ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡತೆಗಳ ಮಹಾ ಯಾನ!

Last Updated 13 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ರೈತರಲ್ಲಿ ಆತಂಕ ಹುಟ್ಟಿಸುವುದು ನನ್ನ ಉದ್ದೇಶ ಅಲ್ಲ. ಮೊದಲೇ ಹೇಳಿಬಿಡುತ್ತೇನೆ– ಇತ್ತೀಚಿನ ವರದಿಗಳ ಪ್ರಕಾರ, ಮಹಾರಾಷ್ಟ್ರಕ್ಕೆ ಬಂದಿರುವ ಮಿಡತೆಗಳ ಗುಂಪು ಕರ್ನಾಟಕಕ್ಕೆ ಬರುವ ಸಾಧ್ಯತೆ ಕಡಿಮೆ. ಏಕೆಂದರೆ ಮುಂಗಾರಿನ ಮಾರುತ ಪೂರ್ವ ದಿಕ್ಕಿನತ್ತ ಬೀಸುತ್ತಿದೆ. ಆತಂಕ ದೂರವಾಗಿದ್ದರೂ ಈ ಮಿಡತೆಗಳ ಕುರಿತು ತಿಳಿದುಕೊಳ್ಳುವ ಅಗತ್ಯವಿದೆ. ಇವುಗಳ ಜೀವನಶೈಲಿಯೂ ಕುತೂಹಲಕರ.

ಕಂದುಬಣ್ಣದ ಮಿಡತೆಯನ್ನು ಲ್ಯಾಟಿನ್‌ ಭಾಷೆಯಲ್ಲಿ ’ಲೋಕಸ್ ಅಸೆಟಸ್‌‘ ಎನ್ನುತ್ತಾರೆ. ಇದು ಇಂಗ್ಲಿಷ್‌ನಲ್ಲಿ ಲೋಕಸ್ಟ್‌ ಎಂದಾಗಿದೆ. ಕನ್ನಡದಲ್ಲಿ ಅರ್ಥ ’ಸುಟ್ಟ ಜಾಗ‘! ಈ ಪ್ರಬೇಧದ ಮಿಡತೆಗಳು ಹೊಲದಲ್ಲಿರುವ ಹಸಿರನ್ನು ಲವಲೇಶವೂ ಬಿಡದೆ ತಿನ್ನುವುದರಿಂದ ಇಡೀ ಹೊಲ ಮರುಭೂಮಿಯಂತೆ ಕಾಣಿಸುತ್ತದೆ.

ಲಕ್ಷಗಟ್ಟಳೆ ಸಂಖ್ಯೆಯಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆ ಹೊರಡುವ ಈ ಮಿಡತೆಗಳ ಗುಂಪು, ದಾರಿಯಲ್ಲಿ ಸಿಗುವ ಯಾವ ಹಸಿರನ್ನೂ ಉಳಿಸುವುದಿಲ್ಲ.ಪೂರ್ವ ಪ್ರದೇಶಗಳಲ್ಲಿ ಈ ಮಿಡತೆಯು ಇರಾನ್, ಪಾಕಿಸ್ತಾನ ಮತ್ತು ಭಾರತ ದೇಶಗಳಲ್ಲಿ ವಲಸೆ ದಾರಿಯನ್ನು ಹೊಂದಿವೆ. ಭಾರತ ಮತ್ತು ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಮುಂಗಾರು ಮಳೆಯ ವೇಳೆ ಗುಂಪು ಗುಂಪಾಗಿ ವಂಶಾಭಿವೃದ್ದಿಯನ್ನು ಹೊಂದುತ್ತವೆ. ಜುಲೈ ತಿಂಗಳ ಹೊತ್ತಿಗೆ ಇವುಗಳ ವಲಸೆ ಶುರುವಾಗುತ್ತದೆ. ಆಗಸ್ಟ್ ತಿಂಗಳ ಬಳಿಕ ಇವು ಪಶ್ಚಿಮ ಇರಾನ್ ಮತ್ತು ಪೂರ್ವ ಅರೇಬಿಯಾದವರೆಗೂ ವಲಸೆ ಹೋಗುತ್ತವೆ.

