ಸೀತೆಯನ್ನು ಹುಡುಕಲು ಹೋಗಿದ್ದ ಮೈಂದ ಮಹಾವಾನರನು ಕವಿ. ಅಂಗದನು ಕರೆದಿದ್ದ ಸಭೆಗೆ ಅವನು ತನ್ನ ಪಡೆಯ ಅನುಭವವನ್ನು ವಿಶದವಾಗಿ ವಿವರಿಸುವನು. ‘ಶುದ್ಧಿ ಮೇಣ್ ಶ್ರದ್ಧೆಯಿರೆ ತುದಿಗೆ ತಪ್ಪದು ಸಿದ್ಧಿ ಸಾಧನೆಗೆ’ ಎನ್ನುವ ತನ್ನ ಅನುಭವಾಮೃತವನ್ನು ತಿಳಿಸುವನು. ಅವರು ಮರಳುಗಾಡಿನಲ್ಲಿ ತೊಳಲಾಡಿದ್ದು, ಮೃಕಂಡು ಆಶ್ರಮದ ಆಶ್ರಯ, ಸ್ವಯಂಪ್ರಭೆಯ ದಿವ್ಯಾಶ್ರಮದ ಅನುಭವ ಹೇಳುವನು. ಆ ಧರ್ಮಚಾರಿಣಿಯಿಂದ ತಾವು ಮಹೇಂದ್ರಾಚಲಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸುವನು. ನಿರಾಶೆ ತೊಲಗಲಿ, ಹೇಡಿತನದ ಭಾವನಾಶವಾಗಲಿ, ನಿಂದನೆಯ ನೆಲೆ ಇಲ್ಲವಾಗಲಿ, ಉತ್ಸಾಹಕ್ಕೆ ಕೋಡು ಮೂಡಲಿ ಎಂದು ಆಶಾಭಾವನೆ ವ್ಯಕ್ತಪಡಿಸುವನು.