ಲೆಸ್ ಕೆಯೆಸ್, ಹೈಟಿ: ಹೈಟಿಯಲ್ಲಿ ಭೀಕರ ಭೂಕಂಪನದಿಂದ ಸುಮಾರು 2,000 ಜನರು ಸಾವಿಗೀಡಾಗಿದ್ದು, ಸಾವಿರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ. ಸರ್ಕಾರದ ನೆರವು ಇಲ್ಲದೆ, ಅನೇಕ ಸಂತ್ರಸ್ತರು ಬುಧವಾರ ನಾಲ್ಕನೇ ರಾತ್ರಿಯನ್ನು ಬಯಲು ಪ್ರದೇಶದಲ್ಲಿ ಶುದ್ಧ ನೀರು ಮತ್ತು ಆಹಾರವೂ ಇಲ್ಲದೆ ಕಳೆದರು.
ನೈರುತ್ಯ ಹೈಟಿಯಲ್ಲಿ ಶನಿವಾರ ಸಂಭವಿಸಿದ 7.2 ರ ತೀವ್ರತೆಯ ಭೂಕಂಪನದ ನಂತರ ಅತಿಹೆಚ್ಚು ಹಾನಿಗೊಳಗಾದ ಪಟ್ಟಣ ಲೆಸ್ ಕೆಯೆಸ್ಗೆ ಭೇಟಿ ನೀಡಿದ ಪ್ರಧಾನಿ ಏರಿಯಲ್ ಹೆನ್ರಿ, ಸಂತ್ರಸ್ತರ ಧೈರ್ಯವನ್ನು ಶ್ಲಾಘಿಸಿದರು. ಸಂತ್ರಸ್ತರಿಗೆ ಶೀಘ್ರ ನೆರವು ಒದಗಿಸುವ ಭರವಸೆ ನೀಡಿದರು.
‘ಸರ್ಕಾರದಿಂದ ಯಾರೂ ಇಲ್ಲಿಗೆ ಬಂದಿಲ್ಲ. ಏನೂ ನೆರವು ನೀಡಿಲ್ಲ’ ಎಂದು ಈ ಪ್ರದೇಶದ ರೇಡಿಯೋ ಮತ್ತು ದೂರದರ್ಶನ ಕೇಂದ್ರಗಳಿಗೆ ಭೇಟಿ ನೀಡಿದ ಪಾದ್ರಿ ರೂಸ್ವೆಲ್ಟ್ ಮಿಲ್ಫೋರ್ಡ್ ಹೇಳಿದರು.
ಭೂಕಂಪನದಿಂದ ನೂರಾರು ಜನರು ಮನೆ ಕಳೆದುಕೊಂಡು ಗದ್ದೆಯಲ್ಲಿ ಬೀಡುಬಿಟ್ಟಿದ್ದಾರೆ. ‘ನಮಗೆ ಸಹಾಯ ಬೇಕು’ ಎಂದು ಮಿಲ್ಫೋರ್ಡ್ ಹೇಳಿದರು.
‘ಹೆಚ್ಚಿನ ಹಿಂಸಾತ್ಮಕ ಅಪರಾಧಗಳು ನಡೆಯುವ ಈ ದೇಶದಲ್ಲಿ, ನಿವಾಸಿಗಳು ರಾತ್ರಿ ಕಾವಲಿಗೆ ತಮ್ಮದೇ ಆದ ಭದ್ರತಾ ತಂಡಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಯ ಬಗ್ಗೆ ಆ ತಂಡಗಳು ನಿರ್ದಿಷ್ಟ ಗಮನ ಹರಿಸುತ್ತವೆ’ ಎಂದು ಅವರು ಹೇಳಿದರು.
ಆಸ್ಪತ್ರೆಗಳಿಗೂ ಹಾನಿ; ತಾತ್ಕಾಲಿಕ ಡೇರೆಗಳಲ್ಲಿ ಚಿಕಿತ್ಸೆ: ಭೂಕಂಪನದ ಹಾನಿಯಿಂದ ಹಲವು ಪ್ರಮುಖ ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. ತಾತ್ಕಾಲಿಕ ಡೇರೆಗಳಲ್ಲಿರುವ ವೈದ್ಯರು ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಗಾಯಗೊಂಡವರನ್ನು ರಕ್ಷಿಸಲು ಅವಿರತ ಶ್ರಮಿಸುತ್ತಿದ್ದಾರೆ.