ಪಿ. ಲಂಕೇಶ್ ಅವರ ಬರಹಗಳನ್ನು ಈ ಹೊತ್ತಿಗೆ ಅನ್ವಯಿಸಿ ನೋಡುವ ಮನಸ್ಸುಗಳು ನಮ್ಮ ನಡುವೆ ಇವೆ. ಅವರ ಓದನ್ನು ಪುನರ್ವಿಮರ್ಶಿಸುತ್ತಾ, ಸಾಲುಗಳ ನಡುವಿನ ಅರ್ಥ–ತತ್ವವನ್ನು ಅರ್ಥೈಸುತ್ತಾ ಬಂದ ಕೆಲವರೂ ಇದ್ದಾರೆ. ಕೃತಿಕಾರ ಸುರೇಶ್ ನಾಗಲಮಡಿಕೆ ಅದನ್ನು ಅಕಡೆಮಿಕ್ ಶಿಸ್ತಿನಿಂದ ಮಾಡಿದ್ದಾರೆ. ಲಂಕೇಶರು ಬದುಕನ್ನು ನೋಡಿದ್ದ ರೀತಿ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಗಳು ಉಂಟುಮಾಡಿದ್ದ ಅವಸ್ಥೆಗಳನ್ನು ಅವರು ಪರಾಮರ್ಶಿಸಿದ್ದು ಹೇಗೆನ್ನುವುದಕ್ಕೆ ಸುರೇಶ್ ನಾಗಲಮಡಿಕೆ ಪಾತಾಳಗರಡಿ ಹಾಕಿದ್ದಾರೆ. ಲಂಕೇಶರ ನೆಪದಲ್ಲಿ ಕನ್ನಡ ಕಥನ, ಬಹುನೆಲೆಯ ಸಮಾಜ ಮತ್ತು ಲಂಕೇಶರ ಕಥಾಲೋಕ, ಲಂಕೇಶರ ಕಾದಂಬರಿ ಲೋಕ ಎಂದು ಕೃತಿಕಾರರು ಭಾಗಗಳಾಗಿ ವಿಂಗಡಿಸಿಕೊಂಡು, ತಮ್ಮ ಅರ್ಥೈಸುವಿಕೆಯನ್ನು ಮಂಡಿಸಿದ್ದಾರೆ. ಲಂಕೇಶರ ಸಾಹಿತ್ಯದ ಈ ಹಿಂದಿನ ವಿಮರ್ಶೆಗಳನ್ನು ಅಲ್ಲಗಳೆಯದೆ, ಸಮಕಾಲೀನ ಸಂದರ್ಭದಲ್ಲಿ ಸಾಹಿತ್ಯದ ವಿದ್ಯಾರ್ಥಿಯಾಗಿ ತಾವು ಅವರನ್ನು ಗ್ರಹಿಸುತ್ತಿರುವುದು ಹೇಗೆ ಎನ್ನುವುದನ್ನು ಹೇಳಲು ಹೊರಟಿರುವುದಾಗಿ ಲೇಖಕರು ಮೊದಲೇ ತಿಳಿಸಿರುವುದು ಅವರ ವಿನಯಕ್ಕೆ ಸಾಕ್ಷಿ.