ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇರು ಬೆಳೆಗಾರರಿಗೆ ಹೊಸ ಆ್ಯಪ್ ‌‘ಕ್ಯಾಶು ಇಂಡಿಯಾ’

ಪುತ್ತೂರಿನ ಐಸಿಎಆರ್‌ ಗೇರು ಸಂಶೋಧನಾಲಯದಿಂದ ಅಭಿವೃದ್ಧಿ
Last Updated 13 ಆಗಸ್ಟ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಮಂಗಳೂರು: ಪುತ್ತೂರಿನ ಐಸಿಎಆರ್‌ನ ಗೇರು ಸಂಶೋಧನಾ ನಿರ್ದೇಶನಾಲಯವು, ಗೇರು ಬೆಳೆಗಾರರಿಗೆ ಸಂಪೂರ್ಣ ಮಾಹಿತಿ ನೀಡುವ ಹೊಸ ಆ್ಯಪ್‌ ‘ಕ್ಯಾಶು ಇಂಡಿಯಾ’ (Cashew India) ಹೊರತಂದಿದೆ. ಈ ಮೂಲಕ ಗೇರು ಬೆಳೆಗಾರರು ಹಾಗೂ ಗೇರು ಉದ್ಯಮವನ್ನು ಸಂಪರ್ಕಿಸುವ ಕೊಂಡಿಯನ್ನು ರೂಪಿಸಿದೆ.

ಗೇರು ನರ್ಸರಿ, ಗೇರು ಕಸಿಯಲ್ಲಿನ ಪ್ರಗತಿ, ಕೀಟ ಮತ್ತು ರೋಗ ನಿರ್ವಹಣೆಯಲ್ಲಿನ ಬೆಳವಣಿಗೆಗಳು ಮತ್ತು ಹೊಸ ಆವಿಷ್ಕಾರಗಳು, ಕೊಯ್ಲೋತ್ತರ ಸಂಸ್ಕರಣೆ, ಮಾರುಕಟ್ಟೆ ವಿಸ್ತರಣೆ, ಗೇರು ಮಾರುಕಟ್ಟೆಯಲ್ಲಿನ ಹೊಸ ಬೆಳವಣಿಗೆಗಳು, ಸಾಧಕ ಕೃಷಿಕರ ಮಾಹಿತಿ, ಸಂಶೋಧಕರು ಮತ್ತು ಸಂಶೋಧನೆಯ ಬಗೆಗಿನ ಮಾಹಿತಿ, ದೇಶದಲ್ಲಿರುವ ಗೇರು ಸಂಸ್ಕರಣಾ ಘಟಕಗಳ ವಿವರವೂ ಸೇರಿದಂತೆ ದೇಶದ ಮೂಲೆ ಮೂಲೆಯಲ್ಲಿ ಗೇರು ಕೃಷಿಗೆ ಸಂಬಂಧಿಸಿ ನಡೆಯುವ ಎಲ್ಲ ಮಾಹಿತಿ ಮತ್ತು ಜ್ಞಾನಸುಧೆಯನ್ನು ಈ ಆ್ಯಪ್‌ ಮೂಲಕ ಪಡೆಯಬಹುದಾಗಿದೆ.

ಕೃಷಿಕ ಅಥವಾ ಬಳಕೆದಾರ ತನ್ನ ತೋಟದ ಮಾಹಿತಿ, ಚಿತ್ರ, ವಿಡಿಯೊಗಳನ್ನು ‘ಇಲ್ಲಿ ನನ್ನ ಗೇರು ಬೆಳೆ’ ಎಂಬ ಉಪ ವಿಭಾಗದಲ್ಲಿ ಸಂಗ್ರಹಿಸಿಡುವ ಅವಕಾಶವೂ ಇದೆ. ದೇಶದ ನಾನಾ ಸಂಶೋಧನಾ ಕೇಂದ್ರಗಳಿಂದ ತಮಗೆ ಬೇಕಾದ ಗೇರು ಸಸಿಗಳನ್ನು ಆನ್‌ಲೈನ್‌ನಲ್ಲಿಯೇ ಬುಕ್‌ ಮಾಡಬಹುದು. ಮಾರ್ಕೆಟ್‌ ಇನ್ಫೊ ಮೂಲಕ ಗೇರು ಬೆಳೆಗಾರರು ತಮ್ಮ ಉತ್ಪನ್ನಗಳ ಮಾರಾಟವನ್ನೂ ಮಾಡಬಹುದು. ತಮಗೆ ಅಗತ್ಯವಿರುವ ಸಾಮಗ್ರಿಗಳನ್ನೂ ಕೊಂಡುಕೊಳ್ಳಬಹುದು. ಜತೆಗೆ ಗೇರು ಬೆಳೆಯ ಪ್ರತಿ ಹಂತದ ಖರ್ಚು–ವೆಚ್ಚ, ನಿರ್ವಹಣೆಯಂತಹ ವಿಷಯಗಳನ್ನೂ ಸಂಗ್ರಹ ಮಾಡಬಹುದು.

