ.ಕೆಮ್‌ ನಲ್ಲಿ ಅತ್ಯುನ್ನತ ಮಟ್ಟದ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 40 ದಿನಗಳ ಲಾಕ್‌ಡೌನ್‌ ಅವಧಿಯಲ್ಲಿ, ಸ್ಟೈರೀನ್‌ ಮೊನೊಮರ್‌ ಅನಿಲವು 2500 ಟನ್‌ ಸಾಮರ್ಥ್ಯದ ತೊಟ್ಟಿಯ ಖಾಲಿ ಸ್ಥಳವನ್ನು ಆವರಿಸಿರಬಹುದು. ಇದುವೇ ದುರಂತಕ್ಕೆ ಕಾರಣ ಆಗಿರಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸ್ಟೈರೀನ್ ಇರಿಸಿದ್ದ ಎರಡು ತೊಟ್ಟಿಗಳ ರೆಫ್ರಿಜರೇಷನ್‌ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷವೇ ಸೋರಿಕೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಶುಕ್ರವಾರದಿಂದ ಕಾರ್ಖಾನೆಯಲ್ಲಿ ಕೆಲಸ ಆರಂಭಿಸಲು ಆಡಳಿತ ಮಂಡಳಿಯು ಸಿದ್ಧತೆ ನಡೆಸಿತ್ತು. ಅದಕ್ಕಾಗಿ 45 ಸಿಬ್ಬಂದಿಗೆ ಪಾಸ್‌ ಪಡೆದುಕೊಂಡಿತ್ತು. ದುರಂತ ನಡೆದಾಗ ಕಾರ್ಖಾನೆಯಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಒಳಗೆ ಯಾವುದೇ ಅನಾಹುತ ಸಂಭವಿಸಿದ ವರದಿ ಇಲ್ಲ. ಕಾರ್ಖಾನೆಯಲ್ಲಿ ಸುಮಾರು 500 ಕಾರ್ಮಿಕರು ಇದ್ದಾರೆ. ಅವರಲ್ಲಿ ಹೆಚ್ಚಿನವರು ಸುತ್ತಲಿನ ಹಳ್ಳಿಗಳವರೇ ಆಗಿದ್ದಾರೆ.

ಭಾರತದ ಪಾಲಿಸ್ಟೈರೀನ್‌ ಉದ್ಯಮದಲ್ಲಿ ಎಲ್‌ಜಿ ಕೆಮ್‌ನ ಪಾಲು ಶೇ 35ರಿಂದ ಶೇ 40ರಷ್ಟಿದೆ.

ಏನಿದು ಸ್ಟೈರೀನ್‌: ಸಿಂಥೆಟಿಕ್‌ ರಬ್ಬರ್‌ ಮತ್ತು ರಾಳ ತಯಾರಿಕೆಗೆ ಈ ರಾಸಾಯನಿಕವನ್ನು ಬಳಸಲಾಗುತ್ತದೆ. ಇದನ್ನು ಉಸಿರಾಡಿದರೆ ನರವ್ಯೂಹದ ಮೇಲೆ ಪರಿಣಾಮ ಉಂಟಾಗುತ್ತದೆ. ಗಂಟಲು, ಚರ್ಮ, ಕಣ್ಣು ಮತ್ತು ದೇಹದ ಇತರ ಕೆಲವು ಭಾಗಗಳಲ್ಲಿ ಉರಿ ಉಂಟಾಗುತ್ತದೆ. ವೆಂಕಟಾಪುರದಲ್ಲಿ ಕೂಡ ಗ್ರಾಮಸ್ಥರು ಮತ್ತು ಮಕ್ಕಳಲ್ಲಿ ಇಂತಹ ಲಕ್ಷಣಗಳೇ ಕಾಣಿಸಿಕೊಂಡಿವೆ.

ಎಲ್‌.ಜಿ. ಕೆಮ್‌ನಲ್ಲಿ ತಯಾರಿಸಲಾಗುವ ಪಾಲಿಸ್ಟೈರೀನ್‌ ಎಂಬ ಪದಾರ್ಥ ರೆಫ್ರಿಜರೇಟರ್‌, ವಾಷಿಂಗ್‌ ಮೆಷೀನ್‌, ಹವಾ ನಿಯಂತ್ರಣ ಯಂತ್ರ, ಟಿ.ವಿ., ಕಂಪ್ಯೂಟರ್‌, ವೈದ್ಯಕೀಯ ಉಪಕರಣಗಳೆಲ್ಲದರಲ್ಲಿಯೂ ಬಳಕೆಯಾಗುತ್ತದೆ.

