ಢಾಕಾ (ಎ.ಪಿ): ಬಂಗಾಳಕೊಲ್ಲಿಯಲ್ಲಿ ದೊಡ್ಡದಾದ ದೋಣಿಯು ಮುಗುಚಿದ್ದು, ಅದರಲ್ಲಿ ತೆರಳುತ್ತಿದ್ದ 24ಕ್ಕೂ ಅಧಿಕ ರೋಹಿಂಗ್ಯಾ ವಲಸಿಗರು ನಾಪತ್ತೆಯಾಗಿದ್ದಾರೆ. ಅವರು ಸಮುದ್ರದಲ್ಲಿ ಮುಳುಗಿರುವ ಭೀತಿ ಇದೆ ಎಂದು ವಿಶ್ವಸಂಸ್ಥೆ ಮತ್ತು ಬಾಂಗ್ಲಾದೇಶದ ಪೊಲೀಸರು ತಿಳಿಸಿದ್ದಾರೆ.
ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿದ್ದ ಶಿಬಿರಗಳಲ್ಲಿದ್ದ ಸಾವಿರಾರು ವಲಸಿಗರನ್ನು ದ್ವೀಪ ಪ್ರದೇಶವೊಂದಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ವಿಶ್ವಸಂಸ್ಥೆ, ಮಾನವ ಹಕ್ಕುಗಳ ಸಂಘಟನೆಗಳು ಟೀಕಿಸಿದ್ದು, ದ್ವೀಪ ಪ್ರದೇಶವು ವಾಸಕ್ಕೆ ಯೋಗ್ಯಕರವಲ್ಲ ಎಂದು ಅಭಿಪ್ರಾಯಪಟ್ಟಿದ್ದವು.
ವಲಸಿಗರನ್ನು ಒಯ್ಯತ್ತಿದ್ದ ದೋಣಿ ಆ. 14ರ ಬೆಳಿಗ್ಗೆ ಭಸನ್ ಚರ್ ದ್ವೀಪದ ಬಳಿ ಮುಗುಚಿದೆ ಎಂದು ಮಾಹಿತಿ ನೀಡಲಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಮುಳುಗಿದ್ದಾರೆ. ಆದರೆ, ಎಷ್ಟು ಜನರಿದ್ದರು ಎಂಬ ಮಾಹಿತಿ ಇಲ್ಲ ಎಂದು ವಿಶ್ವಸಂಸ್ಥೆಯ ವಲಸಿಗರ ಸಂಸ್ಥೆಯು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆ.
ನೋಖಾಲಿ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ‘ಮಹಿಳೆಯರು ಮತ್ತು ಮಕ್ಕಳು ಒಳಗೊಂಡಂತೆ ಸುಮಾರು 40 ಮಂದಿ ವಲಸಿಗರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು, ಸುಮಾರು 14 ಜನರನ್ನು ಮೀನುಗಾರರು ರಕ್ಷಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.