ಹಲವಾರು ಹಣ್ಣಿನ ಗಿಡಗಳನ್ನು ಮುಂದಿನ ಮುಂಗಾರಿನಲ್ಲಿ ನಾಟಿ ಮಾಡಲು ಸಿದ್ಧತೆ ನಡೆಸಿದ್ದೇನೆ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಆದಾಯ ಭದ್ರತೆ ನೀಡುವುದು ಹಣ್ಣು ಅರಣ್ಯ ಕೃಷಿ. ಇದು ನಮ್ಮ ರೈತ ಸಮುದಾಯದ ಮುಂದಿನ ಸಂಕಲ್ಪವೂ ಆಗಬೇಕಿದೆ. ಗ್ರಾಹಕರಿಗೆ ತರಕಾರಿ–ಸೊಪ್ಪು ಮಾರಾಟ ನಮ್ಮ ಅನುಭವಕ್ಕೆ ದಕ್ಕಿದೆ. ಅದರ ಮುಂದಿನ ಹೆಜ್ಜೆಯಾಗಿ ನಗರ–ಪಟ್ಟಣಗಳ ಅಪಾರ್ಟ್ಮೆಂಟ್, ಶಾಲೆ–ಕಾಲೇಜುಗಳಿಗೆ ತೆರಳಿ ಶುದ್ಧ ಹಾಗೂ ಗುಣಮಟ್ಟದ ತರಕಾರಿ, ಹಣ್ಣುಗಳ ಮಾರಾಟದ ಯೋಜನೆ ರೂಪಿಸಿದ್ದೇನೆ. ಈಗ ನಾನು 23 ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದೇನೆ. ಇವುಗಳ ಸಂಖ್ಯೆ ಹೆಚ್ಚಿಸುವುದು ಈ ವರ್ಷದ ಯೋಜನೆಗಳಲ್ಲಿ ಸೇರಿದೆ. ದೇಶ–ವಿದೇಶಗಳ ಸೋರೆಕಾಯಿಗಳನ್ನು ನಾನು ಬೆಳದಿದ್ದು, ಅವುಗಳನ್ನು ಸುಂದರ ಕಲಾಕೃತಿಯಾಗಿ ಮಾಡಲಾಗುತ್ತಿದೆ. ಆ ಕುರಿತ ತರಬೇತಿಯನ್ನು ಮೈಸೂರಿನ ಕೃಷಿ ಕಲಾ ಸಂಸ್ಥೆಯು ನೀಡಿದೆ. ಆಸಕ್ತ ರೈತ ಮಹಿಳೆಯರ ಜೊತೆಗೂಡಿ ಇಲ್ಲಿ ಬೆಳೆದ ಸೋರೆಕಾಯಿಯ ಮೌಲ್ಯವರ್ಧನೆ ಮಾಡುವ ಆಸೆಯಿದೆ. ವೈವಿಧ್ಯ ಸಂರಕ್ಷಣೆಗೆ ದೇಸಿ ತಳಿ, ಸಾವಯವ ಕೃಷಿ, ಉಪಕಸುಬು ಜೊತೆಗೆ ಗ್ರಾಹಕನ ಜೊತೆ ನೇರ ವಹಿವಾಟು ಸಾಧಿಸಿದಾಗ ರೈತನ ಸ್ಥಿತಿ ಸುಧಾರಿಸೀತು. ‘ವ್ಯವಸಾಯ ನಷ್ಟ’ ಎಂಬ ಮಾತು ಖಂಡಿತ ಸುಳ್ಳು. ಹಾಗೆ ಹೇಳಲು ನನ್ನ ಯಶಸ್ವಿ ಕೃಷಿಯೇ ಕಾರಣ ಎನ್ನಲು ಏನು ಅಡ್ಡಿ?!