ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಟ್ವೀಟಿಸಿದ್ದಾರೆ.
ಸಣ್ಣ ಉಳಿತಾಯ ಯೋಜನೆಗಳ ಮೇಲೆ ಗರಿಷ್ಠ ಶೇ1.1ರ ವರೆಗೆ ಬಡ್ಡಿ ಇಳಿಕೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಾಹಿತಿ ನೀಡಿದ್ದರು.
ಈ ಕುರಿತು ಗುರುವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ಅವರು, 'ಬಡ್ಡಿದರ ಪರಿಷ್ಕೃತಗೊಳಿಸಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ' ಎಂದು ತಿಳಿಸಿದ್ದಾರೆ. ಇದು ಕಣ್ತಪ್ಪಿನಿಂದ ಆಗಿರುವ ಪ್ರಮಾದವೆಂಬ ಸಮಜಾಯಿಷಿಯನ್ನೂ ಅವರು ನೀಡಿದ್ದಾರೆ.
ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಟ್ವೀಟಿಗರು, 'ನಮ್ಮನ್ನು ಮೂರ್ಖರನ್ನಾಗಿಸಲು ಮೂರ್ಖರ ದಿನದಂದೇ ಪ್ರಯತ್ನಿಸಿಲಾಗಿದೆ' ಎಂದು ಕುಹಕವಾಡಿದ್ದಾರೆ.
ಒಂದು ವೇಳೆ ಈಗ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ಇರದೇ ಹೋಗಿದ್ದರೆ 'ಕಣ್ತಪ್ಪಿನಿಂದ ಪ್ರಮಾದ' ನಡೆಯುತ್ತಿರಲಿಲ್ಲವೆಂದು ಕೆಲವರು ಕುಟುಕಿದ್ದಾರೆ.
ಈ ಕಾರಣಕ್ಕಾಗಿಯೇ 'ಒಂದು ದೇಶ, ಒಂದು ಚುನಾವಣೆ'ಯನ್ನು ನಾವು ಒಪ್ಪಿಕೊಳ್ಳುತ್ತಿಲ್ಲ. ವರ್ಷವೀಡಿ ಚುನಾವಣೆಗಳು ನಡೆದರೆ ಮಾತ್ರ ಸರ್ಕಾರಗಳು ಜನರ ಬಗ್ಗೆ ಕಾಳಜಿ ತೋರಿಸುತ್ತವೆ ಎಂದು ಕೆಲ ಟ್ವೀಟಿಗರು ನಗೆಚಟಾಕಿ ಹಾರಿಸಿದ್ದಾರೆ.
'ಅಚ್ಚೇ ದಿನ್ ಆನೇವಾಲೆ ಹೈ' ಎಂಬ ಘೋಷಣೆಯೂ ಸಹ ಕಣ್ತಪ್ಪಿನಿಂದ ಆಗಿದೆ. ಅದನ್ನು ಮರಳಿ ಪಡೆಯಲಾಗಿದೆ ಎಂದು ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದಲ್ದಾನಿ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಕುಟುಕಿದ ಆಸಕ್ತಿದಾಯಕ ಟ್ವೀಟ್ಗಳು ಇಲ್ಲಿವೆ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.