ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬನೆಗೆ ಕೌಶಲದ ಸಾಥ್

Last Updated 4 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಅಲ್ಲೊಂದು ಬಿದಿರಿನ ಮನೆ. ಮನೆ ಮುಂದಿನ ಚಾವಣಿಯ ನೆರಳಲ್ಲಿ ವೃತ್ತಾಕಾರವಾಗಿ ಒಂದಷ್ಟು ಮಹಿಳೆಯರು ಕುಳಿತಿದ್ದಾರೆ. ಒಬ್ಬರು ಬಿದಿರಿನ ಸೀಳನ್ನು ಸಾಪ್ ಮಾಡುತ್ತಿದ್ದಾರೆ. ಪಕ್ಕದಲ್ಲಿದ್ದ ಮತ್ತೊಬ್ಬರು ಅಡಿಕೆ ಹಾಳೆ ಸ್ವಚ್ಛಗೊಳಿಸುವಲ್ಲಿ ತಲ್ಲೀನ. ದೂರದಲ್ಲಿ ಕುಳಿತಿದ್ದವರು ಬಾಳೆಯ ದಾರಗಳನ್ನು ಹೆಣೆಯುತ್ತಾ, ಬ್ಯಾಗ್ ತಯಾರಿಸಿ, ಅದಕ್ಕೆ ಹಿಡಿ (ಹ್ಯಾಂಡಲ್) ಜೋಡಿಸುತ್ತಿದ್ದಾರೆ. ಪಕ್ಕದಲ್ಲೇ ಇರುವ ಸ್ಟಾಂಡ್ ಮೇಲೆ ತಯಾರಾಗಿರುವ ಬ್ಯಾಗ್, ಪರ್ಸ್, ಹಣ್ಣಿನ ಬುಟ್ಟಿ ಸಾಲಾಗಿ ಜೋಡಿಸಿದ್ದಾರೆ. ಅವು ಮೇಳಕ್ಕೋ ಮಾರುಕಟ್ಟೆಗೋ ಹೊರಡಲು ಅಣಿಯಾಗಿವೆ...

ಇದು ‘ಕ್ರಾಫ್ಟರ್ ಸ್ಪೇಸ್’ ಎಂಬ ಕರಕುಶಲ ತರಬೇತಿ ಕೇಂದ್ರದ ದೃಶ್ಯ. ತುಮಕೂರು ಜಿಲ್ಲೆ ದೇವರಾಯನದುರ್ಗಕ್ಕೆ ಹೋಗುವ ದಾರಿಯಲ್ಲಿ ದುರ್ಗದಹಳ್ಳಿ ಬಳಿಯ ಹಳೇಕೋಟೆ ಗ್ರಾಮವಿದೆ. ಸಮೀಪದಲ್ಲೇ ತೋಟವೊಂದಿದೆ. ಅದರ ನಡವಿರುವ ಬಿದಿರಿನ ಕುಟೀರವೇ ಈ ತರಬೇತಿ ಕೇಂದ್ರ.

ಈ ಕೇಂದ್ರ, ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಮೀಣ ಮಹಿಳೆಯರು ತಮ್ಮೂರುಗಳಲ್ಲೇ ಕರಕುಶಲ ವಸ್ತುಗಳು ತಯಾರಿಸಿ, ಮಾರಾಟ ಮಾಡಿ ಸ್ವಾವಲಂಬಿ ಬದುಕು ಸಾಗಿಸಬೇಕು. ಕೃಷಿ ಜತೆಗೆ, ಪರ್ಯಾಯ ಉದ್ಯೋಗ ಸೃಷ್ಟಿಸಿ ಕೊಳ್ಳಬೇಕು. ಗ್ರಾಹಕರಿಗೆ ನೈಸರ್ಗಿಕ ಉತ್ಪನ್ನಗಳನ್ನು ತಲುಪಿಸಿ, ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಬೇಕು ಎಂಬ ಉದ್ದೇಶವಿಟ್ಟುಕೊಂಡು ಮಹಿಳೆಯರು ಮತ್ತು ಯುವಕರಿಗೆ ತರಬೇತಿ ನೀಡುತ್ತಿದೆ. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು.

ತುಮಕೂರು ಮೂಲದ ಎಂಜಿನಿಯರ್ ದಿನೇಶ್ ಈ ತರಬೇತಿ ಕೇಂದ್ರ ಆರಂಭಿಸಿದವರಲ್ಲಿ ಪ್ರಮುಖರು. ಅವರ ಈ ಕಾರ್ಯಕ್ಕೆ ಗೆಳೆಯರಾದ ಮುಕುಂದರಾವ್, ಗಿರೀಶ್ ಕೈ ಜೋಡಿಸಿದ್ದಾರೆ. ವಿದೇಶಗಳಲ್ಲಿ ಎಂಜಿನಿಯರ್ ಆಗಿದ್ದ ದಿನೇಶ್ ನಿವೃತ್ತಿಯ ನಂತರ ಜನಸ್ತು ಸಂಸ್ಥೆ ಮೂಲಕ ಒಂದೂವರೆ ವರ್ಷಗಳ ಹಿಂದೆ ಈ ತರಬೇತಿ ಕೇಂದ್ರ ಆರಂಭಿಸಿದ್ದಾರೆ.

ಕೇಂದ್ರದಿಂದ ನಿಯಮಿತವಾಗಿ ಎರಡು ಅಥವಾ ಮೂರು ದಿನಗಳ ಕರಕುಶಲ ವಸ್ತುಗಳ ಕಾರ್ಯಾಗಾರ ಆಯೋಜಿಸುತ್ತಾರೆ. ರಾಜ್ಯದ ಬೇರೆ ಭಾಗದಲ್ಲಿರುವ ಕರಕುಶಲ ಕಲೆಯ ಪರಿಣತರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಹ್ವಾನಿಸಿ, ಶಿಬಿರಾರ್ಥಿಗಳಿಗೆ ತರಬೇತಿ ಕೊಡಿಸುತ್ತಾರೆ. ‘ನಾವು ಸ್ಥಳೀಯರಿಗೆ ಆದ್ಯತೆ ಕೊಡುತ್ತೇವೆ. ಕಾರ್ಯಾಗಾರಕ್ಕೆ ಬರಲು ಆಸಕ್ತಿ ತೋರುವ ಹೊರಗಿನವರಿಗೆ ಶುಲ್ಕ ವಿಧಿಸುತ್ತೇವೆ. ಆದರೆ, ಸ್ಥಳೀಯರಿಂದ ಶುಲ್ಕ ಪಡೆಯುವುದಿಲ್ಲ. ಬದಲಿಗೆ ನಾವೇ ಕೆಲವೊಮ್ಮೆ ಅವರಿಗೆ ಸಂಭಾವನೆ ಕೊಡುತ್ತೇವೆ’ ಎನ್ನುತ್ತಾರೆ ದಿನೇಶ್.

ಇಲ್ಲಿಯವರೆಗೂ ನಡೆದಿರುವ ತರಬೇತಿಗಳಲ್ಲಿ ಸುತ್ತಲಿನ ದುರ್ಗದಹಳ್ಳಿ, ಅನುಪನಹಳ್ಳಿ, ತಿಮ್ಮನಾಯ್ಕನಹಳ್ಳಿ, ದೇವರಾ ಯನ ದುರ್ಗದ 15ಕ್ಕೂ ಹೆಚ್ಚು ಮಂದಿ ಇಲ್ಲಿ ತರಬೇತಿ ಪಡೆದಿದ್ದಾರೆ. ಅದರಲ್ಲಿ ಮಹಿಳೆಯರೇ ಅಧಿಕ. ಕೆಲವರು ಈಗ ಮನೆಯಲ್ಲೇ ಉದ್ಯೋಗ ಆರಂಭಿಸಿದ್ದಾರೆ. ‘ಇಲ್ಲಿ ಪಡೆದ ತರಬೇತಿಯಿಂದ ಬುಟ್ಟಿ, ಬ್ಯಾಗ್, ಕೈ ಚೀಲಗಳ ತಯಾರಿಕೆ ಕಲಿತ್ತಿದ್ದೇನೆ. ಈ ಮೂಲಕ ನಾನೂ ಹಣ ಸಂಪಾದಿಸುತ್ತಿದ್ದೇನೆ’ ಎನ್ನುತ್ತಾರೆ ತರಬೇತಿ ಪಡೆದಿರುವ ಗೃಹಿಣಿ ಮಹಾಲಕ್ಷ್ಮಿ.

ಈ ಸಂಸ್ಥೆಯು ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ತರಬೇತಿ ಆಯೋಜಿಸಿದೆ. ಹೊರ ಜಿಲ್ಲೆಗಳಲ್ಲದೇ ಹೊರ ರಾಜ್ಯ
ಗಳಿಂದಲೂ ಈ ಕೇಂದ್ರಕ್ಕೆ ಬಂದು ತರಬೇತಿ ಪಡೆಯುತ್ತಿದ್ದಾರೆ. ಸಂಸ್ಥೆಯವರು ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇಲ್ಲಿವರೆಗೆ ಕೇಂದ್ರದಿಂದ ತರಬೇತಿ ಪಡೆದವರ ಸಂಖ್ಯೆ 400 ದಾಟಿದೆ.

ತರಬೇತಿ ವೇಳೆ ಕೇಂದ್ರದಲ್ಲಿ ತಯಾರಾದ ವಸ್ತುಗಳಿಗೆ ಉತ್ತಮ ಮಾರುಕಟ್ಟೆಯೂ ಸಿಕ್ಕಿದೆ. ಗ್ರಾಹಕರಿಂದ ಬೇಡಿಕೆಯೂ ಬರುತ್ತಿದೆ. ಹೀಗಾಗಿ ಇಲ್ಲಿ ತರಬೇತಿ ಪಡೆದ ಮಹಿಳೆಯರಿಂದಲೇ ಉತ್ಪನ್ನಗಳನ್ನು ತಯಾರಿಸಿ, ಅವರಿಗೆ ಮಾರುಕಟ್ಟೆ ಒದಗಿಸಿಕೊಡಲು ಸಂಸ್ಥೆ ಚಿಂತನೆ ನಡೆಸುತ್ತಿದೆ.

ಸ್ಥಳೀಯವಾಗಿ ಸಿಗುವ ನೈಸರ್ಗಿಕ ವಸ್ತುಗಳೇ, ಕರಕುಶಲ ಉತ್ಪನ್ನಗಳ ಕಚ್ಚಾವಸ್ತುಗಳಾಗಬೇಕು. ಆ ವಸ್ತುಗಳು ಪರಿಸರಕ್ಕೆ ಹಾನಿ ಉಂಟು ಮಾಡಬಾರದು. ಇವು ಈ ಕೇಂದ್ರದ ನಿಯಮಗಳು. ಈ ನಿಯಮ ಅನುಸರಿಸಿರುವ ಶಿಬಿರಾರ್ಥಿಗಳು, ಸ್ಥಳೀಯವಾಗಿ ಸಿಗುವ ಅಡಿಕೆ ಪಟ್ಟೆಯಿಂದ ಬೌಲ್‌ಗಳನ್ನು ತಯಾರಿಸಿದ್ದಾರೆ. ಈ ಬೌಲ್‌ಗಳ ಮೇಲೆ ಚಿತ್ರಗಳನ್ನು ಬಿಡಿಸಿದ್ದಾರೆ. ಬಿದಿರಿನಿಂದ ಹೂದಾನಿಗಳು, ಅಡಿಕೆಪಟ್ಟೆಯಿಂದ ಬುಟ್ಟಿ, ಚಿಕ್ಕ ಚಿಕ್ಕ ಬ್ಯಾಗ್, ಪರ್ಸ್, ಪೌಚ್‌ಗಳನ್ನು ತಯಾರಿಸಿದ್ದಾರೆ. ಕೆರೆಯ ಜೊಂಡು ಒಣಗಿಸಿ, ಹದಮಾಡಿ ಬುಟ್ಟಿ, ಬ್ಯಾಗು, ಕೈಚೀಲ, ಕುರ್ಚಿ, ಚಾಪೆ. ಟೋಪಿ, ಪದಕ(ಮೆಡಲ್‍ಗಳು)ಗಳನ್ನು ತಯಾರಿಸಿದ್ದಾರೆ.

