ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಕರೆ ಮಾಡಿದ ನೌಕರರು ವಿಆರ್‌ಎಸ್ ನೀಡಿ ಹೊರಬಂದಿದ್ದಾರೆ

Last Updated 1 ಮಾರ್ಚ್ 2020, 13:29 IST
ಅಕ್ಷರ ಗಾತ್ರ

ಬಿಎಸ್‌ಎನ್‌ಎಲ್ ಮನೆ ಮನೆಯ ನೆಟ್‌ವರ್ಕ್ ಆಗಿತ್ತು. ಅದರೊಂದಿಗೆ ಭಾವನಾತ್ಮಕ ಸಂಬಂಧ ಜನರಿಗಿತ್ತು. ಆದರೇನು ಮಾಡುವುದು ನೆಟ್‌ವರ್ಕ್ ಸ್ಪೀಡ್ ಇಲ್ಲ ಎಂದಾಗ ಬೇರೆ ನೆಟ್‌ವರ್ಕ್ ನೆಚ್ಚಿಕೊಳ್ಳುವುದು ಸಹಜ. ಹಾಗೆ ಹಲವರು ಒಲ್ಲದ ಮನಸ್ಸಿನಿಂದಲೇ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬಿಟ್ಟು ದೂರ ಹೋದರು.

‘ಬಿಎಸ್‌ಎನ್‌ಎಲ್‌ ಕನೆಕ್ಟಿಂಗ್ ಇಂಡಿಯಾ’ ಎಂಬ ಕಾಲರ್ ಟ್ಯೂನ್ ಪೂರ್ಣವಾಗುತ್ತಿದ್ದಂತೆ ಅತ್ತಲಿಂದ ಬಾಲಕೃಷ್ಣ ಅವರು ಹಲೋ ಎಂದರು. ಕಳೆದ ತಿಂಗಳು ಬಿಎಸ್‌ಎನ್‌ಎಲ್ ಸಂಸ್ಥೆಯಿಂದ ವಿಆರ್‌ಎಸ್ ಪಡೆದಿರುವ ಇವರಿಗೆ ತಮ್ಮ ಸಂಸ್ಥೆಯ ಬಗ್ಗೆ ಹೇಳಲು ಸಾಕಷ್ಟು ವಿಷಯಗಳಿದ್ದವು. ಎಲ್ಲಿಂದ ಶುರು ಮಾಡಲಿ? ಎಂದು ಕೇಳಿದವರೇ ತಾನು ಬಿಎಸ್‌ಎನ್ಎಲ್ ಸಂಸ್ಥೆಗೆ ಸೇರಿದಾಗಿನ ಕಥೆಯಿಂದ ಹೇಳ್ತೇನೆ ಎಂದ್ರು.

ಅಂದು ಅದು ಬಿಎಸ್‌ಎನ್‌ಎಲ್ ಆಗಿರಲಿಲ್ಲ. 1984ರಲ್ಲಿ ನಾನು ಸೇರಿದ್ದು ಪಿ ಆ್ಯಂಡ್ ಟಿ ಅಂದರೆ ಪೋಸ್ಟಲ್ ಆ್ಯಂಡ್ ಟೆಲಿಗ್ರಾಫ್ ಸಂಸ್ಥೆಗೆ. ರೈಲ್ವೆ ಇಲಾಖೆ ಬಿಟ್ಟರೆ ಅತಿದೊಡ್ಡ ಸಂಸ್ಥೆ ಆಗಿತ್ತು ಅದು. ಅದೊಂದು ಮಹಾ ಸಾಮ್ರಾಜ್ಯ. ಮೊದಲು ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್ (ಪಿಡಬ್ಲ್ಯುಡಿ) ಇದ್ದದ್ದು ಡೈರೆಕ್ಟರ್ ಜನರಲ್ ಪೋಸ್ಟಲ್ ಆ್ಯಂಡ್ ಟೆಲಿಗ್ರಾಫ್ (ಡಿಜಿಪಿ&ಟಿ) ಆಯ್ತು. ಆಮೇಲೆ ಡಿಜಿಪಿ&ಟಿ ಯಿಂದ ಡಿಪಾರ್ಟ್‌ಮೆಂಟ್ ಆಫ್ ಟೆಲಿ ಕಮ್ಯುನಿಕೇಷನ್ (ಡಿಒಟಿ) ಆಯ್ತು. ಇದು ಆಮೇಲೆ ಡಿಪಾರ್ಟ್‌ಮೆಂಟ್ ಆಫ್ ಟೆಲಿಕಾಂ ಸರ್ವೀಸ್ (ಡಿಟಿಎಸ್) ಆಗಿ ಕೊನೆಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಆಗಿ ಹೆಸರು ಬದಲಾಯಿತು.

1995ರಲ್ಲಿ ಟ್ರಾಯ್ ಅಸ್ತಿತ್ವಕ್ಕೆ ಬಂತು. ಅದರ ಜತೆಗೆ ವೈರ್‌ಲೆಸ್ ಇನ್ ಲೋಕಲ್ ಲೂಪ್ (ಡಬ್ಲ್ಯುಎಲ್‌ಎಲ್ ) ಟೆಲಿಫೋನ್ ಸಿಸ್ಟಂ ಅನ್ನು ಪರಿಚಯಿಸಲಾಯಿತು. 1999ರಲ್ಲಿ ಡಿಪಾರ್ಟ್‌ಮೆಂಟ್ ಆಫ್ ಟೆಲಿ ಕಮ್ಯುನಿಕೇಷನ್ (ಡಿಒಟಿ) ಅನ್ನು ಡಿಪಾರ್ಟ್‌ಮೆಂಟ್ ಆಫ್ ಟೆಲಿಕಾಂ ಸರ್ವೀಸಸ್ (ಡಿಟಿಎಸ್) ಮತ್ತು ಡಿಪಾರ್ಟ್‌ಮೆಂಟ್ ಆಫ್ ಟೆಲಿಕಾಂ ಆಪರೇಷನ್ಸ್ (ಡಿಟಿಒ) ಆಗಿ ವಿಭಜನೆ ಮಾಡಲಾಯಿತು. ಹೀಗೆ ವಿಭಜನೆ ಮಾಡಿದ್ದರಿಂದ ನಮಗೆ ತೊಂದರೇನೂ ಆಗಿಲ್ಲ. ಆದರೆ, 2000ರಲ್ಲಿ ಬಿಎಸ್‌ಎನ್‌ಎಲ್ ಎಂಬ ಹೆಸರಿನೊಂದಿಗೆ ಇದು ಬದಲಾದಾಗ ಗ್ರಹಣ ಬಂದಂತಾಯ್ತು.

2000ರ ಅಕ್ಟೋಬರ್ 1ರಂದು ಡಿಟಿಎಸ್, ಬಿಎಸ್‌ಎನ್ಎಲ್ ಎಂಬ ಹೆಸರು ಪಡೆದುಕೊಂಡಿತು. ಹೆಸರು ಬದಲಿಸಿದ್ದರಿಂದ ಗ್ರಹಣ ಬಡಿದಂತಾಯಿತು. ಅಂದು ಆವರಿಸಿದ ಆ ಕಪ್ಪುಚುಕ್ಕಿ ಬೆಳೆಯುತ್ತಾ ಬಂತು. ಒಂದು ಕಾಲದಲ್ಲಿ ಎಲ್ಲರಿಗೂ ಕೆಲಸ ಕೊಟ್ಟಿದ್ದ ಅದೇ ಸಂಸ್ಥೆ 80,000 ಸಹೋದ್ಯೋಗಿಗಳನ್ನು ಹೊರಹಾಕಿತು.

