ಅಭಿನವ ಪ್ರಕಾಶನಕ್ಕೆ 25 ವರ್ಷ ತುಂಬಿದ ಸಂದರ್ಭದಲ್ಲಿ ‘ಬೆಳ್ಳಿ ಬೆಗಡು ಮಾಲಿಕೆ’ಯಡಿ ಹೊರತಂದ ಹತ್ತನೆಯ ಕೃತಿ ಇದು. ಲೇಖಕರು ಕಳೆದ ಹತ್ತು ವರ್ಷಗಳಿಂದ ಸಾರ್ವಜನಿಕ ಮಹತ್ವದ ವ್ಯಕ್ತಿಗಳ ಜತೆ ನಡೆಸಿದ ಮಾತುಕತೆಯ ಸಂಪುಟವಿದು. ಇದರಲ್ಲಿರುವ ಮಹತ್ವದ ವ್ಯಕ್ತಿಗಳ ಪೈಕಿ ಕುಸುಮಾಕರ ದೇವರಗೆಣ್ಣೂರ, ಜಿ.ಎಸ್. ಶಿವರುದ್ರಪ್ಪ, ಪಿ.ಎಸ್.ಪಾಟೀಲ, ಢೆರೆ, ಅಸಘರಲಿ, ಶಾಂತರಸ, ಕೋ. ಚೆನ್ನಬಸಪ್ಪ ಹಾಗೂ ಎಂ.ಎಂ. ಕಲಬುರ್ಗಿ ಅಗಲಿದ್ದಾರೆ. ಲೇಖಕರು ಹೇಳಿರುವಂತೆಪ್ರತಿ ಮಾತುಕತೆಯೂ ಆಯಾ ವ್ಯಕ್ತಿಯ ವಿಶಿಷ್ಟ ಚಿಂತನೆ, ಸಾಧನೆ ಮತ್ತು ಪರಿಮಿತಿಗಳ ಬಿಂಬವಾಗಿದೆ. ಸಿದ್ಧ ಪ್ರಶ್ನೆಗಳನ್ನು ಕೇಳಿ ಉತ್ತರ ದಾಖಲಿಸುವ ವಿಧಾನಕ್ಕಿಂತ ಅವರು ನೀಡಿದ ಉತ್ತರದೊಳಗಿನಿಂದಲೇ ಹೊಸ ಪ್ರಶ್ನೆ ಹುಟ್ಟಿಸಿ ಮಾತುಕತೆಯನ್ನು ಬಳ್ಳಿಯಂತೆ ಬೆಳೆಸಿರುವುದು ಓದಿನ ಓಘಕ್ಕೆ ಹಿತವೆನಿಸುತ್ತದೆ. ದಾರ್ಶನಿಕ ಗ್ರಹಿಕೆ, ಜ್ಞಾನಶಾಸ್ತ್ರ, ಸಾಹಿತ್ಯ, ನಾಗರಿಕತೆ ಹಾಗೂ ಮನುಕಲ ಕುರಿತ ಚಾಚು, ಅಷ್ಟೇ ಏಕೆ, ರಾಜಕಾರಣದ ಚರ್ಚೆ, ಸಾಮಾಜಿಕ ಚಿಂತನೆ, ಭಾಷೆ ಮತ್ತು ಕಲಾ ಮೀಮಾಂಸೆಯ ಹೊಳವುಗಳು ಓದಿಗೆ ದಕ್ಕುತ್ತವೆ.