ಮೋಡದ ಅಲೆಯಂತೆ ದಾಳಿಯಿಡುವ ಲಕ್ಷಾಂತರ ಮಿಡತೆಗಳ ಗುಂಪು ಒಂದು ದಿನಕ್ಕೆ 150 ಕಿ.ಮೀ.ವರೆಗೂ ಹಾರಾಟ ನಡೆಸಬಹುದು. ಗಂಟೆಗೆ 12ರಿಂದ 15 ಕಿ.ಮೀ. ವೇಗದಲ್ಲಿ ಇವು ಸಂಚರಿಸುತ್ತವೆ. ಈ ಸಣ್ಣ ಕೀಟ ಪ್ರತಿದಿನ ಎಷ್ಟು ಆಹಾರ ತಿನ್ನಬಹುದು? ಹೆಚ್ಚೆಂದರೆ ಒಂದು ಮಿಡತೆ ಪ್ರತಿದಿನ 1 ರಿಂದ 2 ಗ್ರಾಂ ಆಹಾರ ತಿನ್ನುತ್ತದೆ. ಆದರೆ ಒಂದು ಚದರ ಕಿ.ಮೀ ವಿಸ್ತಾರದಲ್ಲಿ ಸುಮಾರು 4 ಕೋಟಿಯಷ್ಟು ಮಿಡತೆಗಳು ಸೇರಿದರೆ, ಪ್ರತಿದಿನ 35,000 ಜನರು ತಿನ್ನುವಷ್ಟು ಆಹಾರ ಅದಕ್ಕೆ ಬೇಕು!

ಪ್ರಯಾಗರಾಜ್‌ ಬಳಿ ಮಿಡತೆಗಳನ್ನು ಓಡಿಸಲು ಯತ್ನಿಸುತ್ತಿರುವ ಬಾಲಕ. (ಪಿಟಿಐ ಚಿತ್ರ)

ಜಗತ್ತಿನಾದ್ಯಂತ ಮಿಡತೆಗಳಲ್ಲಿ ಹತ್ತು ಪ್ರಬೇಧಗಳಿವೆ. ಭಾರತದಲ್ಲಿ ಕಾಣಸಿಗುವುದು ನಾಲ್ಕು ಪ್ರಬೇಧಗಳು. ಬಾಂಬೆ ಲೋಕಸ್ಟ್‌ (ನೋಮಾಡಕ್ರಿಸ್‌ ಸಕ್ಸಿಂಕ್ಟ್‌), ಮೈಗ್ರೋಟರಿ ಲೋಕಸ್ಟ್‌ (ಮೈಗ್ರೊಟೋರಿಯಾ), ಡೆಸರ್ಟ್‌ ಲೋಕಸ್ಟ್‌ (ಸಿಸ್ಟೋಸರ್‌ ಗ್ರೆಗೇರಿಯಾ) ಮತ್ತು ಮರದ ಲೋಕಸ್ಟ್‌ (ಅನಾಕ್ರಿಡಿಯಂ ಸ್ಪ್ಟಸಿಸ್‌). ಇವುಗಳಲ್ಲಿ ಮರುಭೂಮಿಯ ಡೆಸರ್ಟ್‌ ಮಿಡತೆಗಳು ಮಾಡುವ ಹಾನಿ ಅಪಾರ.

ಲೋಕಸ್ಟ್ ಮಿಡತೆಗಳ ಮೇಲೆ ಅಪಾರ ಸಂಶೋಧನಾ ಅನುಭವವುಳ್ಳ ಮೂವರು ವ್ಯಕ್ತಿಗಳನ್ನು ಇಲ್ಲಿ ಸ್ಮರಿಸಬೇಕು. ಈ ಮೂವರೆಂದರೆ ಫ್ರಾನ್ಸಿಸ್‌ ಬುಚನನ್, ರಾಮಚಂದ್ರ ರಾವ್ ಮತ್ತು ಯುವರೋವ್.

ಪ್ರಾನ್ಸಿಸ್ ಬುಚನನ್ ಎಡಿನ್‌ಬರ್ಗ್‌ನವರು. ಸಹಾಯಕ ಶಸ್ತ್ರಚಿಕಿತ್ಸಕರಾಗಿದ್ದ ಅವರು ಈಸ್ಟ್ ಇಂಡಿಯಾ ಕಂಪನಿಯ ಕಾರ್ಯನಿಮಿತ್ತ 1794ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ನೈಸರ್ಗಿಕ ಇತಿಹಾಸ ಮಾದರಿಗಳನ್ನು ಸಂಗ್ರಹಿಸುವ ಅಭ್ಯಾಸ ನಡೆಸಿದ್ದರು. ’ಮದ್ರಾಸ್‌ನಿಂದಮೈಸೂರು, ಕೆನರಾ ಮತ್ತು ಮಲಬಾರ್ ಪ್ರಾಂತ್ಯದ ದೇಶದಲ್ಲಿನ ಪ್ರವಾಸ‘ ಎಂಬ ಮೂರು ಸಂಪುಟಗಳ ಅವರ ಪುಸ್ತಕದಲ್ಲಿ (1805–1807) ಸಂಶೋಧನೆಯ ವಿವರಗಳಿವೆ. 1897ರಲ್ಲಿ ಲೇವಿಸ್ ರೈಸ್ ಅವರು ಸರ್ಕಾರದ ಸಲುವಾಗಿ ಗೆಜೆಟಿಯರ್‌ ಕ್ರೋಢೀಕರಿಸಿದಾಗ, ಅದರಲ್ಲಿ ಲೋಕಸ್ಟ್ ಮಿಡತೆಗಳ ದಂಡು ಮೇ 16, 1800ರಲ್ಲಿ ಮಂಡ್ಯದ ಹಳ್ಳಿಯೊಂದರ ಮೇಲೆ ಹಾರಾಟ ಮಾಡಿದ ಬಗ್ಗೆ ಬುಚನನ್‌ ಅವರ ಮಾಹಿತಿಯನ್ನು ನಮೂಸಿದ್ದಾರೆ. ಈ ಮಿಡತೆ ದಂಡಿನ ಹಾರಾಟ 100 ಅಡಿ ಅಗಲ ಮತ್ತು ಮೂರು ಮೈಲಿ ಉದ್ದವಿದ್ದು 50 ಅಡಿ ಎತ್ತರದಲ್ಲಿ ಹಾರಾಟ ನಡೆಸಿತು ಎನ್ನುವುದು ಮಾಹಿತಿ. ಈ ಕೀಟರಾಶಿ ಪಶ್ಚಿಮದಿಂದ ಪೂರ್ವ ದಿಕ್ಕಿನತ್ತ 6 ರಿಂದ 7 ಮೈಲಿ ವೇಗವಾಗಿ ಗಾಳಿಯ ದಿಕ್ಕಿನಲ್ಲಿ ಹಾರಾಟ ಮಾಡಿದ್ದನ್ನು ಅವರು ದಾಖಲಿಸಿದ್ದಾರೆ.

