ಮುಂಬೈ ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಜಯಾ, ಈ ಡಿಸೆಂಬರ್ನಲ್ಲಿ ಮುಂಬೈನಲ್ಲಿ ಪ್ರದರ್ಶನ ನಡೆಸಲು ಈ ಮೊದಲು ಉದ್ದೇಶಿಸಿದ್ದರು. ಆದರೆ ಕೋವಿಡ್ನಿಂದಾಗಿ ಪರಿಸ್ಥಿತಿ ಬದಲಾಗಿದ್ದರಿಂದ ತಮ್ಮ ಹೊಸ ವೆನ್ಸೈಟ್ನಲ್ಲಿ ಈ ದಸರಾ ಸಂದರ್ಭದಲ್ಲಿ ಪ್ರದರ್ಶನ ಏರ್ಪಡಿಸಿದ್ದಾರೆ. ಇಡೀ ಜಗತ್ತೇ ನಿಧಾನಗತಿಯಲ್ಲಿ ನಡೆಯುತ್ತಿರುವಾಗ ಈ ಕಲಾಕೃತಿಗಳು ಸಂತಸ, ಆಶಾಕಿರಣ ಹಾಗೂ ಸಕಾರಾತ್ಮಕ ಭಾವನೆಗಳನ್ನು ತಮ್ಮಲ್ಲಿ ಅರಳಿಸಿರುವುದಾಗಿ ಹೇಳುವ ಕಲಾವಿದೆ ಜಯಾ, ಪ್ರತಿಯೊಂದು ಕಲಾಕೃತಿಯೂ ಬದುಕಿನ ಸಂಭ್ರಮವನ್ನು ಎತ್ತಿ ಹಿಡಿಯುವಂಥದ್ದು ಎನ್ನುತ್ತಾರೆ. ಅದು ಕೋತಿಗಳು ಕಂಬಗಳನ್ನು ಹತ್ತುತ್ತಿರುವ ಚಿತ್ರವಿರಲಿ, ಮಕ್ಕಳು ಕಣ್ಣಾಮುಚ್ಚಾಲೆ ಆಡುವ ಚಿತ್ರವಿರಲಿ ಅಥವಾ ದಟ್ಟ ರಂಗಿನಲ್ಲಿ ಅರಳಿದ ಹೂಗಳ ಕಲಾಕೃತಿಯಿರಲಿ ಅಥವಾ ನಿಸರ್ಗದ ಹಸಿರಿನ ರಮಣೀಯತೆ ತೋರಿಸುವ ಪೇಂಟಿಂಗ್ ಇರಲಿ.. ಬದುಕಿನಲ್ಲಿ ಖುಷಿಯನ್ನು ಅರಳಿಸುವುದರಲ್ಲಿ ಸಂಶಯವಿಲ್ಲ.