ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇಮ್ರಾನ್ ಖಾನ್ ಸೇರಿದಂತೆ ಪಿಟಿಐ ಪಕ್ಷದ ಇತರ ನಾಯಕರ ವಿರುದ್ಧವೂ ಇಸ್ಲಾಮಾಬಾದ್ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.
ಪಿಟಿಐನ ಅಸಾದ್ ಉಮರ್, ಇಮ್ರಾನ್ ಇಸ್ಮಾಯಿಲ್, ರಾಜಾ ಖುರ್ರಂ ನವಾಜ್, ಅಲಿ ಅಮೀನ್ ಮತ್ತು ಅಲಿ ನವಾಜ್ ಅವನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.
‘ಗಲಭೆ ಮತ್ತು ಬೆಂಕಿ ಹಚ್ಚಿದ’ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ವರೆಗೆ 150 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 39 ಮಂದಿಯನ್ನು ಬಂಧಿಸಲಾಗಿದೆ.
ಪ್ರಧಾನಿ ಹುದ್ದೆ ತೊರೆದಿರುವ ಇಮ್ರಾನ್ ಖಾನ್ ಅವರು ‘ಆಜಾದಿ ಮೆರವಣಿಗೆ’ಗೆ ಕರೆ ನೀಡಿದ್ದರು. ಆ ವೇಳೆ, ಪಿಟಿಐ ಪಕ್ಷದ ಬೆಂಬಲಿಗರು ಗಲಭೆಗೆ ಇಳಿದಿದ್ದರು. ಇಸ್ಲಾಮಾಬಾದ್ನ ಜಿನ್ನಾ ಅವೆನ್ಯೂನಲ್ಲಿ ಮೆಟ್ರೋ ಬಸ್ ನಿಲ್ದಾಣಗಳಿಗೆ ಬೆಂಕಿ ಹಚ್ಚಿದ್ದರು. ಎಕ್ಸ್ಪ್ರೆಸ್ ಚೌಕ್ನಲ್ಲಿ ಸರ್ಕಾರಿ ವಾಹನಗಳಿಗೆ ಹಾನಿ ಮಾಡಿದ್ದರು. ಜಿಯೋ ನ್ಯೂಸ್ ಮತ್ತು ಜಂಗ್ ಕಚೇರಿಯ ಗಾಜಿನ ಕಿಟಕಿಗಳನ್ನು ಒಡೆದಿದ್ದರು. ಈ ಘಟನೆಗಳನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.