’ಈ ಮಿಡತೆಗಳು ನೆಲದ ಮೇಲೆ, ಪ್ರತಿ ಗಿಡದ ಮೇಲೆ ಮತ್ತು ಪೊದೆಗಳ ಪೂರ್ತಿ ಆವರಿಸಿಕೊಂಡಿದ್ದರೂ, ಒಂದೇ ಒಂದು ಮಿಡತೆಯೂ ಒಂದೇ ಜಾಗದಲ್ಲಿ ಹೆಚ್ಚು ಸಮಯ ಕುಳಿತುಕೊಂಡಿಲ್ಲ. ಭಾರೀ ಸಂಖ್ಯೆಯ ಮಿಡತೆಯ ಹಾರಾಟದ ಶಬ್ದವು ಜಲಪಾತದ ಶಬ್ದವನ್ನು ಹೋಲುವಂತಿತ್ತು. ದೂರದಿಂದ ಕೆಂಪು ಮೋಡದಂತೆ ಕಾಣಿಸುತ್ತಿತ್ತು. ಮನುಷ್ಯನ ಬೆರಳಿನಷ್ಟು ದೊಡ್ಡದಾಗಿದ್ದ ಇವು ಕೆಂಪು ಬಣ್ಣದಿಂದ ಕೂಡಿದ್ದವು‘ ಎನ್ನುವುದು ಬುಚನನ್‌ ಅವರ ಸಂಶೋಧನೆ.

ಬೋರಿಸ್ ಯುವರೋವ್ (1921) ಮರುಭೂಮಿ ಮಿಡತೆಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿದ್ದು, ಹಲವು ಭಾರಿ ಅಂತರರಾಷ್ಟೀಯ ಮಿಡತೆ ಸಮ್ಮೇಳನಗಳಲ್ಲಿ ಭಾಗವಹಿಸಿದವರು. ಮಹತ್ತರ ಸಂಶೋಧನೆಯ ಕೀರ್ತಿ ಅವರದ್ದು. ಮಿಡತೆಗಳಲ್ಲಿ ಹಾನಿ ಮಾಡಲಾರದ (ಡಾನಿಕಾ) ಮತ್ತು ಹಾನಿ ಮಾಡುವ (ಮೈಗ್ರೊಟೊರಿಯಾ) ಎರಡು ಉಪ ಪ್ರಬೇಧಗಳಿವೆ ಎಂದು ಹಿಂದಿನ ಸಂಶೋಧಕರು ತಿಳಿದಿದ್ದರು. ಆದರೆ ಯುವರೋವ್‍ರವರ ಸಂಶೋಧನೆಯಿಂದ ಮೊಟ್ಟಮೊದಲ ಬಾರಿಗೆ ಒಂದೇ ಪ್ರಬೇಧದಲ್ಲಿ ಎರಡು (ಸಮೂಹ ಮತ್ತು ಒಬ್ಬಂಟಿಯಾಗಿರುವ) ಹಂತಗಳಿವೆ ಎಂಬ ಅಂಶ ತಿಳಿದುಬಂದಿತು.

ರಾವ್ ಬಹದ್ದೂರ್ ಎಲೆಶೆಟ್ಟಿ ರಾಮಚಂದ್ರರಾವ್‍ರವರು 1930 ರಿಂದ 1933ರ ವರೆಗೆ, ಮಿಡತೆ ಸಂಶೋಧನಾ ಉಪಕೀಟ ಶಾಸ್ತ್ರಜ್ಞರಾಗಿ ಬಲುಚಿಸ್ಥಾನದ ಕ್ವೆಟ್ವಾ ಕೇಂದ್ರದಲ್ಲಿದ್ದರು. ಬಳಿಕ ಕರಾಚಿಯಲ್ಲಿ ಮಿಡತೆ ಕೀಟತಜ್ಞರಾಗಿ 1933 ರಿಂದ 1939ರವರೆಗೆ ಸಂಶೋಧನೆ ನಡೆಸಿದವರು. ಈ ಅನುಭವದ ಹಿನ್ನೆಲೆಯಲ್ಲೇ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆ ಯಲ್ಲಿ ವಿಶೇಷ ಕಾರ್ಯನಿರ್ವಹಣೆಯ ಜವಾಬ್ದಾರಿ ಹೊತ್ತರು. ಇವರ ಸಂಶೋಧನೆಯ ಫಲವಾಗಿ ಮಿಡತೆ ಮುನ್ನೆಚರಿಕಾ ಕೇಂದ್ರಗಳು ಸ್ಥಾಪನೆಯಾದವು. ಇದು ಇತರ ದೇಶಗಳಿಗೂ ಮಾದರಿಯಾಯಿತು.

