ಈ ಕೃತಿಯಲ್ಲಿ ರಂಗನಾಥ ಭಟ್ ಅವರು ತಮ್ಮ ಕಲಾಜೀವನ ಹಾಗೂ ಅಲ್ಲಿ ನಡೆದ ಘಟನೆಗಳನ್ನಷ್ಟೇ ವಾಚಕರ ಮುಂದೆ ತೆರೆದಿಟ್ಟಿಲ್ಲ. ಜೊತೆಗೆ, ಹದಿಮೂರರ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾವು ಹಾಗೂ ತಮ್ಮ ಕುಟುಂಬ ಎದುರಿಸಿದ ಸಂಕಷ್ಟ, ಪಿಟೀಲು ವಾದಕರಾಗಿದ್ದ ಶಿವಪ್ಪ ಶಾನುಭೋಗರ ಮೂಲಕ ರಂಗಪ್ರವೇಶಿಸಿದ ಘಟನೆ, ‘ಮೈಸೂರು ಪ್ರಾಂತ್ಯದ ಲಂಡನ್’ ತೀರ್ಥಹಳ್ಳಿಯಲ್ಲಿ ಹರಿಶ್ಚಂದ್ರ ಪಾತ್ರಕ್ಕೆ ಸಿಕ್ಕಿದ ಮನ್ನಣೆ, ಅಂದಿನ ಕಾಂಗ್ರೆಸ್ ಸರ್ಕಾರ ತನಗೆ ನೀಡಿದ ನಿವೃತ್ತಿ ವೇತನದ ಬಗೆಗಿನ ಅಸಮಾಧಾನ, ಕರ್ನಾಟಕದಲ್ಲಿ ನಿವೃತ್ತ ಕಲಾವಿದರನ್ನು ಸರ್ಕಾರ ಹೇಗೆ ನೋಡಿಕೊಳ್ಳುತ್ತಿತ್ತು ಎನ್ನುವುದರ ಬಗ್ಗೆಯೂ ರಂಗನಾಥ ಭಟ್ಟರು ಓದುಗರ ಮುಂದಿರಿಸಿದ್ದಾರೆ. ಮರುಮುದ್ರಣದ ಸಮಯದಲ್ಲೂ ಮೂಲ ಕೃತಿಯಲ್ಲಿ ರಂಗನಾಥ ಭಟ್ ಅವರು ಬಳಸಿದ್ದ ಗ್ರಾಮೀಣ ಭಾಷೆಯ ಸೊಗಡನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.