ನಿಮಗೆ ನೆನಪಿರಬಹುದು; 2002ರಲ್ಲಿ ಸೆಲ್ ಒನ್ ಮೊಬೈಲ್ ಸೇವೆ ಆರಂಭವಾಯಿತು. ಅಲ್ಲಿಯವರೆಗೆ ಲ್ಯಾಂಡ್ ಲೈನ್‌ಗೆ ಮಾತ್ರ ಸೀಮಿತವಾಗಿದ್ದ ಬಿಎಸ್‌ಎನ್‌ಎಲ್ ತಂತ್ರಜ್ಞಾನದಲ್ಲಿ ಪ್ರಗತಿ ಹೊಂದಿತು. 2005ರ ನಂತರ ನಮ್ಮ ಸಂಸ್ಥೆ ಮುಕ್ತ ಮಾರುಕಟ್ಟೆಗೆ ದೌಡಾಯಿಸಿತು. ಬ್ರಾಡ್ ಬ್ಯಾಂಡ್ ಬಂತು, ಐಪಿ ಟಿವಿ, Wi-MAX ಸೇವೆ ಬಂತು. 2010ರಲ್ಲಿ 3Gಯೂ ಬಂತು. ಹೊಸ ತಂತ್ರಜ್ಞಾನದೊಂದಿಗೆ ನಾವು ಬೆಳೆಯುತ್ತಿದ್ದೇವೆ ಎಂಬ ಖುಷಿ ನಮ್ಮಲ್ಲಿತ್ತು. ಮೊಬೈಲ್ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯಾಗುತ್ತಿದ್ದಂತೆ ಖಾಸಗಿ ಕಂಪನಿಗಳು ನಾಗಾಲೋಟದಲ್ಲಿದ್ದವು. ನೆಟ್‌ವರ್ಕ್ ವೇಗ ನಮ್ಮದು ಕಡಿಮೆ. 4ಜಿ ಸ್ಪೆಕ್ಟ್ರಂ ಪಡೆಯಲು ಪದೇ ಪದೇ ವಿನಂತಿ ಮಾಡಿದರೂ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಲಿಲ್ಲ.

ಬಿಎಸ್‌ಎನ್‌ಎಲ್ ಮನೆ ಮನೆಯ ನೆಟ್‌ವರ್ಕ್ ಆಗಿತ್ತು. ಅದರೊಂದಿಗೆ ಭಾವನಾತ್ಮಕ ಸಂಬಂಧ ಜನರಿಗಿತ್ತು. ಆದರೇನು ಮಾಡುವುದು ನೆಟ್‌ವರ್ಕ್ ಸ್ಪೀಡ್ ಇಲ್ಲ ಎಂದಾಗ ಬೇರೆ ನೆಟ್‌ವರ್ಕ್ ನೆಚ್ಚಿಕೊಳ್ಳುವುದು ಸಹಜ. ಹಾಗೆ ಹಲವರು ಒಲ್ಲದ ಮನಸ್ಸಿನಿಂದಲೇ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬಿಟ್ಟು ದೂರ ಹೋದರು.

ಇತ್ತ ಸಾಲದ ಹೊರೆ ಸಂಸ್ಥೆ ಮೇಲಿತ್ತು. ಸಂಸ್ಥೆಯನ್ನು ಪುನಶ್ಚೇತನಗೊಳಿಸಲು 50 ದಾಟಿದ ನೌಕರರನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿತು. ನನಗೆ ಇನ್ನೂ ಎರಡು ವರ್ಷದ ಸೇವಾವಧಿ ಇತ್ತು. ದುಡಿಯುವ ಉತ್ಸಾಹವೂ ಇತ್ತು. ಆದರೇನು ಮಾಡುವುದು ಹೊಸಬರಿಗೆ ಅವಕಾಶ ನೀಡುತ್ತಾರೆ ಅಂತ ಹೇಳ್ತಿದ್ದಾರೆ. ಈ ಮೂಲಕ ಸಂಸ್ಥೆ ಅಭಿವೃದ್ಧಿ ಹೊಂದಿದರೆ ನಮಗೆ ಖುಷಿಯೇ.

ಜನವರಿ 31ರಂದು ನಾವು ಸಂಸ್ಥೆ ಬಿಟ್ಟು ಹೊರಡುವಾಗ ಸಂಬಳ ಕೂಡಾ ಸಿಕ್ಕಿಲ್ಲ. ಇನ್ನೂ ಎರಡು ತಿಂಗಳ ಸಂಬಳ ಬರುವುದು ಬಾಕಿ ಇದೆ. ತಾತ್ಕಾಲಿಕ ನೌಕರರಿಗೆ ಐದಾರು ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ಈಚೆಗೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡರು. ಒಂದು ನಿಲಂಬೂರಲ್ಲಿ; ಮತ್ತೊಬ್ಬ ಕ್ಯಾಲಿಕಟ್‌ನಲ್ಲಿ. ಇನ್ನು ಕೆಲವರು ಸಂಬಳ ಇಲ್ಲದೆ ದುಡಿಯುತ್ತಿದ್ದಾರೆ.