ಲೋಕಸ್ಟ್ ಪ್ಲೇಗ್
ಸತತ ಎರಡು ವರ್ಷದವರೆಗೆ ಸಂತಾನಾಭಿವೃದ್ಧಿ ಹೊಂದಿ, ಗುಂಪು ಗುಂಪಾಗಿ ವೃದ್ಧಿಯಾಗುವುದರಿಂದ ಬೆಳೆಗಳಿಗೆ ಹಾನಿಯಾಗುವ ಸಮಯವನ್ನು ಪ್ಲೇಗ್ ಸಮಯ ಎಂದು ಕರೆಯುತ್ತಾರೆ. ಈ ಪ್ಲೇಗ್ ಬರುವ ಮುಂಚೆಯೇ ಮಿಡತೆಯ ಹಾರಾಟ ಕಾಣಿಸುತ್ತದೆ. ಭಾರತವು 1800ರಿಂದ 2000ದವರೆಗಿನ ಎರಡು ಶತಮಾನಗಳಲ್ಲಿ ಒಟ್ಟು 12 ಮಿಡತೆಯ ಪ್ಲೇಗ್ ಮಾರಿಯನ್ನು ಕಂಡಿದೆ. ಆದರೆ 1962ರ ಬಳಿಕ ಮಿಡತೆಯ ಪ್ಲೇಗ್ ಸಂತತಿ ಕಂಡುಬಂದಿಲ್ಲ. 1978 ಮತ್ತು 1993ರಲ್ಲಿ ಮಿಡತೆಯ ಸಣ್ಣ ಪ್ರಮಾಣದ ಗುಂಪುಗಳ ಒಳನುಸುಳುವಿಕೆ ಕಂಡುಬಂದಿತ್ತು. ಈ ವರ್ಷ ಪಾಕಿಸ್ತಾನ, ಇರಾನ್ ಮತ್ತು ಭಾರತದಲ್ಲಿ ಲೋಕಸ್ಟ್‌ ಪ್ಲೇಗ್ ನ ಭಯ ಕಂಡುಬಂದಿದೆ.

ಮರುಭೂಮಿಯ ಮಿಡತೆಗಳು ಪಶ್ಚಿಮ ಆಫ್ರಿಕಾದಿಂದ ಅಸ್ಸಾಂವರೆಗೂ ವಲಸೆ ಬರುತ್ತವೆ. ಪಶ್ಚಿಮ ಮತ್ತು ಉತ್ತರ ಆಫ್ರಿಕಾ ಪ್ರದೇಶದಿಂದ ಪೂರ್ವ ಆಫ್ರಿಕಾ ಮತ್ತು ಮಧ್ಯಪೂರ್ವ ದೇಶಗಳಿಂದ ಟರ್ಕಿ ದೇಶದವರೆಗೂ ಈ ಕೀಟಗಳ ವಲಸೆ ಹಾದಿಯಿದೆ. ಬೇಸಿಗೆ ಅಥವಾ ಚಳಿಗಾಲದಲ್ಲಿ ಇವು ವಂಶಾಭಿವೃದ್ಧಿ ಹೊಂದುವುದರಿಂದ ವಿವಿಧ ಮಳೆಯಾಶ್ರಿತ ಪ್ರದೇಶಗಳಲ್ಲಿ ವಲಸೆಯ ಸಮಯ ವಿಭಿನ್ನವಾಗಿದೆ.

ಬೊಗಸೆ ತುಂಬಾ ಮಿಡತೆ! (ಪಿಟಿಐ ಚಿತ್ರ)

ಜೀವನಶೈಲಿ
ಲೋಕಸ್ಟ್ ಮಿಡತೆಯು ಎರಡು ವಲಸೆ ಹಂತಗಳನ್ನು ಹೊಂದಿದೆ. ಒಬ್ಬಂಟಿಯಾಗಿರುವ ಹಂತ ಮತ್ತು ಸಮೂಹದಲ್ಲಿ ಇರುವ ಹಂತ. ಒಬ್ಬಂಟಿ ಹಂತದಲ್ಲಿ ಮರಿಕೀಟ ಹಸಿರು ಬಣ್ಣ ಹೊಂದಿದ್ದರೆ, ಪ್ರೌಢ ಕೀಟ ಕಂದು ಅಥವಾ ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಸಮೂಹ ಹಂತದಲ್ಲಿ ಮಿಡತೆಗಳದ್ದು ಹಳದಿ ಬಣ್ಣ.

ಮೊಟ್ಟೆ, ಮರಿಹುಳು (ಅಪ್ಸರೆ) ಮತ್ತು ಪ್ರೌಢ ಹೀಗೆ ಮೂರು ಹಂತಗಳ ಬೆಳವಣಿಗೆ. ಗಂಡು– ಹೆಣ್ಣು ಬೆರೆತು ಎರಡು ದಿನಗಳ ಬಳಿಕ ಮೊಟ್ಟೆ ಇಡಲಾರಂಭಿಸುತ್ತವೆ. ಒಂದು ಹೆಣ್ಣು ಮಿಡತೆ 3 ರಿಂದ 4 ಗೂಡುಗಳ ಮೊಟ್ಟೆಗಳನ್ನು ತೇವಾಂಶದಿಂದ ಕೂಡಿದ 8- 10 ಸೆಂ.ಮೀ. ಆಳದ ಮರಳಿನಲ್ಲಿ ಇಡುತ್ತದೆ. ಮೊಟ್ಟೆಗಳು ಅಕ್ಕಿ ಕಾಳಿನಂತಿದ್ದು, ಬಾಳೆಹಣ್ಣಿನ ಸಣ್ಣ ಚಿಪ್ಪಿನ ತರಹ ಗೋಚರಿಸುತ್ತದೆ.

ಹೆಣ್ಣು ಮಿಡತೆಯು ಜೀವಿತಾವಧಿಯಲ್ಲಿ ಒಂದು ವಾರದ ಅಂತರದಲ್ಲಿ ಮೂರು ಬಾರಿ ಮೊಟ್ಟೆ ಇಡುತ್ತದೆ. ಸಾಮಾನ್ಯವಾಗಿ ವಲಸೆ ಮಿಡತೆಯು 2 ರಿಂದ 3 ಮೊಟ್ಟೆ ಗೂಡುಗಳಲ್ಲಿ ಸರಾಸರಿ 60- 80 ಮೊಟ್ಟೆಗಳನ್ನಿಡುತ್ತದೆ. ಒಬ್ಬಂಟಿಯಾಗಿರುವ ಮಿಡತೆಗಳು 3 ರಿಂದ 4 ಸಲ, ಸರಾಸರಿ 150-200 ಮೊಟ್ಟೆಗಳನ್ನು ಇಡುತ್ತವೆ. ಬೇಸಿಗೆಯಲ್ಲಿ ಎರಡು ವಾರದಲ್ಲಿ ಮತ್ತು ಚಳಿಗಾಲದಲ್ಲಿ 3- 4 ವಾರದಲ್ಲಿ ಮೊಟ್ಟೆಯೊಡೆದು ಮರಿ ಮಿಡತೆಗಳು ಮಣ್ಣಿನ ಮೇಲ್ಪದರಕ್ಕೆ ಬರುತ್ತವೆ.

ಪ್ರತಿವರ್ಷ ಮಿಡತೆ ಹಾವಳಿಯ ಸಮಯದಲ್ಲಿ ರಾಜಸ್ತಾನ ಮತ್ತು ಗುಜರಾತ್‍ನ ಗಡಿಯಲ್ಲಿ 8 ರಿಂದ 10 ಪಟ್ಟು ಹೆಚ್ಚು ಸಂಖ್ಯೆಯ ಮಿಡತೆಗಳು ಕಾಣಿಸುತ್ತಿದ್ದವು. ಆದರೆ 2019ರಲ್ಲಿ ಮಿಡತೆಗಳ ಸಂಖ್ಯೆ 200ಪಟ್ಟು ಹೆಚ್ಚಾಗಿತ್ತು. ಕಳೆದ ವರ್ಷ ರಾಜಸ್ತಾನಕ್ಕೆ ಮೇ ತಿಂಗಳಲ್ಲಿ ಮುಂಗಾರು ಆಗಮಿಸಿದ್ದು ಮಿಡತೆ ದಂಡು ವಂಶಾಭಿವೃದ್ಧಿಯಾಗಿದೆ. ಸೆಪ್ಟೆಂಬರ್‌ನಲ್ಲಿ ಮುಗಿಯಬೇಕಿದ್ದ ಮಳೆಯು ನವೆಂಬರ್ ವರೆಗೂ ಮುಂದುವರೆದಿದ್ದರಿಂದ ವಂಶಾಭಿವೃದ್ಧಿಯೂ ಹೆಚ್ಚಿತು. ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಿಡತೆ ಹಾವಳಿಯಿಂದ ಗುಜರಾತ್‌ನಲ್ಲಿ ಸುಮಾರು 25,000 ಹೆಕ್ಟೇರ್‌ನಷ್ಟು ಬೆಳೆ ಹಾಳಾಗಿದೆ. ಈ ವರ್ಷ ರಾಜಸ್ತಾನದ 18 ಜಿಲ್ಲೆಗಳು, ಮಧ್ಯಪ್ರದೇಶದ 12 ಜಿಲ್ಲೆಗಳು ಮತ್ತು ಉತ್ತರಪ್ರದೇಶ, ಪಂಜಾಬ್, ಹರಿಯಾಣ ಮತ್ತು ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಬೆಳೆಹಾನಿಯ ಭೀತಿ ಉಂಟಾಗಿದೆ.

ನಿಯಂತ್ರಣ ಹೇಗೆ?
ಮಿಡತೆಗಳ ನಿಯಂತ್ರಣಕ್ಕೆ ಹಲವು ಕ್ರಮಗಳಿವೆ.ಮೊಟ್ಟೆ ಇಟ್ಟಂತಹ ಪದರಿನ ಪ್ರದೇಶಗಳಲ್ಲಿ ಉಳುಮೆ, ಅಗೆಯುವುದು ಅಥವಾ ಕುಂಟೆ ಹಾಯಿಸುವ ಮುಖಾಂತರ ಮೊಟ್ಟೆಗಳನ್ನು ನಾಶಪಡಿಸಬಹುದು.ಪೊದೆಗಳಲ್ಲಿ ಗುಂಪು ಗುಂಪಾಗಿರುವ ಮಿಡತೆಗಳನ್ನು ಬೆಂಕಿ ಉಗುಳುವ ಉಪಕರಣಗಳಿಂದ ಸುಟ್ಟು ಹಾಕಬಹುದು. ಕೀಟನಾಶಕಗಳೂ ಸಿಗುತ್ತವೆ. ಮಿಡತೆಗಳವಿಶ್ರಾಂತಿಯ ಅವಧಿ ಕಡಿಮೆ; ಬೆಳಿಗ್ಗೆಯ ಮೊದಲ ಜಾವದಲ್ಲೇ ಗುಂಪಾಗಿ ವಲಸೆ ಹೊರಡುತ್ತವೆ. ಬೆಳಗಾಗುವುದರೊಳಗೆ ನಾಶ ಮಾಡುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT