ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾನಾ ಟಾಪ್‌ಲೆಸ್‌ ಫೋಟೊದಲ್ಲಿ ಗಣೇಶ ಮೂರ್ತಿಯ ಪೆಂಡಂಟ್‌; ಟ್ವೀಟಿಗರ ಆಕ್ರೋಶ

Last Updated 17 ಫೆಬ್ರುವರಿ 2021, 4:49 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಬರ್ಬಡಿಯನ್‌ ಪಾಪ್‌ ಗಾಯಕಿ ರಿಯಾನಾ ಬೆಂಬಲ ಸೂಚಿಸಿ ಟ್ವೀಟಿಸಿದ್ದರು. ಅದು ದೇಶದಾದ್ಯಂತ ಪರ–ವಿರೋಧಗಳ ದೊಡ್ಡ ಚರ್ಚೆಗೆ ಕಾರಣವಾಯಿತು. ಈಗ ತನ್ನ ಅರೆನಗ್ನ (ಟಾಪ್‌ಲೆಸ್‌) ಚಿತ್ರ ಪ್ರಕಟಿಸಿಕೊಂಡಿರುವ ಅವರು ಗಣೇಶ ಮೂರ್ತಿಯ ಸರದ ಪದಕದ ಕಾರಣದಿಂದಾಗಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಟಾಪ್‌ಲೆಸ್‌ ಫೋಟೊದಲ್ಲಿ ರಿಯಾನಾ ಗಣೇಶ ಮೂರ್ತಿಯ ಪೆಂಡಂಟ್‌ ಧರಿಸಿರುವುದನ್ನು ಗಮನಿಸಿರುವ ಟ್ವೀಟಿಗರು, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಸದಸ್ಯರು ಸಹ ರಿಯಾನಾ ವಿರುದ್ಧ ಗುಡುಗಿದ್ದಾರೆ. ಪ್ರಕಟಿಸಿಕೊಂಡಿರುವ ಫೋಟೊ 'ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು ತಂದಿದೆ' ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳ ವಿರುದ್ಧ ದೆಹಲಿ ಮತ್ತು ಮುಂಬೈನಲ್ಲಿ ಪೊಲೀಸ್‌ ದೂರು ದಾಖಲಿಸಲಾಗಿದೆ.

ಜನವರಿ 26ರಂದು ರೈತರ ಟ್ರ್ಯಾಕ್ಟರ್‌ ರ್‍ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರದ ನಂತರ ರೈತರು ಪ್ರತಿಭಟನೆ ನಡೆಸುತ್ತಿರುವ ಪ್ರದೇಶಗಳಲ್ಲಿ ಆಗಾಗ್ಗೆ ಇಂಟರ್ನೆಟ್‌ ಸಂಪರ್ಕವನ್ನು ನಿರ್ಬಂಧಿಸಲಾಗಿದೆ. ಈ ನಡುವೆ ರೈತರ ಹೋರಾಟವನ್ನು ಬೆಂಬಲಿಸಿ ಟ್ವೀಟಿಸಿದ ಮೊದಲ ಅಂತರರಾಷ್ಟ್ರೀಯ ಸೆಲೆಬ್ರಿಟಿ ರಿಯಾನಾ. ಅದರ ಬೆನ್ನಲ್ಲೇ ಗ್ರೀಟಾ ಥನ್‌ಬರ್ಗ್‌, ಹಾಲಿವುಡ್‌ ಸ್ಟಾರ್‌ ಸುಸಾನ್‌ ಸಾರಂಡನ್‌ ಹಾಗೂ ವಯಸ್ಕರ ಚಿತ್ರಗಳ ಮಾಜಿ ನಟಿ ಮಿಯಾ ಖಲೀಫಾ ರೈತರ ಪ್ರತಿಭಟನೆ ಕುರಿತು ಅಭಿಪ್ರಾಯ ಹಂಚಿಕೊಂಡರು.

ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ದೇಶದ ಆಂತರಿಕ ವಿಚಾರಗಳ ಬಗ್ಗೆ ಪ್ರಸ್ತಾಪಿಸುತ್ತಿರುವುದನ್ನು ವಿರೋಧಿಸಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯೊಂದನ್ನು ಹೊರತಂದಿತು.

ಮಂಗಳವಾರ ರಿಯಾನಾ ಪ್ರಕಟಿಸಿರುವ ಫೋಟೊ ಬಗ್ಗೆ ಬಿಜೆಪಿ ಮುಖಂಡರು, ಹಿಂದೂ ಸಂಘಟನೆಗಳ ಸದಸ್ಯರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ರಿಯಾನಾ ನಡೆಯನ್ನು ಅವರ ಹಲವು ಅಭಿಮಾನಿಗಳು ಸಮರ್ಥಿಸಿಕೊಂಡಿದ್ದರೆ, ಇನ್ನೂ ಕೆಲವರು ಇದರಲ್ಲಿ ಅವಮಾನ ಮೂಡಿಸುವಂಥದ್ದೇನಿದೆ ಎಂದಿದ್ದಾರೆ. ರಿಯಾನಾ ಟ್ವೀಟ್‌ನ್ನು ಈವರೆಗೂ 33 ಸಾವಿರಕ್ಕೂ ಹೆಚ್ಚು ಬಾರಿ ಹಂಚಿಕೊಂಡಿದ್ದರೆ, 2.75 ಲಕ್ಷಕ್ಕೂ ಅಧಿಕ ಲೈಕ್‌ಗಳು ಸಿಕ್ಕಿವೆ.

'ನಮ್ಮ ಆರಾಧ್ಯ ಹಿಂದೂ ದೇವರು ಗಣೇಶನನ್ನು ಯಾವ ರೀತಿ ಅವಮಾನಕರ ರೀತಿಯಲ್ಲಿ ರಿಯಾನಾ ಅಣಕಿಸಿದ್ದಾರೆ...' ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್‌ ಕದಮ್‌ ಟ್ವೀಟಿಸಿದ್ದಾರೆ. ಹಿಂದೂಗಳಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಈ ಗಾಯಕಿಯು ಟಾಪ್‌ಲೆಸ್‌ ಆಗಿ, ಗಣೇಶನ ಪದಕ ಧರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ರಿಯಾನಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಶಾಶ್ವತವಾಗಿ ತೆಗೆದು ಹಾಕಬೇಕು ಎಂದು ವಿಎಚ್‌ಪಿ ಒತ್ತಾಯಿಸಿದೆ. ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಹಾಗೂ ಟ್ವಿಟರ್‌ನ್ನು ಟ್ಯಾಗ್‌ ಮಾಡಿ ವಿಎಚ್‌ಪಿ ಕ್ರಮಕ್ಕೆ ಆಗ್ರಹಿಸಿದೆ. 'ಹಲವು ಹಿಂದೂಗಳು ಜೊತೆಯಾಗಿ ಈಗಾಗಲೇ ಅವರ ಟ್ವೀಟ್‌ ಬಗ್ಗೆ ವರದಿ ಮಾಡಿದ್ದೇವೆ' ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್‌ ಬನ್ಸಾಲ್‌ ಪ್ರಕಟಿಸಿಕೊಂಡಿದ್ದಾರೆ.

ಆ ಟ್ವೀಟ್‌ ಜಗತ್ತಿನಾದ್ಯಂತ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT