ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ | ರಾಜೀನಾಮೆ ತನಕ ಅಧ್ಯಕ್ಷರ ಮನೆ ಬಿಡೆವು: ಪ್ರತಿಭಟನಕಾರರ ಪಟ್ಟು

ಅಧ್ಯಕ್ಷರ ಪದತ್ಯಾಗಕ್ಕೆ ಪ್ರತಿಭಟನಕಾರರ ಪಟ್ಟು: ನಿವಾಸದಲ್ಲಿ ಭಾರಿ ಮೊತ್ತದ ಹಣ ಪತ್ತೆ
Last Updated 10 ಜುಲೈ 2022, 19:17 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸಅವರು ರಾಜೀನಾಮೆ ನೀಡುವವರೆಗೆ ಅಧ್ಯಕ್ಷರ ನಿವಾಸ ತೊರೆಯುವುದಿಲ್ಲ ಎಂದು ಪ್ರತಿಭಟನಕಾರರು ಭಾನುವಾರ ಹೇಳಿದ್ದಾರೆ.

ಅಧ್ಯಕ್ಷ ಗೊಟಬಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದ ನೂರಾರು ಪ್ರತಿಭಟನಕಾರರು ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಅಧ್ಯಕ್ಷರ ನಿವಾಸಕ್ಕೆ ಶನಿವಾರ ನುಗ್ಗಿದ್ದರು.

ಬುಧವಾರ ರಾಜೀನಾಮೆ ನೀಡುವುದಾಗಿ ಗೊಟಬಯ ಹೇಳಿದ್ದಾರೆ. ಆದರೆ, ‘ನಮ್ಮ ಹೋರಾಟ ಮುಗಿದಿಲ್ಲ. ಅವರು ರಾಜೀನಾಮೆ ಕೊಟ್ಟ ಬಳಿಕವೇ ಹೋರಾಟ ಮುಗಿಯಲಿದೆ’ ಎಂದು ಪ್ರತಿಭಟನಕಾರರು ಹೇಳಿದ್ದಾರೆ. ನೌಕಾಪಡೆಯ ಹಡಗಿನಲ್ಲಿ ಗೊಟಬಯ ಅವರು ತಂಗಿದ್ದಾರೆ ಎನ್ನಲಾಗಿದೆ.

ಅವರ ಅಧಿಕೃತ ನಿವಾಸದಲ್ಲಿ 1.78 ಕೋಟಿ ಶ್ರೀಲಂಕಾ ರೂಪಾಯಿ (₹39 ಲಕ್ಷ) ದೊರೆತಿದೆ ಎಂದು ಸರ್ಕಾರದ ವಿರುದ್ಧ ಪ‍್ರತಿಭಟನೆ ನಡೆಸಿ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಪ‍್ರತಿಭಟನಕಾರರು ಹೇಳಿದ್ದಾರೆ.

ಪ್ರತಿಭಟನಕಾರರು ಹಣವನ್ನು ಎಣಿಸುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಈ ಹಣವನ್ನು ಪ್ರತಿಭಟನಕಾರರು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಸಾಹತುಶಾಹಿ ಅವಧಿಯಲ್ಲಿ ನಿರ್ಮಾಣವಾದ ಐಷಾರಾಮಿ ಬಂಗಲೆಯನ್ನು ಕಂಡು ಪ್ರತಿಭಟನಕಾರರು
ಚಕಿತರಾಗಿದ್ದಾರೆ. ‘ನಾಯಕರು ಇಂತಹ ಐಷಾರಾಮದಲ್ಲಿ ಜೀವಿಸುತ್ತಿದ್ದರೆ ಸಾಮಾನ್ಯ ಜನರು ಹೇಗೆ ಬದುಕುತ್ತಿದ್ದಾರೆ ಎಂಬುದರ ಕಲ್ಪನೆಯೇ ಅವರಿಗೆ ಇರುವುದಿಲ್ಲ’ ಎಂದು ಬೌದ್ಧ ಬಿಕ್ಕು ಸುಮೇದಾ ಹೇಳಿದ್ದಾರೆ.

ಅನಿಲ ಹಂಚಿಕೆಗೆ ಆದೇಶ: ಗೊಟಬಯ ಅವರು, ಜನರು ನುಗ್ಗುವುದಕ್ಕೆ ಮುಂಚೆಯೇ ಮನೆ ಬಿಟ್ಟು ಪರಾರಿಯಾಗಿದ್ದರು. ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಭಾನುವಾರವೂ ಗೊತ್ತಾಗಿಲ್ಲ. ಆದರೆ, ದೇಶಕ್ಕೆ ಸಿಕ್ಕ 3,700 ಟನ್‌ ಅಡುಗೆ ಅನಿಲ ಹಂಚಿಕೆಯು ಅತ್ಯಂತ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಗೊಟಬಯ ಆದೇಶ ನೀಡಿದ್ದಾರೆ.

ಜನರ ಜತೆ ಭಾರತ

ಭಾರತವು ಶ್ರೀಲಂಕಾದ ಜನರ ಜತೆಗೆ ನಿಲ್ಲಲಿದೆ. ಸಮೃದ್ಧಿ ಮತ್ತು ಪ್ರಗತಿಯ ತಮ್ಮ ಆಕಾಂಕ್ಷೆಗಳನ್ನು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಜನರು ಈಡೇರಿಸಿಕೊಳ್ಳುವ ಯತ್ನ ನಡೆಸುವಾಗ ಅವರ ಜತೆಗೆ ಭಾರತವು ನಿಲ್ಲಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಶ್ರೀಲಂಕಾದಲ್ಲಿನ ತ್ವರಿತಗತಿಯ ಬೆಳವಣಿಗೆಗಳ ನಡುವೆ, ಭಾರತವು ಈ ಪ್ರತಿಕ್ರಿಯೆ ನೀಡಿದೆ.

‘ಶ್ರೀಲಂಕಾ ಮತ್ತು ಅಲ್ಲಿನ ಜನರು ಎದುರಿಸುತ್ತಿರುವ ಹಲವು ಸವಾಲುಗಳ ಬಗ್ಗೆ ನಮಗೆ ಅರಿವಿದೆ. ಈ ಕ್ಲಿಷ್ಟಕರ ಸನ್ನಿವೇಶದಿಂದ ಹೊರಬರುವ ಪ್ರಯತ್ನದಲ್ಲಿ ಭಾರತವು ಜನರಿಗೆ ಬೆಂಬಲವಾಗಿ ನಿಲ್ಲಲಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ.

ತೀವ್ರ ಆರ್ಥಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತವು ಶ್ರೀಲಂಕಾಕ್ಕೆ ನೀಡಿರುವ ಆರ್ಥಿಕ ನೆರವನ್ನು ಅವರು ಉಲ್ಲೇಖಿಸಿದ್ದಾರೆ.

ಪಾತಾಳಕ್ಕೆ ಕುಸಿದ ಕೀರ್ತಿ

ಎಲ್‌ಟಿಟಿಇ ವಿರುದ್ಧದ ಆಂತರಿಕ ಯುದ್ಧವನ್ನು ಗೆದ್ದ ಕಾರಣಕ್ಕೆ ಮಹಿಂದಾ ರಾಜಪಕ್ಸ ಮತ್ತು ಗೊಟಬಯ ರಾಜಪಕ್ಷ ಅವರನ್ನು ಶ್ರೀಲಂಕಾದ ಜನರು ಹೀರೊಗಳಂತೆ ಕಾಣುತ್ತಿದ್ದರು. ಆದರೆ, ಅವರ ಕೀರ್ತಿ ಈಗ ಪಾತಾಳಕ್ಕೆ ಕುಸಿದಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಶ್ರೀಲಂಕಾ ರಾಜಕಾರಣದ ಮೇಲೆ ರಾಜಪಕ್ಸ ಕುಟುಂಬವು ಹಿಡಿತ ಸಾಧಿಸಿತ್ತು. ಪ್ರಧಾನಿಯಾಗಿದ್ದ ಮಹಿಂದಾ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಗೊಟಬಯ ಅವರು ಇದೇ ಬುಧವಾರ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ದೇಶವು ಸ್ವತಂತ್ರಗೊಂಡ ನಂತರದ ಏಳು ದಶಕಗಳಲ್ಲಿಯೇ ಅತ್ಯಂತ ತೀವ್ರವಾದ ಆರ್ಥಿಕ ಬಿಕ್ಕಟ್ಟಿಗೆ ಶ್ರೀಲಂಕಾ ಸಿಲುಕಿದೆ. ಅರ್ಥ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಅಧ್ಯಕ್ಷ ಮತ್ತು ಪ್ರಧಾನಿ ಕುರಿತು ಜನರು ಆಕ್ರೋಶಗೊಂಡಿದ್ದಾರೆ.

ವಿದೇಶಿ ವಿನಿಮಯ ಮೀಸಲು ಕೊರತೆಯಿಂದಾಗಿ ದೇಶವು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಸಾಲ ಮರುಪಾವತಿಯೂ ಆಗಿಲ್ಲ. ಇಂಧನ ಕೊರತೆ ಮತ್ತು ಅಗತ್ಯ ವಸ್ತುಗಳ ಕೊರತೆಯು ಜನರನ್ನು ಕಂಗೆಡಿಸಿದೆ.

ಮುಖ್ಯ ಬೆಳವಣಿಗೆಗಳು

l ಶ್ರೀಲಂಕಾ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರ ಮನೆಗೆ ಶನಿವಾರ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಶ್ರೀಲಂಕಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ

l ಶ್ರೀಲಂಕಾ ರೈತರಿಗೆ ನೆರವಾಗುವ ಮತ್ತು ಆಹಾರ ಭದ್ರತೆ ವಿಚಾರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸುವ ಸಲುವಾಗಿ ಭಾರತವು ಶ್ರೀಲಂಕಾಕ್ಕೆ 44,000 ಟನ್‌ ಯೂರಿಯಾವನ್ನು ಸಾಲದ ರೂಪದಲ್ಲಿ ನೀಡಿದೆ. ಯೂರಿಯಾವು ಶ್ರೀಲಂಕಾಕ್ಕೆ ಭಾನುವಾರ ತಲುಪಿದೆ ಎಂದು ಶ್ರೀಲಂಕಾದ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ

l ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬಳಿಕ ದೇಶದ ರಾಜಧಾನಿ ಕೊಲಂಬೊ ಭಾನುವಾರ ಶಾಂತ ಸ್ಥಿತಿಗೆ ಮರಳಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT