ಬಸ್ ಸ್ಫೋಟದಲ್ಲಿ ಭಾರತದ ಕೈವಾಡವಿದೆ ಎಂದ ಪಾಕಿಸ್ತಾನ: ವ್ಯಂಗ್ಯವಾಡಿದ ಭಾರತ

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪ್ರಾಂತ್ಯದ ದಾಸು ಎಂಬಲ್ಲಿ ಇತ್ತೀಚೆಗೆ ಸಂಭವಿಸಿದ ಬಸ್ ಸ್ಫೋಟ ಪ್ರಕರಣಕ್ಕೂ ಭಾರತಕ್ಕೂ ಸಂಬಂಧವಿಲ್ಲ ಎಂಬ ಸ್ಪಷ್ಟನೆಯನ್ನು ಪಾಕಿಸ್ತಾನ ನಿರಾಕರಿಸಿದೆ. ದಾಳಿಯಲ್ಲಿ ಭಾರತದ ಪಾತ್ರವಿದೆ ಎಂದು ಅದು ಪ್ರತಿಪಾದಿಸಿದೆ.
ಇದನ್ನೂ ಓದಿ: ಪಾಕ್ನಲ್ಲಿ ಬಸ್ ದುರಂತ: 9 ಚೀನಿಯರೂ ಸೇರಿ 13 ಸಾವು, ಘಟನೆಯ ಕಾರಣದ ಬಗ್ಗೆ ಗೊಂದಲ
ಕಳೆದ ತಿಂಗಳು ಕೊಹಿಸ್ತಾನ್ ಜಿಲ್ಲೆಯ ದಾಸು ಎಂಬಲ್ಲಿ ನಡೆದಿದ್ದ ಆತ್ಮಾಹುತಿ ದಾಳಿಯಲ್ಲಿ ಒಂಬತ್ತು ಚೀನೀ ಎಂಜಿನಿಯರ್ಗಳು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದರು. ಘಟನೆ ಬಗ್ಗೆ ಪಾಕಿಸ್ತಾನವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿತ್ತು.
ತನಿಖೆಯ ಮುಕ್ತಾಯದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ, ‘ಭಾರತದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (ಆರ್ ಆ್ಯಂಡ್ ಎಡಬ್ಲ್ಯೂ) ಮತ್ತು ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ (ಎನ್ಡಿಎಸ್) ದಾಳಿ ನಡೆಸಿದೆ,’ ಎಂದು ಆರೋಪಿಸಿದರು.
ಇದನ್ನೂ ಓದಿ: ಬಸ್ ದುರಂತ: ಪಾಕಿಸ್ತಾನಕ್ಕೆ ತನಿಖಾ ತಂಡವನ್ನು ಕಳುಹಿಸಿದ ಚೀನಾ
ಬಾಂಬ್ ಸ್ಫೋಟದಲ್ಲಿ ಭಾರತೀಯ ಗುಪ್ತಚರ ಇಲಾಖೆಯ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪಗಳು ’ಸುಳ್ಳು’ ಎಂದು ಭಾರತ ಶುಕ್ರವಾರ ಹೇಳಿತ್ತು. ಅಲ್ಲದೆ, ಇದು ಪ್ರಾದೇಶಿಕ ಅಸ್ಥಿರತೆಯ ಕೇಂದ್ರಬಿಂದುವಾಗಿರುವ, ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ಜಾಗ ಒದಗಿಸಿಕೊಟ್ಟಿರುವ ಪಾಕಿಸ್ತಾನದಿಂದ ಜಾಗತಿಕ ಗಮನ ಸೆಳೆಯುವ ಕುತಂತ್ರ ಎಂದು ಭಾರತ ಹೇಳಿತ್ತು.
‘ಈ ಆರೋಪಗಳು, ಭಾರತವನ್ನು ನಿಂದಿಸುವ ಪಾಕಿಸ್ತಾನದ ಮತ್ತೊಂದು ಪ್ರಯತ್ನವಷ್ಟೇ,‘ ಎಂದು ಭಾರತ ಪ್ರತಿಪಾದಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ‘ದಾಸು ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರವನ್ನು ನಿರಾಕರಿಸಿರುವ ಭಾರತೀಯ ವಿದೇಶಾಂಗ ಇಲಾಖೆಯ, ಅಸಂಬದ್ಧ ಟೀಕೆಗಳನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ‘ ಎಂದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.