ಹೀಗೆನ್ನುತ್ತಾ ‘ಗಾಂಧಿಯ ಹೊಸ ಕನ್ನಡಕ’ ದೇಶದ ಪ್ರಸಕ್ತ ಸ್ಥಿತಿಯನ್ನು, ಅಭಿವೃದ್ಧಿಯ ತಾರತಮ್ಯವನ್ನು ವಿವರಿಸುವ ಪ್ರಯತ್ನವಾಗಿದೆ. ಹೀಗಾಗಿಯೇ ಇಲ್ಲಿನ ಕವಿತೆಗಳು ಆರೋಗ್ಯಕರವಾದ ಚರ್ಚೆಗೆ ಒಳಗಾಗಗಲಿ ಎನ್ನುತ್ತಾರೆ ಬೆನ್ನುಡಿ ಬರೆದ ಕವಯತ್ರಿ ಎಚ್.ಎಲ್.ಪುಷ್ಪ. ರೈತರ ಜೀವನ, ಸಂಕಷ್ಟ, ಆತ್ಮಹತ್ಯೆಯನ್ನು ಪ್ರಶ್ನಿಸುತ್ತಾ ಸಾಗುವ ‘ಜಗದ ಕಣಜ’ ಕವನ ರೈತನ ಜೀವನ ಸುಭದ್ರವಾಗಲಿ ಎನ್ನುವ ಆಶಯ ಹೊತ್ತಿದೆ. ನಗರೀಕರಣ, ತಂತ್ರಜ್ಞಾನದ ಹಸಿವನ್ನು ಪ್ರಶ್ನಿಸುವ ‘ಹಟ್ಟಿ ಮತ್ತು ಆತ್ಮ’ ಆರ್ಥಿಕ ಸ್ಥಿತ್ಯಂತರದ ಪರಿಣಾಮಗಳನ್ನು ನಿರೂಪಿಸಿದೆ. ಇಲ್ಲಿನ ಪದ್ಯಗಂಧಿ ಭಾಷೆ ಗಮನಸೆಳೆಯುತ್ತದೆ. ಕವಿತೆ ಕಟ್ಟುವಲ್ಲಿ ರೂಪಕಗಳ ಧಾರಾಳ ಬಳಕೆಯನ್ನು ಇಲ್ಲಿ ಕಾಣಬಹುದು. ವೈಯಕ್ತಿಕ ಯೋಚನೆಗಳಿಂದ ಹಿಡಿದು ಸಾಮಾಜಿಕ ಸ್ವರೂಪದ ರಚನೆಗಳು ಇಲ್ಲಿ ಅಡಕವಾಗಿದೆ. ‘ಕೃತಿಯ ಶೀರ್ಷಿಕೆ ಇಲ್ಲಿನ ಬಹುಪಾಲು ಕವಿತೆಗಳ ವಸ್ತುವಿನ್ಯಾಸವನ್ನು ಪ್ರತಿನಿಧೀಕರಿಸುತ್ತದೆ’ ಎನ್ನುತ್ತಾರೆ ಮುನ್ನುಡಿ ಬರೆದ ಬರಗೂರು ರಾಮಚಂದ್ರಪ್ಪ.