ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಯಾರಿಗೂ ಜಯ ಸಿಗದು: ಜರ್ಮನಿಯಲ್ಲಿ ಮೋದಿ ಹೇಳಿಕೆ

ಬರ್ಲಿನ್: ‘ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಯಾರೂ ಗೆಲ್ಲುವುದಿಲ್ಲ. ಎಲ್ಲರೂ ನಷ್ಟ ಅನುಭವಿಸುತ್ತಾರೆ. ಭಾರತವು ಯಾವಾಗಲೂ ಶಾಂತಿಯ ಪರವಿರುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಾದಿಸಿದರು.
ಇಲ್ಲಿ ಜರ್ಮನಿಯ ಛಾನ್ಸೆಲರ್ ಒಲಾಫ್ ಸ್ಕೋಲ್ಜ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಉಕ್ರೇನ್ ಬಿಕ್ಕಟ್ಟಿನ ಆರಂಭದಿಂದಲೂ ತಕ್ಷಣವೇ ಯುದ್ಧ ನಿಲ್ಲಿಸಲು ಭಾರತ ಒತ್ತಾಯಿಸಿದೆ. ಸಂಘರ್ಷ ಶಮನಗೊಳಿಸಲು ಮಾತುಕತೆಯೊಂದೇ ಪರಿಹಾರವೆಂದು ಒತ್ತಿ ಹೇಳಿದೆ’ ಎಂದರು.
‘ಉಕ್ರೇನ್ ಬಿಕ್ಕಟ್ಟಿನಿಂದಾಗಿ ತೈಲ ಬೆಲೆಗಳು ರಾಕೆಟ್ ವೇಗದಲ್ಲಿ ಗಗನಕ್ಕೇರುತ್ತಿವೆ. ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳ ಕೊರತೆಯ ಪರಿಣಾಮ ಪ್ರಪಂಚದ ಪ್ರತಿ ಕುಟುಂಬದ ಮೇಲೂ ಹೊರೆ ಬಿದ್ದಿದೆ. ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳ ಮೇಲೆ ಈ ಬಿಕ್ಕಟ್ಟು ಹೆಚ್ಚಿನ ಪರಿಣಾಮ ಉಂಟು ಮಾಡಿದೆ’ ಎಂದು ಅವರು ಹೇಳಿದರು.
ಉಕ್ರೇನ್ ಸಂಘರ್ಷದಿಂದ ತಲೆದೋರಿರುವ ಮಾನವೀಯ ಪರಿಣಾಮಗಳ ಬಗ್ಗೆ ಭಾರತಕ್ಕೂ ಕಳ
ವಳವಿದೆ. ಸಂಕೀರ್ಣವಾದ ಜಗತ್ತಿನಲ್ಲಿ ಭಾರತ ಮತ್ತು ಜರ್ಮನಿ ನಡುವಿನ ಪಾಲುದಾರಿಕೆಯು ಯಶಸ್ಸಿನ ಉದಾಹರಣೆಯಾಗಿ ಕಾಣಿಸುತ್ತಿದೆ ಎಂದು ಮೋದಿ ಹೇಳಿದರು.
ದ್ವಿಪಕ್ಷೀಯ ಸಹಕಾರ: ರಕ್ಷಣಾ ಪಾಲುದಾರಿಕೆಗೆ ದ್ವಿಪಕ್ಷೀಯ ಸಹಕಾರ, ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.
ಒಲಾಫ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಪ್ರಧಾನಿ ಮೋದಿ, ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತ ಮತ್ತು ಜರ್ಮನಿ ಹಲವು ಸಮಾನ ಮೌಲ್ಯಗಳನ್ನು ಹೊಂದಿವೆ. ಐರೋಪ್ಯ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ
ಗಳಲ್ಲಿ ತ್ವರಿತ ಪ್ರಗತಿಗೆ ಭಾರತ ಬದ್ಧವಾಗಿದೆ. ಹಸಿರು ಹೈಡ್ರೋಜನ್ ಕಾರ್ಯಪಡೆಯನ್ನು ಸ್ಥಾಪಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.