ಭೋಪಾಲ್‌ ನೆನಪು: ಅನಿಲ ಸೋರಿಕೆ ಪ್ರದೇಶದ ದೃಶ್ಯಗಳು, 1984ರಲ್ಲಿ ಭೋಪಾಲ್‌ನಲ್ಲಿ ಸಂಭವಿಸಿದ ಅನಿಲ ದುರಂತವನ್ನು ನೆನಪಿಸುವಂತಿದ್ದವು. ಭೋಪಾಲ್‌ನಲ್ಲಿ ಯೂನಿಯನ್‌ ಕಾರ್ಬೈಡ್‌ ಕಂಪನಿಯಲ್ಲಿ ಆಗಿದ್ದ ಸೋರಿಕೆಯಿಂದ ಮೂರು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಆಗಿರುವ ಅನಾಹುತಗಳಿಗೆ ಸಂಬಂಧಿಸಿ ಎರಡೂ ಪ್ರಕರಣಗಳ ನಡುವೆ ಹೋಲಿಕೆ ಇಲ್ಲ. ಆದರೆ, ಬೇರೆ ಕೆಲವು ಹೋಲಿಕೆಗಳಿವೆ. ಎರಡೂ ಪ್ರಕರಣಗಳು ರಾತ್ರಿಯಲ್ಲಿ ಜನರು ನಿದ್ದೆ ಮಾಡಿದ್ದ ಸಂದರ್ಭದಲ್ಲಿಯೇ ನಡೆದಿವೆ. ಭೋಪಾಲ್‌ ದುರಂತಕ್ಕೆ ನಿರ್ವಹಣೆಯಲ್ಲಿನ ನಿರ್ಲಕ್ಷ್ಯವೇ ಕಾರಣ. ವೆಂಕಟಾಪುರದ ಘಟನೆಗೂ ಕಾರ್ಖಾನೆಯ ಆಡಳಿತ ವರ್ಗದ ಅಲಕ್ಷ್ಯ ಕಾರಣ ಎನ್ನಲಾಗುತ್ತಿದೆ.

ಆರು ದಶಕದ ಕಂಪನಿ: ಅನಿಲ ಸೋರಿಕೆಯಾದ ಕಾರ್ಖಾನೆಯು ಈ ಸ್ಥಳದಲ್ಲಿ ಆರು ದಶಕದಿಂದ ಇದೆ. ಈ ಅವಧಿಯಲ್ಲಿ ಇದರ ಮಾಲೀಕತ್ವ ಎರಡು ಕೈ ಬದಲಾಗಿದೆ. ಈಗ, ದಕ್ಷಿಣ ಕೊರಿಯಾದ ಎಲ್‌.ಜಿ.ಯ ಬಳಿ ಇದರ ಸ್ವಾಮ್ಯ ಇದೆ.

1961ರಲ್ಲಿ ಸ್ಥಾಪನೆಯಾದಾಗ ಇದರ ಹೆಸರು ಹಿಂದುಸ್ತಾನ್‌ ಪಾಲಿಮರ್ಸ್‌ ಎಂದಾಗಿತ್ತು. 1978ರಲ್ಲಿ ಇದು ಮೆಕ್‌ಡೊವೆಲ್‌ ಎಂಡ್‌ ಕೊ ಲಿ. ಜತೆ ವಿಲೀನವಾಯಿತು. ಮಲ್ಯ ಅವರ ಯುಬಿ ಸಮೂಹದ ಕಂಪನಿ ಇದು.

1997ರಲ್ಲಿ ಮತ್ತೊಂದು ಬದಲಾವಣೆ ಉಂಟಾಯಿತು. ಎಲ್‌.ಜಿ. ಕೆಮ್‌ ಇದನ್ನು ಖರೀದಿಸಿ, ಎಲ್‌ ಜಿ ಪಾಲಿಮರ್ಸ್‌ ಇಂಡಿಯಾ ಪ್ರೈ.ಲಿ. ಎಂದು ಹೆಸರು ಬದಲಿಸಿತು.

ರಾಜ್ಯದಲ್ಲಿವೆ 55 ಎಲ್‌ಪಿಜಿ ಬಾಟ್ಲಿಂಗ್‌ ಘಟಕಗಳು
ಬೆಂಗಳೂರು: ರಾಜ್ಯದಲ್ಲಿ ಮಂಗಳೂರು ಮತ್ತು ಕಾರವಾರ ಹೊರತು ಪಡಿಸಿದರೆ, ಬೇರೆ ಎಲ್ಲಿಯೂ ವಿಶಾಖಪಟ್ಟಣದ ಎಲ್‌ಜಿ ಪಾಲಿಮರ್ಸ್‌ ಮಾದರಿಯ ಕಾರ್ಖಾನೆಗಳು ಇಲ್ಲ. ಆದರೆ, 55ಕ್ಕೂ ಹೆಚ್ಚು ಎಲ್‌ಪಿಜಿ ಬಾಟ್ಲಿಂಗ್‌ ಕಾರ್ಖಾನೆಗಳಿದ್ದು, ಸ್ವಲ್ಪ ಎಚ್ಚರ ತಪ್ಪಿದರೆ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದುಕೈಗಾರಿಕೆ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಎಚ್ಚರಿಸುತ್ತಾರೆ.

ಮಂಗಳೂರಿನ ಎಂಸಿಎಫ್‌ನಲ್ಲಿ ಅಮೊನಿಯಾ ಹಾಗೂ ಕಾರವಾರದಲ್ಲಿ ಕ್ಲೋರಿನ್‌ ಅನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ ಕೈಗಾರಿಕೆಗಳಿವೆ. ವಿಶಾಖಪಟ್ಟಣದಲ್ಲಿ ಸೋರಿಕೆಯಾದ ಸ್ಟೈರಿನ್‌ ಮಾದರಿಯ ವಿಷಕಾರಕ ರಾಸಾಯನಿಕಗಳಿವು. ಸುಮಾರು 5000 ಟನ್‌ ಸಾಮರ್ಥ್ಯದ ಅಮೊನಿಯಾ ಅಥವಾ ಕ್ಲೋರಿನ್‌ ಅನ್ನು ಈ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಹೊರತುಪಡಿಸಿದರೆ ಹಲವು ಕಾರ್ಖಾನೆಗಳಲ್ಲಿ ಒಂದು ಟನ್‌ ಅಥವಾ ಎರಡು ಟನ್‌ನಷ್ಟು ಬಳಸಲಾಗುವುದರಿಂದ ಹೆಚ್ಚು ಅಪಾಯ ಇಲ್ಲ.

ಎಲ್‌ಪಿಜಿ ಬಾಟ್ಲಿಂಗ್‌ ಘಟಕಗಳಲ್ಲಿ ಎಲ್‌ಪಿಜಿ ತಂದು, ಸಂಗ್ರಹಿಸಿ, ಅವುಗಳನ್ನು ಸಿಲಿಂಡರ್‌ಗೆ ತುಂಬಿಸಲಾಗುತ್ತದೆ. ನಂತರ, ಅವುಗಳನ್ನು ಮನೆಗಳಿಗೆ ಹಾಗೂ ಹೋಟೆಲ್‌ಗಳಿಗೆ ಸಾಗಿಸಲಾಗುತ್ತದೆ. ಅಡುಗೆ ಅನಿಲವನ್ನು ಸಿಲಿಂಡರ್‌ಗೆ ತುಂಬಿಸುವ ಹಂತದಲ್ಲಿ ಎಚ್ಚರ ತಪ್ಪಿದರೆ ಅಗ್ನಿ ದುರಂತ ಸಂಭವಿಸುವ ಅಪಾಯ ಇರುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ 37 ಪ್ರಾದೇಶಿಕ ಅಧಿಕಾರಿಗಳು ಇದ್ದಾರೆ. ಇಂತಹ ಅವಘಡಗಳು ಸಂಭವಿಸದಂತೆ ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಬೇಕು ಎಂಬ ಮಾಹಿತಿಯನ್ನು ಈ ಅಧಿಕಾರಿಗಳಿಗೆ ಕಳಿಸುತ್ತೇವೆ. ಆಯಾ ಪ್ರದೇಶದಲ್ಲಿನ ಕಾರ್ಖಾನೆಗಳಲ್ಲಿನ ಸುರಕ್ಷತೆ ಕುರಿತು ಇವರು ಪರಿಶೀಲನೆ ನಡೆಸುತ್ತಾರೆ. ಸುರಕ್ಷತಾ ಕ್ರಮಗಳ ಕುರಿತು ಸಂಬಂಧಪಟ್ಟ ಕಾರ್ಖಾನೆ ಸಿಬ್ಬಂದಿಗೆ ಮಾಹಿತಿ ಮತ್ತು ತಿಳಿವಳಿಕೆ ನೀಡಲಾಗುತ್ತದೆ’ ಎಂದು ಅವರು ತಿಳಿಸಿದರು.

**

* ಲಾಕ್‌ಡೌನ್‌ ತೆರವಾದ ಕಾರಣಕ್ಕೆ ಕಾರ್ಖಾನೆ ತೆರೆಯಲು ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲಿ ಅನಿಲ ಸೋರಿಕೆ ಉಂಟಾಗಿದೆ.
* ಮೃತಪಟ್ಟವರ ಕುಟುಂಬಕ್ಕೆ ತಲಾ ₹1 ಕೋಟಿ ಪರಿಹಾರ ನೀಡುವುದಾಗಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಘೋಷಿಸಿದ್ದಾರೆ.
* ಜಾನುವಾರು ಮತ್ತು ಹಕ್ಕಿಗಳು ಕೂಡ ಅನಿಲ ಸೋರಿಕೆಯಿಂದಾಗಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದವು.
* ಛತ್ತೀಸಗಡದ ರಾಯಗಡ ಜಿಲ್ಲೆಯ ಕಾಗದ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆ ಪ್ರಕರಣ ವರದಿಯಾಗಿದೆ. ಏಳು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಲಾಕ್‌ಡೌನ್‌ ನಿರ್ಬಂಧ ತೆರವು ಬಳಿಕ ಕಾರ್ಯಾಚರಣೆ ಆರಂಭಿಸಲು ಕಾರ್ಮಿಕರು ತೊಟ್ಟಿ ಶುಚಿಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕಾರ್ಖಾನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT