‘ದಲಿತ ಅನುಭವವನ್ನು ಅವರಷ್ಟು ಅಧಿಕೃತವಾಗಿ, ದಟ್ಟವಾಗಿ ಚಿತ್ರಿಸಿದವರು ಆಧುನಿಕ ಕನ್ನಡ ಸಾಹಿತ್ಯದಲ್ಲಿ ತೀರ ವಿರಳ’ ಎಂದು ಅಶೋಕ ಅವರು ಒಂದೆಡೆ ಬರೆದಿದ್ದಾರೆ. ಈ ಪುಸ್ತಕದಲ್ಲಿ ಅಶೋಕ ಅವರು ದೇವನೂರರ ಸಾಹಿತ್ಯವನ್ನು ಮಾತ್ರ ವಿಮರ್ಶಿಸಿಲ್ಲ. ಶಿವರಾಮ ಕಾರಂತರ ‘ಚೋಮನ ದುಡಿ‘, ಮುಲ್ಕ್ ರಾಜ್ ಆನಂದ ಅವರ ‘Untouchable’ (ಅಸ್ಪೃಶ್ಯ) ಕಾದಂಬರಿಯನ್ನೂ ಚಿಕ್ಕದಾಗಿ ವಿಮರ್ಶಿಸಿದ್ದಾರೆ. ಅಸ್ಪೃಶ್ಯತೆಯ ಸಮಸ್ಯೆ, ಅದರ ಸಾಮಾಜಿಕ ಆಯಾಮಗಳ ಬಗ್ಗೆ ಭಾರತದ ಇಂಗ್ಲಿಷ್ ಲೇಖಕರು ಬರೆದ ಅತ್ಯಂತ ಮಹತ್ವದ ಕೃತಿಗಳಲ್ಲಿ ‘ಅಸ್ಪಶ್ಯ’ ಕೂಡ ಒಂದು ಎಂದು ಹಲವು ವಿಮರ್ಶಕರು ಗುರುತಿಸಿದ್ದಾರೆ. ಹಾಗಾಗಿ, ಈ ಕಾದಂಬರಿಯ ವಿಮರ್ಶೆಯನ್ನು ಕನ್ನಡದಲ್ಲಿ ಲಭ್ಯವಾಗಿಸಿರುವುದು ಅಶೋಕ ಅವರ ಪುಸ್ತಕದಲ್ಲಿ ಗುರುತಿಸಲೇಬೇಕಾದ ಅಂಶ.