ಅಂದೊಮ್ಮೆ ರೆವೆನ್ಯೂ ಇಲ್ಲ, ನೀವು ರೆವೆನ್ಯೂ ತಂದುಕೊಡಿ ಎಂದು ಹೇಳಿದಾಗ ನಾವು ಮಾರ್ಕೆಟಿಂಗ್‌ಗೆ ಇಳಿದೆವು. ಮೇಳ ಮಾಡಿದೆವು. ರೆವೆನ್ಯೂ ತಂದುಕೊಟ್ಟೆವು. ಕಂಪನಿ ಪುನಶ್ಚೇತನಕ್ಕೆ ಲಕ್ಷ ಕೋಟಿ ಫಂಡ್ ಇದೆಯಂತೆ ಅದೆಲ್ಲಿ ಹೋಯ್ತು? ಲ್ಯಾಂಡ್ ಲೈನ್ ಕನೆಕ್ಷನ್ ಕೊಡುವುದಿಲ್ಲ. ಇದ್ದದ್ದನ್ನು ಸರಿ ಮಾಡಲು ಆಗುವುದಿಲ್ಲ. ಅದಕ್ಕೆ ಬೇಕಾದ ಸಲಕರಣೆ ಇಲ್ಲ, ಜನ ಇಲ್ಲ. ಈ ಇಲ್ಲಗಳ ನಡುವೆ ಮಾಡುವುದೆಂತದ್ದು?

ಅವರಿಗೆ ಹಳೇ ತಲೆಮಾರಿನ ಜನ ಬೇಡ ಅಂತೆ. ಆಯ್ತು. ನಮ್ಮ ಜೀವನ ಸುಧಾರಿಸಿದ್ದೇ ಈ ಕಂಪನಿಯಿಂದ. ಮದುವೆ ಆಗಲು ಹೊರಟಾಗ ಕೇಂದ್ರ ಸರ್ಕಾರದ ಉದ್ಯೋಗಿ ಎಂದು ಹೇಳುವುದೇ ಘನತೆ. ಅದಕ್ಕೊಂದು ತೂಕ ಬೇರೆಯೇ. ನಾನು ಶಿಕ್ಷಣ ಮುಗಿಸಿದಾಗ ಈ ಕೆಲಸ ಸಿಕ್ಕಿದ್ದು. ವಿಶೇಷ ಏನು ಗೊತ್ತಾ, ಬಿಎಸ್‌ಎನ್‌ಎಲ್‌ನಲ್ಲಿ ಕೆಲಸ ಸಿಗಬೇಕಾದರೆ ಯಾರ ಶಿಫಾರಸು ನಡೆಯುವುದಿಲ್ಲ. ನಾನು ಕೆಲಸಕ್ಕೆ ಸೇರಿದ್ದು ಟೆಲಿಫೋನ್ ಆಪರೇಟರ್ ಆಗಿ. ಅಲ್ಲಿಂದ ಹೊರ ಬರುವಾಗ ನಾನು ಆಫೀಸ್ ಸೂಪರಿಂಟೆಂಡೆಂಟ್ ಆಗಿದ್ದೆ. ಇಲ್ಲಿಯವರೆಗೆ ಕಂಪನಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದೆ. ನಮ್ಮ ಬದುಕಿನಲ್ಲಿ ಬಿಎಸ್‌ಎನ್‌ಎಲ್‌ಗೆ ವಿಶೇಷ ಸ್ಥಾನವಿದೆ. ನಾನು ನನ್ನ ಮನೆಯವರು ಎಲ್ಲರೂ ಬಿಎಸ್‌ಎನ್‌ಎಲ್ ಗ್ರಾಹಕರೇ.

ತಂತ್ರಜ್ಞಾನದಲ್ಲಿ ಮುಂದುವರಿದಂತೆ ನಮ್ಮೀ ಸಂಸ್ಥೆ ಅಭಿವೃದ್ಧಿ ಹೊಂದಬೇಕಿತ್ತು. ಆದರೆ ಯಾರೂ ಆ ಬಗ್ಗೆ ಕಾಳಜಿವಹಿಸಲೇ ಇಲ್ಲ. ನೋಡೋಣ ಹೊಸ ಸುಧಾರಣೆಗಳಿಂದ ಅದು ಮತ್ತೆ ಚಿಗುರಬಹುದು ಎಂಬ ಆಶಾಭಾವನೆ ನನ್ನದು. ಆಗುವುದೆಲ್ಲಾ ಒಳ್ಳೇದಕ್ಕೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT