ಕಠ್ಮಂಡು: ಭಾರತ ಅಥವಾ ಚೀನಾದೊಂದಿಗಿನ ಸಂಬಂಧದ ವಿಚಾರದಲ್ಲಿ ನೇಪಾಳವು ತನ್ನ ಸಾರ್ವಭೌಮ ಸಮಾನತೆಯೊಂದಿಗೆ ರಾಜಿಯಾಗುವುದಿಲ್ಲ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹೇಳಿದ್ದಾರೆ.
ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗ್ಯಾವಲಿ ಈ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ನೇಪಾಳದೊಂದಿಗೆ ಗಡಿ ವಿಷಯವಾಗಿ ಸೃಷ್ಟಿಯಾಗಿರುವ ವಿವಾದವು ಸಚಿವರ ಮಟ್ಟದ ಸಭೆಯಲ್ಲಿ ಚರ್ಚೆಯಾಗುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಒಲಿ ಅವರ ಹೇಳಿಕೆಗೆ ಮಹತ್ವ ಬಂದಿದೆ.
‘ಲಿಂಪಿಯಾಧೂರ, ಲಿಪುಲೇಖ್ ಹಾಗೂ ಕಾಲಾಪಾನಿ ಪ್ರದೇಶಗಳು ನೇಪಾಳಕ್ಕೆ ಸೇರಿವೆ. ಅವು ನೇಪಾಳದ ಅವಿಭಾಜ್ಯ ಹಾಗೂ ಪವಿತ್ರ ಪ್ರದೇಶಗಳಾಗಿವೆ’ ಎಂಬ ಒಲಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಖಾಸಗಿ ಸುದ್ದಿವಾಹಿನಿ ಇತ್ತೀಚೆಗೆ ವರದಿ ಪ್ರಸಾರ ಮಾಡಿದೆ.
ಈ ಪ್ರದೇಶಗಳು ನೇಪಾಳದ ಭಾಗ ಎಂಬಂತೆ ಪ್ರಕಟಿಸಿರುವ ಹೊಸ ಭೂಪಟಗಳನ್ನು ನೇಪಾಳ ಕಳೆದ ವರ್ಷ ಬಿಡುಗಡೆ ಮಾಡಿದಾಗ, ಭಾರತ ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು.