ಸಂಗಮೇಶ ಬಾದವಾಡಗಿ ಅವರು ಗ್ರಾಮೀಣ ಬದುಕಿನ ಸೊಗಡು, ಪ್ರಕೃತಿ, ಪ್ರೀತಿ–ಪ್ರೇಮ ಹೀಗೆ ಅವರ ಅನುಭವದ ರಾಶಿಯನ್ನು ಕವಿತೆಗಳಲ್ಲಿ ಹೂರಣವಾಗಿಸಿಕೊಂಡಿದ್ದಾರೆ.
ವಿಷಯವಸ್ತುವನ್ನು ಚೊಕ್ಕ ಸಾಲಿನಲ್ಲಿ ಗ್ರಹಿಸಿ, ಅವುಗಳನ್ನು ಪದಗಳಲ್ಲಿ ಪೋಣಿಸಿ ಓದುಗರ ಕೊರಳಿಗೆ ಹಾಕುವ ಹಾರದಂತೆ ಇಲ್ಲಿನ ಕವಿತೆಗಳು ಓದುಗರ ಅನುಭವಕ್ಕೆ ಬರುತ್ತದೆ.
‘ಚಂಡಮಾರುತಕೆ ಇದ್ದರೆಷ್ಟು ಕೋಪ, ಹೆದರದೆ ಉರಿಯಬೇಕು ನಂದಾದೀಪ’ ಎಂದು ಹೇಳುವ ಕವಿ ಅಂತರಂಗದ ಶುದ್ಧಿಯಬಗ್ಗೆ ಕಿವಿ ಮಾತು ಹೇಳುತ್ತಾರೆ. ಪ್ರತಿ ಪದ್ಯದ ಕೊನೆಯಲ್ಲಿ ಪದದ ಭಾವಾರ್ಥ ನೀಡಿ, ಕವಿತೆಗಳನ್ನು ಅರ್ಥ ಮಾಡಿಕೊಳ್ಳುವಿಕೆಯ ಹಾದಿಯನ್ನು ಹಗುರಾಗಿಸುತ್ತವೆ.
‘ಉಳ್ಳವರು ಚೆಂಡಾಡಿ ಉಂಡು ಏಳುವವರೇ ಬಹಳ, ಹಸಿದವರಿಗೆ ಅಗಳನ್ನ ನೀಡುವ ಕೈಗಳು ವಿರಳ’ ಎಂದು ಹೇಳುವ ಕವಿ ಪ್ರಸ್ತುತ ದಿನದಲ್ಲಿ ಹೊಟ್ಟೆ ತುಂಬಿದವನಿಗೆ ಇರುವ ಸೌಲಭ್ಯ ಮತ್ತು ಬಡವನ ನೋವಿನ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.ಇಲ್ಲಿನ 60 ಕವಿತೆಗಳು ಓದುಗನಿಗೆ ಕುತೂಹಲ ತಣಿಸುವಂತಿವೆ. ಓದಿನ ಸುಖವನ್ನು ನೀಡಬಹುದಾದಷ್ಟು ಗಟ್ಟಿಯೂ ಆಗಿವೆ.