ಧರ್ಮಶಾಲಾ, ಹಿಮಾಚಲ ಪ್ರದೇಶ: ಟಿಬೆಟ್ನ ಧರ್ಮಗುರು ದಲೈಲಾಮಾ ಅವರಿಗೆ ಶನಿವಾರ ಇಲ್ಲಿ ನಡೆದ ಸಮಾರಂದಲ್ಲಿ ‘ಗಾಂಧಿ ಮಂಡೇಲಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಾಂಧಿ ಮಂಡೇಲಾ ಫೌಂಡೇಷನ್ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೆಕರ್ ಪ್ರಶಸ್ತಿ ಪ್ರದಾನ ಮಾಡಿದರು. ‘ವಿಶ್ವದಲ್ಲಿಯೇ ಈ ಪ್ರಶಸ್ತಿಗೆ ದಲೈಲಾಮಾ ಸೂಕ್ತವಾದ ವ್ಯಕ್ತಿ’ ಎಂದು ಶ್ಲಾಘಿಸಿದರು.
ದಲೈಲಾಮಾ ಶಾಂತಿಯ ರಾಯಭಾರಿಯಾಗಿದ್ದಾರೆ. ಅಹಿಂಸೆ ಕುರಿತ ಅವರ ಸಿದ್ಧಾಂತ ಪ್ರಸ್ತುತ ಜಗತ್ತಿಗೆ ಅಗತ್ಯವಾಗಿದ್ದು, ಇದು ಸೇನೆಗಿಂತಲೂ ಹೆಚ್ಚು ಪರಿಣಾಮಕಾರಿಯಾದುದು ಎಂದು ರಾಜ್ಯಪಾಲರು ಹೇಳಿದರು.
ದಲೈಲಾಮಾ ಅವರಿಗೆ ಗಡಿಯ ಮಿತಿ ಇಲ್ಲ. ಮಹಾತ್ಮಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಬಳಿಕ ವಿಶ್ವನಾಯಕರಾಗುವ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ದಲೈಲಾಮಾ ಅವರು, ಅಹಿಂಸೆ ಮತ್ತು ಸಹಾನುಭೂತಿ ಪ್ರಸ್ತುತ ವಿಶ್ವಶಾಂತಿಗೆ ಅಗತ್ಯವಾಗಿ ಬೇಕಾಗಿದೆ. ಶಾಂತಿ ಮತ್ತು ಚರ್ಚೆಯಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.