ಹಿಂದಿ, ಇಂಗ್ಲಿಷ್, ಗುಜರಾತಿ, ಮರಾಠಿ, ಕನ್ನಡ, ಮಲಯಾಳ, ತಮಿಳು, ತೆಲುಗು, ಒರಿಯಾ, ಬಂಗಾಳಿ ಸೇರಿದಂತೆ 11 ಭಾಷೆಗಳಲ್ಲಿ ಈ ಆ್ಯಪ್‌ ಲಭ್ಯವಾಗಿದೆ.

ಪುತ್ತೂರಿನ ಐಸಿಎಆರ್‌ನ ಸಂಶೋಧನಾ ನಿರ್ದೇಶನಾಲಯದ ಹಿರಿಯ ವಿಜ್ಞಾನಿ ಡಾ.ಮೋಹನ್‌ ತಲಕಾಲುಕೊಪ್ಪ ಹಾಗೂ ಅವರ ತಂಡವು ಈ ಆ್ಯಪ್‌ನ ಪರಿಕಲ್ಪನೆ, ವಿನ್ಯಾಸ ಹಾಗೂ ಅಭಿವೃದ್ಧಿಯನ್ನು ರೂಪಿಸಿದೆ.

‘ದೇಶವ್ಯಾಪಿ ಮಾನದಂಡಗಳನ್ನು ಇಟ್ಟುಕೊಂಡು ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದು, ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಗೇರು ಪ್ರಪಂಚದ ಮಾಹಿತಿ ಪಡೆದುಕೊಳ್ಳಬಹುದು’ ಎನ್ನುತ್ತಾರೆ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಗಂಗಾಧರ್‌ ನಾಯಕ್‌.

ಆ್ಯಪ್‌ನಲ್ಲಿರುವ ಮಾಹಿತಿ ಕೋಣೆಗಳು

ಚರ್ಚಾ ಕೋಣೆಯ ಸಂವಹನ
ಇಂಗ್ಲಿಷ್‌ ಮತ್ತು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಪ್ರತ್ಯೇಕವಾಗಿ ಮಾಹಿತಿ ಪಡೆಯಬಹುದಾಗಿದೆ. ಚರ್ಚಾ ಕೋಣೆಯ ಮೂಲಕ ಆಯಾ ಸಮಯದಲ್ಲಿ ಆ್ಯಪ್‌ ಬಳಸುತ್ತಿರುವ ಕೃಷಿಕರೊಡನೆ ಸಂವಹನ ಕೂಡ ನಡೆಸಬಹುದಾಗಿದೆ. ಅಲ್ಲಿ ಲಭ್ಯವಿರುವ ಇ–ಸ್ಪೀಕ್‌ ಬಟನ್‌ ಒತ್ತಿದಲ್ಲಿ, ಅಲ್ಲಿರುವ ಬರಹಗಳನ್ನು ಧ್ವನಿರೂಪವನ್ನು ಆ್ಯಪ್‌ ಓದುತ್ತದೆ. ಈ ಆ್ಯಪ್‌ನ ಬಳಕೆಗೆ ಇಂಟರ್‌ನೆಟ್‌ ಅಗತ್ಯವಾಗಿದೆ.

ಆ್ಯಪ್‌ ಅಭಿವೃದ್ಧಿಗೆ ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್‌, ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಹಾಗೂ ಕೊಚ್ಚಿನ್‌ನ ಗೇರು ಮತ್ತು ಕೊಕ್ಕೊ ಅಭಿವೃದ್ಧಿ ನಿರ್ದೇಶನಾಲಯಗಳು ಆರ್ಥಿಕ ನೆರವು ನೀಡಿವೆ. ಮಾಹಿತಿಗಾಗಿ ಡಾ.ಮೋಹನ್‌ ತಲಕಾಲುಕೊಪ್ಪ (ಮೊ.ಸಂ.99022 73468 ಅಥವಾ ಇ–ಮೇಲ್‌ mohangs2007@gmail.com) ಅವರನ್ನು ಸಂಪರ್ಕಿಸಬಹುದು.

*
ಈ ಆ್ಯಪ್‌ನಲ್ಲಿ ಗೇರು ಕೃಷಿಕರಿಗೆ ಅಗತ್ಯವಾದ ಎಲ್ಲ ಮಾಹಿತಿಗಳು ಲಭ್ಯವಾಗಿವೆ. ಈ ಆ್ಯಪ್‌ ಮೂಲಕ ಕೃಷಿಕರು ತಜ್ಞರಿಂದ ಸಲಹೆಗಳನ್ನೂ ಪಡೆಯಬಹುದಾಗಿದೆ
-ಡಾ.ಮೋಹನ ತಲಕಾಲುಕೊಪ್ಪ, ಗೇರು ಸಂಶೋಧನಾಲಯದ ಹಿರಿಯ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT