ಕೊಲಂಬೊ: ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾಕ್ಕೆ ಭಾರತ ಸೋಮವಾರ ಸುಮಾರು 40,000 ಮೆಟ್ರಿಕ್ ಟನ್ ಪೆಟ್ರೋಲ್ ರವಾನಿಸಿದೆ.
ಈ ಬಗ್ಗೆ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೋಮವಾರ ಟ್ವೀಟ್ ಮಾಡಿದೆ.
‘ಭಾರತದ ನೆರವಿನ ಅಡಿಯಲ್ಲಿ ಸುಮಾರು 40,000 ಮೆಟ್ರಿಕ್ ಪೆಟ್ರೋಲ್ ಇಂದು ಕೊಲಂಬೊ ತಲುಪಿದೆ’ ಎಂದು ಹೇಳಿದೆ.
ಸಾಲದ ಹೊರೆಯಿಂದ ಬಳಲುತ್ತಿರುವ ನೆರೆ ರಾಷ್ಟ್ರದ, ತೀವ್ರ ಇಂಧನ ಕೊರತೆಯನ್ನು ನೀಗಿಸಲು ಭಾರತ ಮುಂದಾಗಿದೆ. ಈ ಹಿಂದೆ ಭಾರತವು 40,000 ಮೆಟ್ರಿಕ್ ಟನ್ ಡೀಸೆಲ್ ಅನ್ನು ರವಾನಿಸಿತ್ತು. ಭಾರತದ ನೆರವನ್ನು ಶ್ರೀಲಂಕಾದ ಹೊಸ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕೊಂಡಾಡಿದ್ದರು.
ಇತ್ತೀಚೆಗೆ ಶ್ರೀಲಂಕಾದ ಪೆಟ್ರೋಲ್ ಪಂಪ್ಗಳ ಎದುರು ‘ ನೋ ಪೆಟ್ರೋಲ್’ ಫಲಕಗಳು ಕಾಣಿಸಿಕೊಂಡಿದ್ದವು. ದೇಶದಲ್ಲಿ ಇಂಧನ ದಾಸ್ತಾನು ಇಲ್ಲದಿರುವುದನ್ನು ಸ್ವತಃ ಪ್ರಧಾನಿ ವಿಕ್ರಮಸಿಂಘೆ ಅವರೇ ಒಪ್ಪಿಕೊಂಡಿದ್ದರು.
ಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ನಷ್ಟವಾಗಿರುವುದರಿಂದ ಆಮದು ಪದಾರ್ಥಗಳಿಗೆ ಪಾವತಿ ಕಷ್ಟವಾಗಿದೆ. ಅದರ ಕರೆನ್ಸಿ ಅಪಮೌಲ್ಯವು ತೀವ್ರ ಹಣದುಬ್ಬರಕ್ಕೂ ಕಾರಣವಾಗಿದೆ. ಹೀಗಾಗಿ, ದೇಶದಲ್ಲಿ ಆರ್ಥಿಕ, ರಾಜಕೀಯ ಪ್ರಕ್ಷುಬ್ಧತೆ ಆವರಿಸಿದೆ. ಮಹಿಂದ ರಾಜಪಕ್ಸೆ ಸರ್ಕಾರದ ಪತನವೂ ಆಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.