ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷೆಯ ಮೂರನೇ ಚಂದ್ರಯಾನ –3 ಉಡ್ಡಯನ ಯಶಸ್ವಿಯಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಮಧಾಹ್ನ 2.35ಕ್ಕೆ ಲ್ಯಾಂಡರ್ (ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ) ಹೊತ್ತ ರಾಕೆಟ್ ಆಗಸಕ್ಕೆ ಹಾರಿತು.
ರಾಕೆಟ್ ನಭಕ್ಕೆ ಚಿಮ್ಮುತ್ತಿದ್ದಂತೆ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಮುಖದಲ್ಲಿ ಸಂತಸ ಮೂಡಿತು.
2019ರಲ್ಲಿ ಕೈಗೊಂಡಿದ್ದ ‘ಚಂದ್ರಯಾನ–2’ ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ವಿಫಲವಾಗಿತ್ತು. ಹಾಗಾಗಿ, ಈ ಬಾರಿ ವಿಜ್ಞಾನಿಗಳು ‘ಸಾಫ್ಟ್ ಲ್ಯಾಂಡಿಂಗ್’ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. ಲ್ಯಾಂಡರ್ಗೆ ಯಾವುದೇ ರೀತಿಯ ಹಾನಿ ಆಗದಂತೆ, ಅದನ್ನು ಚಂದ್ರನ ಮೇಲೆ ಇಳಿಸುವುದನ್ನು ‘ಸಾಫ್ಟ್ ಲ್ಯಾಂಡಿಂಗ್’ ಎಂದು ಕರೆಯುತ್ತಾರೆ. ವಿಜ್ಞಾನಿಗಳು ಇಂಥ ತಂತ್ರಗಾರಿಕೆಯನ್ನು ಕರಗತ ಮಾಡಿಕೊಳ್ಳುವ ಗುರಿ ಹೊಂದಿದ್ದಾರೆ.
ಚಂದ್ರನಲ್ಲಿ ಭೂಮಿಗಿಂತ ಕಡಿಮೆ ಗುರುತ್ವಾಕರ್ಷಣ ಶಕ್ತಿ ಇರುವುದರಿಂದ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವಂತೆ ಮಾಡುವುದು ಸವಾಲಿನ ಕಾರ್ಯ. ಈ ಬಾರಿಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ‘ಸಾಫ್ಟ್ ಲ್ಯಾಂಡಿಂಗ್’ನಲ್ಲಿ ಯಶಸ್ಸು ಸಿಕ್ಕಲ್ಲಿ, ಭಾರತವು ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ. ಅಮೆರಿಕ, ಚೀನಾ ಹಾಗೂ ಈ ಹಿಂದಿನ ಸೋವಿಯತ್ ಒಕ್ಕೂಟ ಈ ಸಾಧನೆ ಮಾಡಿರುವ ಇತರ ದೇಶಗಳಾಗಿವೆ.
ಇವನ್ನೂ ಓದಿ...
Chandrayaan-3 | ನಿಗದಿತ ಕಕ್ಷೆ ಸೇರಿದ ಚಂದ್ರಯಾನ–3
ಚಂದ್ರಯಾನ–2 ಹಾಗೂ 3 : ಎರಡೂ ಯೋಜನೆಗಳ ವಿಶೇಷ ಇಲ್ಲಿದೆ