ಮನೆಯಂಗಳದಲ್ಲೇ ಉದ್ಯೋಗ: ‘ಗ್ರಾಮೀಣ ಮಹಿಳೆಯರಿಗೆ ತಮ್ಮ ಮನೆಯಂಗಳದಲ್ಲೇ ಉದ್ಯೋಗ ಸಿಗುವಂತಾಗಬೇಕು. ಕೃಷಿ ಜತೆ ಜತೆಗೆ ಉಪ ಆದಾಯ ಪಡೆಯಬೇಕು. ಸ್ವಾವಲಂಬನೆ ಜೀವನ ನಡೆಸಬೇಕು. ಅದು ಈ ತರಬೇತಿಯಿಂದ ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ದಿನೇಶ್.

ಇಲ್ಲಿ ಹೊಸ ಹೊಸ ವಿನ್ಯಾಸಗಳನ್ನು ಸಂಶೋಧಿಸಿ (ಕಸ್ಟಮೈಸ್), ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಉದಾಹರಣೆಗೆ; ಅಡಿಕೆ ಪಟ್ಟೆಯಿಂದ ಹೆಚ್ಚಾಗಿ ತಟ್ಟೆಯಷ್ಟೇ ತಯಾರಾಗುತ್ತಿತ್ತು. ಈಗ ಅದರ ವ್ಯಾಪ್ತಿ ವಿಸ್ತರಿಸಿ, ಪ್ಲಾಸ್ಟಿಕ್ ಡಬ್ಬಿಗಳಿಗೆ ಪ್ರತಿಸ್ಪರ್ಧೆ ನೀಡುವಂತಹ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಮಾರುಕಟ್ಟೆ, ಬೇಡಿಕೆಗೆ ತಕ್ಕಂತೆ ವಸ್ತುಗಳು ರೂಪುಗೊಳ್ಳುತ್ತವೆ. ಹೀಗಾಗಿಯೇ ಒಬ್ಬ ಗೃಹಿಣಿ ಶ್ರಮಪಟ್ಟರೆ ದಿನಕ್ಕೆ ₹ 300 ಗಳಿಸಬಹುದು. ಇದು ಹೊರಗೆ ಶ್ರಮಪಟ್ಟು ಮಾಡುವ ಒಂದು ದಿನದ ಕೂಲಿಗಿಂತಲೂ ಹೆಚ್ಚು ಎನ್ನುವುದು ಸಂಸ್ಥೆಯವರ ಅಭಿಪ್ರಾಯ.

ಅಂಗವಿಕಲರಿಗೂ ತರಬೇತಿ: ಮಹಿಳೆಯರ ಜತೆಗೆ, ಯುವಕರಿಗೆ, ಅಂಗವಿಕಲರಿಗೆ, ಬುದ್ದಿ ಮಾಂದ್ಯರಿಗೂ ಈ ಕೇಂದ್ರದಲ್ಲಿ ತರಬೇತಿ ನೀಡುತ್ತಿದ್ದಾರೆ. ಮಾನಸಿಕರಾಗಿ ಖಿನ್ನರಾದವರಿಗೂ ದುಡಿಯುವ ಮಾರ್ಗ ಹೇಳಿಕೊಡುತ್ತಿದ್ದಾರೆ. ‘ಇಂಥವರಿಗೆ ಈ ಕ್ರಾಫ್ಟ್ ಕೆಲಸವೇ ಒಂದು ರೀತಿಯ ಥೆರಪಿ. ಈ ತರಬೇತಿ ಮೂಲಕ ಅವರು ಸುಧಾರಿಸಲೂಬಹುದು’ ಎನ್ನುತ್ತಾರೆ ದಿನೇಶ್.

ಕ್ರಾಫ್ಟರ್‌ ಸ್ಪೇಸ್ ಕೇಂದ್ರದ ಮಾಹಿತಿಗಾಗಿ ಸಂಪರ್ಕಿಸುವ ಸಂಖ್ಯೆ (ದಿನೇಶ್) 9731666663

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT