ಬೆಂಗಳೂರು: ‘ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಎಲ್ಲಿದ್ದಾರೆ. ಆರೋಪಿಯೇ ದೇಶದಲ್ಲಿ ಇಲ್ಲ ಎನ್ನುತ್ತಿರುವಾಗ ಸಾಕ್ಷಿದಾರರಿಗೆ ವಾರಂಟ್ ಹೊರಡಿಸಿ ಏನು ಸಾಧಿಸುತ್ತೀರಿ’ ಎಂದು ಹೈಕೋರ್ಟ್, ರಾಜ್ಯ ಪ್ರಾಸಿಕ್ಯೂಷನ್ ಅನ್ನು ಮೌಖಿಕವಾಗಿ ಪ್ರಶ್ನಿಸಿದೆ.
‘ನಿತ್ಯಾನಂದ ವಿರುದ್ಧ ರಾಮನಗರದ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು’ ಎಂದು ಕೋರಿ ದೂರುದಾರ ಕೆ.ಲೆನಿನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಲೆನಿನ್ ಪರ ವಕೀಲರು, ‘ಪ್ರಕರಣದಲ್ಲಿ ಲೆನಿನ್ ಸಾಕ್ಷಿದಾರರು. ಆದರೆ, ಅವರಿಗೆ ವಾರಂಟ್ ಹೊರಡಿಸಲಾಗಿದೆ. ಅಧೀನ ನ್ಯಾಯಾಲಯದಲ್ಲಿ ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಯುತ್ತಿಲ್ಲ. ಆರೋಪಿ ದೇಶ ಬಿಟ್ಟು ಹೋಗಿದ್ದಾರೆ’ ಎಂದು ದೂರಿದರು.
ಇದಕ್ಕೆ ಪ್ರತಿಯಾಗಿ ರಾಜ್ಯ ಪ್ರಾಸಿಕ್ಯೂಷನ್ ಪರ ವಕೀಲ ವಿ.ಎಸ್.ಹೆಗಡೆ, ‘ಈ ಪ್ರಕರಣದಲ್ಲಿ ನ್ಯಾಯಾಧೀಶರು ಹಾಗೂ ಪ್ರಾಸಿಕ್ಯೂಟರ್ ವಿರುದ್ಧವೇ ಆರೋಪ ಮಾಡಲಾಗಿದೆ. ಈ ಕುರಿತ ಪ್ರತಿಯೊಂದು ದಾಖಲೆಗಳನ್ನೂ ಹಾಜರುಪಡಿಸಲು ಸಿದ್ಧರಿದ್ದೇವೆ’ ಎಂದರು.